ಕಾರವಾರ (ಮಾ. 24): ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ನದಿ ಜೋಡಣೆಯ ಸುದ್ದಿ ಕಾವೇರುತ್ತಿದೆ. ಒಂದೆಡೆ ಜಿಲ್ಲೆಯ ನದಿ ನೀರು ಬತ್ತುವ ಆತಂಕ ಎದುರಾದರೆ, ಮತ್ತೊಂದೆರಡ ಜಿಲ್ಲೆಯ ಜೀವ ನದಿಗಳಾದ ಬೇಡ್ತಿ ಮತ್ತು ಅಘನಾಶಿನಿ ನದಿಯನ್ನ ವರದೆಗೆ ಜೋಡಣೆಗೆ ಸರ್ಕಾರ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರದ ಈ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಆದಿಯಾಗಿ ಇವತ್ತು ಸೋಂದಾ ಮಠದ ಸ್ವರ್ಣವಲ್ಲಿ ಶ್ರೀ ಗಂಗಾದರೇಂದ್ರ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಜಿಲ್ಲೆಯ ಜನ ಸರ್ಕಾರಕ್ಕೆ ವಿರೋಧದ ಅಲೆಯ ಸುದ್ದಿ ರವಾನಿಸಿದ್ದಾರೆ. ಜಿಲ್ಲೆಯ ಶಿರಸಿಯಲ್ಲಿ ಸರಕಾರದ ನದಿ ಜೋಡಣೆ ಯೋಜನೆಯ ವಿರೋಧಿಸಿ ಹಮ್ಮಿಕೊಂಡ ಸಭೆಯಲ್ಲಿ ಸ್ವರ್ಣವಲ್ಲಿ ಶ್ರೀ ಗಳು ನದಿ ಜೋಡಣೆಗೆ ಸುತಾರಂ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಮಂತ್ರಿ ಜತೆ ನಿಯೋಗ ಕರೆದುಕೊಂಡು ಹೋಗಿ ನದಿ ಜೋಡಣೆ ಆದರೆ ಜಿಲ್ಲೆಯಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂದು ಶ್ರೀಗಳು ಆಗ್ರಹಿಸಿದರು. ಒಂದು ವೇಳೆ ಸರಕಾರ ವೈಜ್ಞಾನಿಕ ಸಮಸ್ಯೆ ಅರಿಯದೆ ನದಿ ಜೋಡಣೆ ಮುಂದುವರೆಸಿದ್ದೆ ಹೋರಾಟ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ನೀಡಿದರು.
ಕಳೆದ ಎಂಟು ವರ್ಷದಿಂದ ಬೇಸಿಕೆಯಲ್ಲಿ ಬೆಡ್ತಿ ನದಿ ಬತ್ತುತ್ತಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನದಿಯಲ್ಲಿ ನೀರೆ ಇರುವುದಿಲ್ಲ. ಈ ನದಿಯನ್ನ ವರದೆಗೆ ಜೋಡಣೆ ಮಾಡುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಕೂಗು ಜೋರಾಗುತ್ತಿದೆ.
ಏನಿದು ನದಿ ಜೋಡಣೆ ಯೋಜನೆ?
ಬೇಡ್ತಿ ಮತ್ತು ವರದಾ ನದಿಗಳಲ್ಲಿ ಹರಿದು ಸಮುದ್ರ ಸೇರುವ ಸುಮಾರು 22ಟಿ.ಎಮ್.ಸಿ ನೀರನ್ನು ಉತ್ತರ ಕರ್ನಾಟಕ ಭಾಗದ ಹಾವೇರಿ, ಗದಗ, ಸಿಂಧನೂರು, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕೊಂಡೊಯ್ಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯ ನಿಖರವಾದ ಸ್ವರೂಪದ ಬಗ್ಗೆ ವಿವರವಾದ ವರದಿ ಸಲ್ಲಿಕೆ ಆದ ಬಳಿಕ ಯೋಜನೆ ಹೇಗಿರಲಿದೆ ಎನ್ನೋದು ಗೊತ್ತಾಗಲಿದೆ...
ಆತಂಕದ ಕಾರ್ಮೋಡ
ಬೇಸಿಗೆ ಬಂತು ಎಂದರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ನದಿಗಳಲ್ಲಿ ನೀರಿನ ಹಾಹಾಕಾರ ಕಾಡುತ್ತದೆ. ಬಿಸಿಲಿನ ತಾಪಕ್ಕೆ ನದಿ ಮೂಲಗಳು ಬತ್ತಿ ಬರಡಾಗುತ್ತವೆ. ಹೀಗಿರುವಾಗ ಬೇಡ್ತಿ ನದಿ ಪರಿಸ್ಥಿತಿ ಕೂಡಾ ಭಿನ್ನವಾಗಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಬೇಡ್ತಿ ನದಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಬತ್ತಿ ಹೋಗುತ್ತದೆ. ಬತ್ತಿ ಹೋಗುವ ನದಿಯನ್ನು ವರದಾ ನದಿಗೆ ಜೋಡಣೆ ಮಾಡುವುದು ಅವೈಜ್ಞಾನಿಕ ಯೋಜನೆ. ಈ ಮೂಲಕ ಜಿಲ್ಲೆಯ ಜನರ ನೆಮ್ಮದಿ ಕೆಡಿಸುತ್ತಿದ್ದಾರೆ ಎಂದು ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಸರ್ಕಾರದಿಂದ ಮತ್ತಷ್ಟು ಕಠಿಣ ಕ್ರಮ; ನಿಯಮ ಮೀರಿದರೆ ಭಾರೀ ದಂಡ
ಜಿಲ್ಲೆಯ ಕಾರವಾರದಿಂದ ಭಟ್ಕಳದವರೆಗೂ ಉಪ್ಪು ನೀರಿನ ಸಮಸ್ಯೆ ಇದೆ. ಸಮುದ್ರ ತೀರದಿಂದ ಹತ್ತಾರು ಕಿ.ಮೀ ದೂರದ ವರೆಗೂ ನೀರು ಉಪ್ಪು ಉಪ್ಪು ಆಗಿರುತ್ತದೆ ಬೇಸಿಗೆಯಲ್ಲಿ ನದಿ ಮತ್ತು ಬಾವಿಗಳಿಗೆ ಉಪ್ಪು ನೀರು ಸೇರಿಕೊಳ್ಳುತ್ತದೆ. ಜಲರಾಶಿ ಕಣ್ಮುಂದೆ ಕೂಡಾ ಕುಡಿಯಲು ಯೋಗ್ಯ ನೀರಿಲ್ಲದ ಸ್ಥಿತಿ ಇಲ್ಲಿನದು. ಹೀಗಿರುವಾಗ ಸರ್ಕಾರ ಇಂತಹ ಯೋಜನೆಗೆ ಕೈ ಹಾಕಿದ್ದು ಅವೈಜ್ಞಾನಿಕ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಇಲ್ಲ ನದಿಗಳಲ್ಲಿ ಹರಿಯುವ ನೀರನ್ನೇ ಪಂಪ್ ಸೆಟ್ ಗಳ ಮೂಲಕ ಜಮೀನಿಗೆ ಹಾಯಿಸಿ ಕೃಷಿ ಮಾಡುತ್ತಾರೆ. ಇದರಿಂದ ಸಾವಿರಾರು ಮಂದಿ ಬದುಕು ಕಟ್ಟಿ ಕೊಂಡಿದ್ದಾರೆ.
ಈ ಸಂಕಷ್ಟದ ನಡುವೆ ಇಂತ ಬೃಹತ್ ನದಿ ಜೋಡಣೆ ಯೋಜನೆ ಜಾರಿ ಆದರೆ ನೀರಿನ ಕೊರತೆ ಉಂಟಾಗುತ್ತದೆ. ನದಿ ನಂಬಿದ ಜನ ಎಲ್ಲಿ ಹೋಗಬೇಕೆಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಮತ್ತು ಬೇಡ್ತಿ ನದಿಯನ್ನ ವರದಾ ನದಿಗೆ ಜೋಡಣೆ ಮಾಡಿದರೆ ಉತ್ತರ ಕನ್ನಡ ಜಿಲ್ಲೆಯ ಜನರ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಲಿದೆ ಈ ದಿಸೆಯಲ್ಲಿ ಈಗ ಹೋರಾಟ ಚುರುಕಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ