news18-kannada Updated:January 26, 2021, 7:41 AM IST
ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್
ಚಿಕ್ಕಮಗಳೂರು (ಜ. 26): ಕಂದಾಯ ಸಚಿವ ಆರ್. ಅಶೋಕ್ ಅವರ ಪಿಎ ಗಂಗಾಧರ್ ವಿರುದ್ಧ ಲಂಚ ಕೇಳಿದ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಸಚಿವರ ಪಿಎ ಗಂಗಾಧರ್ ವಿರುದ್ಧ ಲಂಚ ಕೇಳಿದ್ದಾರೆಂದು ಆರೋಪಿಸಿದ್ದಾರೆ.
ಜ. 20ನೇ ತಾರೀಖು ವಾಟ್ಸಾಪ್ ಮೂಲಕ ಕಂದಾಯ ಸಚಿವರ ವೇಳಾಪಟ್ಟಿ ಬಂದಿತ್ತು. 2 ದಿನಗಳ ಹಿಂದೆ ಆರ್. ಅಶೋಕ್ ಅವರ ಪಿಎ ಎನ್ನಲಾದ ಗಂಗಾಧರ್ ಕರೆ ಮಾಡಿ ಶೃಂಗೇರಿಗೆ ಕಂದಾಯ ಸಚಿವರು ಬರ್ತಾರೆ ಸಿಗಿ ಎಂದರು. ಸಂಜೆ ಕಂದಾಯ ಸಚಿವರು ಶೃಂಗೇರಿಗೆ ಬಂದಾಗ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ. ಈ ವೇಳೆ ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ಹಾಗಾಗಿ, ನಾನು ಮೊದಲೇ ಪೊಲೀಸರಿಗೆ ಅವರನ್ನು ತೋರಿಸಲು ಕೇಳಿದ್ದೆ. ಶೃಂಗೇರಿಗೆ ಬಂದಾಗ ಇವರೇ ಕಂದಾಯ ಸಚಿವರ ಪಿಎ ಎಂದು ಪೊಲೀಸರು ಹೇಳಿದರು. ಆಗ ಗಂಗಾಧರ್ ರನ್ನ ಭೇಟಿ ಮಾಡಿದೆ. ಅಲ್ಲೇ ಇದ್ದ ರೂಮಿಗೆ ಗಂಗಾಧರ್ ಕರೆದುಕೊಂಡು ಹೋದರು. ಈ ವೇಳೆ ಕೂಡಲೇ ಅವರು ಏನಿದೆ ಕೊಡಿ ಎಂದರು. ನಾನು ಕೊಡೋದಿಲ್ಲ, ತಗಳೋದೂ ಇಲ್ಲ ಎಂದು ನೇರವಾಗಿ ಹೇಳಿದೆ. ಆಮೇಲೆ ಆಯ್ತು ಹೋಗಿ ಎಂದರು ಎಂದು ಗಂಗಾಧರ್ ವಿರುದ್ಧ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ಆರೋಪ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚೆಲುವರಾಜ್, ಕಂದಾಯ ಸಚಿವ ಆಶೋಕ್ ಪಿಎ ಎಂದು ಗಂಗಾಧರ್ ನನ್ನ ಬಳಿ ಲಂಚ ಕೇಳಿದ್ದು ನಿಜ. ಈ ಬಗ್ಗೆ ನನ್ನ ಬಳಿ ಆಡಿಯೋ ಇದೆ. ಇದಲ್ಲದೆ ನಾನು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಮತ್ತೊಮ್ಮೆ ಫೋನ್ ಮಾಡಿರುವ ಗಂಗಾಧರ್ ಫೈಲ್ ಕೊಡಲಿಲ್ಲ ಎಂದರು. ಯಾವ ಫೈಲ್ ಕೂಡ ಇಲ್ಲ, ನೀವು ಲಂಚ ಕೇಳಿದರೂ ನಾನು ಕೊಡಲಿಲ್ಲ ಎಂದು ಹೇಳಿದ್ದಾರೆ. ಇನ್ನು ಇವರು ನಿಜವಾಗಿಯೂ ಕಂದಾಯ ಸಚಿವರ ಪಿಎ ಹೌದಾ ಅಥವಾ ಬೇರೆಯವರೋ ಗೊತ್ತಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ಇಂದು ಬೆಳಗ್ಗೆ ಶೃಂಗೇರಿ ಪೊಲೀಸರಿಗೆ ದೂರು ನೀಡುವುದಾಗಿ ಚೆಲುವರಾಜ್ ಹೇಳಿದ್ದಾರೆ.
ಒಟ್ಟಾರೆ, ಗಂಗಾಧರ್ ಕಂದಾಯ ಆರ್.ಅಶೋಕ್ ಪಿಎನಾ ಅಥವಾ ಅವರ ಹೆಸರಲ್ಲಿ ಬೇರೆ ವ್ಯಕ್ತಿ ಕರೆ ಮಾಡಿದರಾ ಎಂಬುದು ಗೊತ್ತಾಗಿಲ್ಲ. ಇದೆಲ್ಲವೂ ಪೊಲೀಸರ ತನಿಖೆಯಿಂದ ಹೊರಬೀಳಬೇಕಿದೆ.
Published by:
Sushma Chakre
First published:
January 26, 2021, 7:41 AM IST