ನವದೆಹಲಿ, ಸೆ. 25: ದೆಹಲಿಯಲ್ಲಿ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ (Indira Gandhi Indoor Stadium) ಹಮ್ಮಿಕೊಂಡಿರುವ ರಾಷ್ಟ್ರೀಯ ಸಹಕಾರ ಸಮ್ಮೇಳನ (National cooperative conference) ದಲ್ಲಿ ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವ ಅಮಿತ್ ಶಾ (Union Home and Corporate Minister) ಅವರ ಜೊತೆ ಕರ್ನಾಟಕ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (ST Somashekar) ಅವರು ಭಾಗವಹಿಸಿ ಅಮಿತ್ ಶಾ ಅವರಿಗೆ ಕರ್ನಾಟಕ ಸಹಕಾರ ಸಮ್ಮೇಳನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸೋಮಶೇಖರ್, ಕರ್ನಾಟಕ ರಾಜ್ಯ ಮಟ್ಟದ ಸಹಕಾರ ಸಮ್ಮೇಳನವನ್ನು ನವೆಂಬರ್ ಅಥವಾ ಡಿಸೆಂಬರ್ 2021ರಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನಾನು ಆತ್ಮೀಯವಾಗಿ ಕೋರಿಕೊಳ್ಳುತ್ತಿದ್ದೇನೆ. ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು ಮತ್ತು ಎಲ್ಲರನ್ನು ಒಟ್ಟಿಗೆ ಕೊಂಡೊಯ್ದು ಅಭಿವೃದ್ಧಿಯತ್ತ ಮುನ್ನಡೆಯಲು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
‘ಸಹಕಾರ್ ಸೇ ಸಮೃದ್ಧಿ’ ಧ್ಯೇಯಘೋಷದೊಂದಿಗೆ ಹಮ್ಮಿಕೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಗೆ ಹೊಸ ರೂಪ ನೀಡುವುದು ಹಾಗೂ ಸಹಕಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಅಮೂಲ್ಯ ಸಮಯ ಮತ್ತು ದಿನಾಂಕವನ್ನು ಕೋರಲಾಗುತ್ತಿದೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.
![ST Somashekhar and others meet Amit Shah]()
ಅಮಿತ್ ಶಾ ಅವರನ್ನ ಭೇಟಿ ಮಾಡಿದ ಎಸ್ ಟಿ ಸೋಮಶೇಖರ್ ಮತ್ತಿತರರು
ಸಹಕಾರ (Cooperative) ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಹಕಾರ ಸಚಿವಾಲಯ ರಚನೆ ಮಾಡಿದ ನಿರ್ಧಾರ ಐತಿಹಾಸಿಕವಾದದ್ದು. ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡ ನಿಮಗೆ ನನ್ನ ಹಾಗೂ ಕರ್ನಾಟಕದ ಜನತೆ ಮತ್ತು ಕೋಆಪರೇಟಿವ್ ಸೊಸೈಟಿ ಸದಸ್ಯರ ಪರವಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಎಂದರು.
ನೂತನ ಸಚಿವಾಲಯದ ರಚನೆಯಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಲಿದೆ ಮಾತ್ರವಲ್ಲದೆ ಸ್ಪರ್ಧೆಗಿಳಿಯಲು ಪ್ರೇರೇಪಿಸಿದಂತಾಗಲಿದೆ. ಸಹಕಾರ ಇಲಾಖೆಯಲ್ಲಿ ಕೆಳ ಹಂತದಿಂದ ಎಲ್ಲಾ ವರ್ಗದವರಿಗೆ ಆತ್ಮಸ್ಥೈರ್ಯ ಕೂಡ ಸಿಕ್ಕಂತಾಗಲಿದೆ. 'ಸಹಕಾರ್ ಸೇ ಸಮೃದ್ಧಿ’ ಧ್ಯೇಯವಾಕ್ಯದೊಂದಿಗೆ ರಚನೆಯಾಗಿರುವ ಸಹಕಾರ ಸಚಿವಾಲಯದಿಂದ, ಆಡಳಿತಕ್ಕೆ ಹೊಸ ರೂಪ ಸಿಗಲಿದೆ ಹಾಗೂ ಕಾನೂನು ಮತ್ತು ನೀತಿಯ ಚೌಕಟ್ಟು ಸಿಗುವುದರಿಂದ ಸಹಕಾರ ಚಳವಳಿಯಿಂದ ಹುಟ್ಟು ಪಡೆದ ಸಹಕಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸಿದಂತಾಗಲಿದೆ ಎಂದರು.
ಸಹಕಾರ ಚಳವಳಿಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಮತ್ತು ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ಕನಸುಗಳನ್ನು ನೂತನ ಸಹಕಾರ ಸಚಿವಾಲಯ ನನಸು ಮಾಡಲಿದೆ. ದೇಶದ ಜನತೆ ಆರ್ಥಿಕವಾಗಿ ಸಶಕ್ತರಾಗಲು ಸಹಕಾರ ಚಳವಳಿ ತಳಹದಿಯಾಗಿದ್ದು ಇದೀಗ ಅದರ ಆಶೋತ್ತರಗಳನ್ನು ಈಡೇರಿಸಲು ಸಹಕಾರ ಸಚಿವಾಲಯ ನೆರವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Amit Shah: ಸಹಕಾರಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ 8 ಕೋಟಿ ಜನರನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ
ಬಹುರಾಜ್ಯ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸಲು ಹಾಗೂ ವ್ಯವಹಾರೀಕರಣವನ್ನು ಸರಳೀಕರಣಗೊಳಿಸಲು ನೂತನ ಸಚಿವಾಲಯವು ನೆರವಾಗಲಿದೆ ಎಂಬ ವಿಶ್ವಾಸವಿದೆ. ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಸಹಕಾರ ಸಚಿವಾಲಯ ರಚನೆ ಮಾಡುವ ಸಂಬಂಧ ಹಣಕಾಸು ಸಚಿವರು ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಣೆ ಮಾಡಿದ್ದನ್ನು ಈಡೇರಿಸಲಾಗಿದೆ. ಇದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸಲಿದೆ ಮತ್ತು ಬಹುರಾಜ್ಯ ಸಹಕಾರ ಸಂಸ್ಥೆಗಳ ಭಾಂದವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನೂತನ ಸಹಕಾರ ಸಚಿವಾಲಯ ರಚನೆ ಮಾಡಿದ್ದಕ್ಕೆ ತಮಗೆ ಮತ್ತೊಮ್ಮೆ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಿಮ್ಮನ್ನು ಭೇಟಿ ಮಾಡಲು ನನಗೂ ಹಾಗೂ ನಿಯೋಗದವರಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ರಾಜ್ಯದಲ್ಲಿ ಸಹಕಾರ ಇಲಾಖೆಯ ಸಾಧನೆಗಳುಸರ್ಕಾರದ ಸಂಪೂರ್ಣ ಸಹಕಾರದ ಫಲವಾಗಿ ಸಹಕಾರ ಇಲಾಖೆ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯತ್ತ ಸಾಗುತ್ತಿದೆ. ಬ್ಯಾಂಕ್. ಸಕ್ಕರೆ, ಡೈರಿ, ಹೌಸಿಂಗ್, ರೇಷ್ಮೆ ಇಂಡಸ್ಟ್ರಿ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಆರ್ಥಿಕಮಟ್ಟ ಸುಧಾರಿಸುವಲ್ಲಿ ಸಹಕಾರ ಇಲಾಖೆ ದಾಪುಗಾಲಿಟ್ಟಿದೆ ಎಂದರು.
ವರದಿ: ಧರಣೀಶ್ ಬೂಕನಕೆರೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ