ಯಲಹಂಕ: ಜನ ಸಾಮಾನ್ಯರು ಇನ್ಮುಂದೆ ಮಳೆ ಸೇರಿದಂತೆ ಹವಾಮಾನ ಮುನ್ಸೂಚನೆ ಪಡೆಯಬಹುದು. "ಮೇಘ ಸಂದೇಶ" ಎಂಬ ವಿನೂತನ ಆ್ಯಪ್ ಮತ್ತು “ವರುಣ ಮಿತ್ರ” ವೆಬ್ ಸೈಟ್ ಉದ್ಘಾಟನೆ ಆಗಿದೆ. ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಮೇಘ ಸಂದೇಶ ಆ್ಯಪ್ ಮತ್ತು ವರುಣಮಿತ್ರ ಜಾಲತಾಣ ಬಿಡುಗಡೆ ಮಾಡಿದರು.
ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು
ಮೇಘ ಸಂದೇಶ ಮೊಬೈಲ್ ಆಪ್ನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ನ ವಿನ್ಯಾಸ, ವೈಶಿಷ್ಟ್ಯ ಹಾಗೂ ಇದರಲ್ಲಿ ಒದಗಿಸಲಾಗುತ್ತಿರುವ ಮಾಹಿತಿಗಳು ಅನನ್ಯ. ಈ ಮಾಹಿತಿಯನ್ನು
www.varunamitra.kar.gov.in ಮೂಲಕವೂ ನೀಡಲಾಗುತ್ತಿದೆ.
ಈಗಾಗಲೇ ರಚಿಸಲಾಗಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಕೋರ್ ಗ್ರೂಪ್ಗಳು, ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಕೋರ್ ಗ್ರೂಪ್, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಮಾಹಿತಿ ಆಧರಿಸಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಹಾಗೂ ಸಂಭವನೀಯ ಹಾನಿಯನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ಸೂಚನೆ ನೀಡಲಾಗುತ್ತಿದೆ.
ಆ್ಯಪ್ನ ಮೂಲಕ ನೀಡಲಾಗುತ್ತಿರುವ ಮಾಹಿತಿಯು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿ ಕಾರ್ಯಗತಗೊಳಿಸಿರುವ 100 ದೂರಸ್ಥ ಮಳೆ ಮಾಪನ ಕೇಂದ್ರಗಳು, 12 ದೂರಸ್ಥ ಹವಾಮಾನ ಮಾಪನ ಕೇಂದ್ರಗಳು ಹಾಗೂ 25 ಹರಿವುಮಾಪನ ಕೇಂದ್ರಗಳಿಂದ ನೈಜ ಸಮಯದಲ್ಲಿ ಲಭ್ಯವಾಗುವ ದತ್ತಾಂಶವನ್ನು ಆಧರಿಸಿರುತ್ತದೆ.
ಇದನ್ನೂ ಓದಿ: ಸೋಮವಾರದಿಂದ ಕೊರೋನಾ ಮಧ್ಯೆ ಪೂಜೆ ಹೇಗೆ? ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ನಿಯಮಾವಳಿ ತಿಳಿದಿರಿ
ಆ್ಯಪ್ನ ವಿನ್ಯಾಸ:
ಈ ಮೇಘ ಸಂದೇಶ ಆ್ಯಪ್ನಲ್ಲಿ ಪ್ರಸ್ತುತ ಹವಾಮಾನ, ಮುನ್ಸೂಚನೆ ಮತ್ತು ಸುರಕ್ಷಿತ ಮಾರ್ಗ ಎಂಬ ಮೂರು ಪ್ರಧಾನ ಮಾಡ್ಯೂಲ್ಗಳನ್ನು ಒಳಗೊಂಡಿದೆ. ಪ್ರಸ್ತುತ ಹವಾಮಾನ ಟ್ಯಾಬ್ ನಿಗದಿತ ಪ್ರದೇಶದ ಪ್ರಸ್ತುತ ಉಷ್ಣಾಂಶ, ಆರ್ದ್ರತೆ, ಮಳೆ ಪ್ರಮಾಣ, ಗಾಳಿಯ ವೇಗ ದಿಕ್ಕುಗಳ ಮಾಹಿತಿಯನ್ನು ನೀಡುತ್ತದೆ. ಮುನ್ಸೂಚನೆ ಟ್ಯಾಬ್ ನಿಗದಿತ ಪ್ರದೇಶಕ್ಕೆ ಅನುಗುಣವಾಗಿ ಮುಂದಿನ ಮೂರು ದಿನಗಳಿಗೆ ಉಷ್ಣಾಂಶ, ಆರ್ಧ್ರತೆ, ಮಳೆ ಪ್ರಮಾಣ, ಗಾಳಿಯ ವೇಗ ಹಾಗೂ ಮೋಡದ ಕುರಿತು ಮುನ್ಸೂಚನೆ ನೀಡುತ್ತದೆ.
‘ಸುರಕ್ಷಿತ ಮಾರ್ಗ’ ಟ್ಯಾಬ್ ನಿರ್ದಿಷ್ಟ ಸ್ಥಳದಿಂದ ತಲುಪಬೇಕಿರುವ ಸ್ಥಳಗಳ ನಡುವೆ ಸಂಚರಿಸಲು ಹವಾಮಾನ ವೈಪರೀತ್ಯಗಳಿಂದ ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತ ಮಾರ್ಗವನ್ನು ಸೂಚಿಸುತ್ತದೆ. ನಿಗದಿತ ಪ್ರದೇಶಕ್ಕೆ ಸಂಭವನೀಯ ಸಿಡಿಲಿನ ಮುನ್ನೆಚ್ಚರಿಕೆಯನ್ನೂ ಈ ಆ್ಯಪ್ ಒದಗಿಸುತ್ತದೆ. ಸಿಡಿಲಿನ ಟ್ಯಾಬ್ ಕೇಸರಿ ಅಥವಾ ಕೆಂಪು ಬಣ್ಣದಲ್ಲಿದ್ದರೆ ಆ ಪ್ರದೇಶದಲ್ಲಿ ಸಿಡಿಲು ಬಡಿತದ ಸಂಭವನೀಯತೆಯನ್ನು ಸೂಚಿಸುತ್ತದೆ. ಅದಲ್ಲದೆ ಆಪ್ರದೇಶದ ವ್ಯಕ್ತಿ ಅಥವಾ ಸಮುದಾಯಗಳು ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಉಪಯುಕ್ತ ಸಲಹೆ ಸೂಚನೆಯನ್ನು ನೀಡುತ್ತದೆ.
ಪ್ರಸ್ತುತ ಮಳೆ ಅಥವಾ ಪ್ರವಾಹ ಟ್ಯಾಬ್ನಲ್ಲಿ ಹತ್ತಿರದ ಮಳೆ ಮಾಪನ ಕೇಂದ್ರದ ಮಾಹಿತಿಯನ್ನಾಧರಿಸಿ ಆ ಪ್ರದೇಶದಲ್ಲಾಗುತ್ತಿರುವ ಮಳೆ ಮಾಹಿತಿಯನ್ನು ನೀಡುತ್ತದೆ. ಪ್ರವಾಹ ಬಟನ್ ಆ ಪ್ರದೇಶದ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಸ್ತುತ ಪ್ರವಾಹ ಪರಿಸ್ಥಿತಿಯ ಮಾಹಿತಿಯನ್ನು ನೀಡುತ್ತದೆ. ಈ ಟ್ಯಾಬ್ ನೀಲಿ ಬಣ್ಣದಲ್ಲಿದ್ದರೆ ಅದು ಆ ಪ್ರದೇಶದಲ್ಲಿ ಪ್ರಸ್ತುತ ಮಳೆಯಾಗುತ್ತಿರುವುದನ್ನು ಸೂಚಿಸುತ್ತದೆ.
ಸುರಕ್ಷತಾ ಸಲಹೆ ಟ್ಯಾಬ್ನಲ್ಲಿ ಮಳೆ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಆ ಪ್ರದೇಶದ ವ್ಯಕ್ತಿ ಅಥವಾ ಸಮುದಾಯ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ತುರ್ತು ಪರಿಸ್ಥಿತಿ ಟ್ಯಾಬ್ ಅಗತ್ಯಕ್ಕೆ ಅನುಗುಣವಾಗಿ ಸಾರ್ವಜನಿಕರು ಬಿಬಿಎಂಪಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಕಬ್ಬಿನ ಬಾಕಿ ಕೊಡದ ಪ್ರಭಾವಿ ಕಾರ್ಖಾನೆ ಮಾಲೀಕರು; ಬಿಲ್ ಪಾವತಿಗೆ ಡಿಸಿ ಗಡುವು
ಈ ಆ್ಯಪ್ನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
www.varunamitra.kar.gov.in ವೆಬ್ಸೈಟ್ನಲ್ಲಿ ವಲಯವಾರು ಪ್ರವಾಹ ಸಂಭವನೀಯ ಪ್ರದೇಶ ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ, ದತ್ತಾಂಶ ಡೌನ್ಲೋಡ್, ಪ್ರಸ್ತುತ ಮಳೆ ಮಾಹಿತಿ, 24 ಗಂಟೆಗಳ ಮುಂಚಿತ ಮಳೆ ಮಾಹಿತಿ, ವಲಯವಾರು ರಿಯಲ್ ಟೈಮ್ ಪ್ರವಾಹ ಮಾಹಿತಿ, ನಿರ್ದಿಷ್ಟ ಸ್ಥಳದ ಪ್ರವಾಹ ಮಾಹಿತಿಯ ನಕ್ಷೆಯನ್ನು ಸಾರ್ವಜನಿಕರು ನಿಂತಲ್ಲೇ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ