ಕಾರವಾರ(ಜೂ.14): ಸರ್ಕಾರದ ಆದೇಶದಂತೆ ನಾಳೆಯಿಂದ ಮಳೆಗಾಲದ ಹಿನ್ನಲೆಯಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇದ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕಾ ಬೋಟ್ ಬಂದರಿನಲ್ಲಿ ಲಂಗರು ಹಾಕಿವೆ.
ಕರಾವಳಿಯಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇಧ ಅವಧಿ ಪ್ರಾರಂಭವಾಗಲಿದ್ದು ಯಾವುದೇ ಮೀನುಗಾರಿಕಾ ಬೋಟುಗಳೂ ಸಮುದ್ರಕ್ಕೆ ಇಳಿಯುವುದಿಲ್ಲ.
ಮುಂಗಾರು ಪ್ರಾರಂಭವಾದ ಹಿನ್ನಲೆಯಲ್ಲಿ ಜೂನ್ 1 ರಿಂದ ಬಂದ್ ಆಗಬೇಕಾಗಿದ್ದ ಆಳಸಮುದ್ರ ಮೀನುಗಾರಿಕೆಯನ್ನ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಕೊರೊನಾ ಅಟ್ಟಹಾಸ ಹಾಗೂ ಚಂಡಮಾರುತದಿಂದಾಗಿ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದಕ್ಕೇ ಅವಕಾಶ ಸಿಗದಂತಾಗಿದ್ದು, ಮೀನುಗಾರರನ್ನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯ ಮಳೆಗಾಲ ಹಿನ್ನಲೆಯಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಬಾರಿ 46 ದಿನಗಳ ಕಾಲ ಕರಾವಳಿಯಲ್ಲಿ ಮೀನುಗಾರಿಕೆ ಬಂದ್ ಇರಲಿದೆ. ಕೊರೋನಾ ಹಿನ್ನಲೆ ಜೂನ್ 15ರ ವರೆಗೆ ಸರ್ಕಾರ ಮೀನುಗಾರಿಕಾ ಅವಧಿಯನ್ನ ವಿಸ್ತರಣೆ ಮಾಡಿದ್ದು ಇಂದು ಮೀನುಗಾರಿಕೆಗೆ ಕೊನೆಯ ದಿನವಾಗಿದೆ. ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಎರಡು ತಿಂಗಳು ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಯಾರೂ ಕೂಡಾ ಮೀನುಗಳನ್ನ ಹಿಡಿಯುವಂತಿಲ್ಲ.
ಇದನ್ನೂ ಓದಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ; ಮುಂಬೈನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮೀನು ಸಂತತಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ವೈರಸ್ ಆತಂಕ ಕಾರಣದಿಂದಾಗಿ ಮಾರ್ಚ್ ತಿಂಗಳಿನಿಂದಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಸರ್ಕಾರ ಜೂನ್ ತಿಂಗಳಲ್ಲಿ 14 ದಿನಗಳ ಕಾಲ ಮೀನುಗಾರಿಕಾ ಅವಧಿಯನ್ನ ವಿಸ್ತರಣೆ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ್ದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು ಮೀನುಗಾರಿಕೆಯೇ ಇಲ್ಲದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಇನ್ನು ಮಳೆಗಾಲದಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವುದು, ಮೀನುಗಾರರಿಗೆ ರಜೆಯ ಅವಧಿ ಇದ್ದಂತೆ. ಈ ಸಮಯದಲ್ಲಿ ಮೀನುಗಾರರು ಬೋಟುಗಳ ದುರಸ್ಥಿ ಹಾಗೂ ಬಲೆಗಳ ರಿಪೇರಿ ಕಾರ್ಯವನ್ನ ಮಾಡಿಕೊಳ್ಳುತ್ತಾರೆ. ಇದರ ಜೊತೆ ಮಳೆಗಾಲದಲ್ಲಿ ಹೆಚ್ಚು ಮಾರಾಟವಾಗುವ ಒಣಮೀನಿನ ತಯಾರಿಕೆಯಲ್ಲಿ ಕೂಡಾ ಮೀನುಗಾರ ಮಹಿಳೆಯರು ತೊಡಗಿಕೊಳ್ಳುತ್ತಾರೆ. ಆದ್ರೆ ಈ ಬಾರಿ ಕೊರೊನಾ ಸೃಷ್ಟಿಸಿದ ಅವಾಂತರದಿಂದಾಗಿ ಮೀನುಗಾರಿಕಾ ಬೋಟಿನ ಹೊರರಾಜ್ಯದ ಕಾರ್ಮಿಕರು ಮಾರ್ಚ್, ಏಪ್ರಿಲ್ ಅವಧಿಯಲ್ಲೇ ತಮ್ಮ ಊರುಗಳಿಗೆ ತೆರಳಿರುವುದರಿಂದ ಆಳ ಸಮುದ್ರ ಮೀನುಗಾರಿಕೆ ಬಹುತೇಕ ಬಂದ್ ಆಗಿದ್ದು ಮೀನುಗಾರಿಕೆ ಇಲ್ಲದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ಸಾಲವನ್ನಾದರೂ ಮನ್ನಾ ಮಾಡಬೇಕು ಅನ್ನೋದು ಮೀನುಗಾರರ ಅಭಿಪ್ರಾಯವಾಗಿದೆ. ಇದಕ್ಕೆ ಸರಕಾರ ಸ್ಪಂದಿಸತ್ತ ಕಾದುನೋಡಬೇಕು
ಕೊರೋನಾ ಅಟ್ಟಹಾಸದಿಂದಾಗಿ ರಾಜ್ಯದ ಮೀನುಗಾರರೂ ಸಹ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಮೀನುಗಾರಿಕಾ ಅವಧಿ ಪ್ರಾರಂಭದ ಮೊದಲೇ ಸರ್ಕಾರ ಮೀನುಗಾರರ ಸಾಲಮನ್ನಾ ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಮೀನುಗಾರರು ಮೀನುಗಾರಿಕೆ ಪ್ರಾರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ