ಬಾಗಲಕೋಟೆ: ಬಿಜೆಪಿ (BJP) ಅಧಿಕಾರಕ್ಕೆ ಬರಲು ಕೆಲಸ ಮಾಡಿದ ಹಿಂದುತ್ವ (Hindutva) ಪರ ಸಂಘಟನೆಗಳಿಗೆ ಟಿಕೆಟ್ ನೀಡಲೊಪ್ಪದ ಬಿಜೆಪಿ ವಿರುದ್ದ ಶ್ರೀರಾಮ ಸೇನೆಯ (Sri Rama Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಕಿಡಿಕಾರಿದ್ದಾರೆ. ಈ ಸಂಬಂಧ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರಿಗೆ ಪ್ರಮೋದ್ ಮುತಾಲಿಕ್ ಅಥವಾ ಹಿಂದು ಹೋರಾಟಗಾರರಿಗೆ 224 ಕ್ಷೇತ್ರದಲ್ಲಿ ಟಿಕೆಟ್ ಕೊಡಲು ಒಂದು ಸ್ಥಾನವೂ ಕಾಣಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮನ್ನು ಗದ್ದಿಗೆಗೇರಿಸಿದವರು ನಾವು ಎಂದಿರುವ ಪ್ರಮೋದ್ ಮುತಾಲಿಕ್, ನಮ್ಮ ರಕ್ತವನ್ನು ಬೆವರನ್ನಾಗಿ ಮಾಡಿ ಬಿಜೆಪಿಯನ್ನು ನಾವು ಗೆಲ್ಲಿಸಿದ್ವಿ, ಒಂದು ಚೂರಾದರೂ ಕರುಣೆ ಬೇಡವಾ ಈ ಬಿಜೆಪಿ ಅವರಿಗೆ. ಬರೀ ನಿಮ್ಮ ಮಕ್ಕಳನ್ನು ಮನೆಯವರನ್ನು ಬೆಳೆಸೋದಲ್ಲ. ಬಿಜೆಪಿ ಬೆಳೆಸೋದಕ್ಕೆ ನಂದು ಪಾಲಿದೆ. ನಿಮ್ಮನ್ನು ಬೈಯೋದಕ್ಕೆ, ಟೀಕೆ ಮಾಡೋದಕ್ಕೆ, ಕೇಳೋದಕ್ಕೆ ನನಗೆ ಹಕ್ಕಿದೆ. ತಿದ್ದೋದಕ್ಕೆ ಬೆರಳು ಮಾಡಿ ತೋರಿಸೋದಕ್ಕೂ ನನಗೆ ಹಕ್ಕಿದೆ. ಆ ಹಿನ್ನೆಲೆಯಲ್ಲಿ ಕೇಳುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Pramod Muthalik: ಡೋಂಗಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾರ್ಕಳಕ್ಕೆ ಬಂದಿದ್ದೇನೆ: ಮುತಾಲಿಕ್
ಹಿಂದೂ ಹೋರಾಟಗಾರರಿಗೆ ಬಿಜೆಪಿ ದ್ರೋಹ ಮಾಡಿದೆ
ನೀವು ಹಿಂದೂ ಕಾರ್ಯಕರ್ತರಿಗೆ, ಹೋರಾಟಗಾರರಿಗೆ ದ್ರೋಹ ಮಾಡಿದ್ದೀರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಮುತಾಲಿಕ್, ಪ್ರಮೋದ್ ಮುತಾಲಿಕ್ಗೂ ನೀವು ದ್ರೋಹ ಮಾಡಿದ್ದೀರಿ. ಇಡೀ ಕರ್ನಾಟಕದ ಜನ ನಿಮಗೆ ಟಿಕೆಟ್ ಕೊಡಬೇಕಾಗಿತ್ತು ಅಂತ ಹೇಳ್ತಿದ್ದಾರೆ. ಆದರೆ ನೀವು ದ್ರೋಹ ಮಾಡಿದಿರಿ. ಆದ್ದರಿಂದ ಯಾರ್ಯಾರು ದ್ರೋಹ ಮಾಡಿದ್ದೀರಿ ಎಂದು ತೋರಿಸ್ತೀನಿ. ಕಾರ್ಕಳದಲ್ಲಿ ವಿಜಯ ಸಾಧಿಸಿ ಮುಂದಿನ ದಿನಗಳಲ್ಲಿ ನಾನು ಏನು ಅಂತ ತೋರಿಸ್ತೀನಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.
ನಮ್ಮ ನಾಯಕರು ನರೇಂದ್ರ ಮೋದಿನೇ
ಇದೇ ವೇಳೆ ನಾವು ಬಿಜೆಪಿ ವಿರುದ್ದ ಅಲ್ಲ ಎಂದು ಹೇಳಿದ ಪ್ರಮೋದ್ ಮುತಾಲಿಕ್, ನಮ್ಮ ನಾಯಕರು, ಆದರ್ಶ ನರೇಂದ್ರ ಮೋದಿನೇ. ನರೇಂದ್ರ ಮೋದಿ ಅವರ ವಿಚಾರಧಾರೆಯನ್ನ ಹಿಡಿದುಕೊಂಡು ಕಾರ್ಕಳದ ಮೂಲಕ ಪರಿವರ್ತನೆ ಮಾಡುವ ಉದ್ದೇಶದಿಂದ ನಾನು ಸ್ಪರ್ಧೆಗೆ ಇಳಿದಿದ್ದೇನೆ. ಆ ಹಿನ್ನೆಲೆಯಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ನಾನು ಬೆಂಬಲಿಸುವುದೇ ಬಿಜೆಪಿಗೆ, ಬಿಜೆಪಿ ಒಂದೇ ಒಂದು ಹಿಂದೂತ್ವದ ಪಕ್ಷ ಆಗಿದೆ. ಆದರೆ ಅದರೊಳಗಡೆ ಇರುವಂತಹ ವ್ಯಕ್ತಿಗಳ ವಿಕೃತಿ, ಹಿಂದೂ ದ್ರೋಹಿಗಳಿಂದ, ಭ್ರಷ್ಟಾಚಾರದಿಂದ ಸಿದ್ದಾಂತವನ್ನ ಹಾಳು ಮಾಡಿದವರ ವಿರುದ್ದ ನನ್ನ ಹೋರಾಟ ಇದೆಯೇ ಹೊರತು ಬಿಜೆಪಿ ವಿರುದ್ದ ಅಲ್ಲ ಎಂದು ಹೇಳಿದರು.
25 ಕಡೆ ಬಿಜೆಪಿಯಿಂದ ಸೀಟ್ ಕೇಳಿದ್ವಿ
ಇನ್ನು ಬಿಜೆಪಿಯಿಂದ ಹಿಂದೂ ಹೋರಾಟಗಾರರಿಗೆ 25 ಸೀಟು ಕೊಡುವಂತೆ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ವಿ ಎಂದ ಪ್ರಮೋದ್ ಮುತಾಲಿಕ್, ಆದರೆ ನಮ್ಮ ಮನವಿಗೆ ಬಿಜೆಪಿ ಸ್ಪಂದಿಸಲಿಲ್ಲ. ಹೀಗಾಗಿ ರಾಜ್ಯದ 25 ಕಡೆಗೆ ಹಿಂದೂ ಸಂಘಟನೆಗಳಿಂದ ಅಭ್ಯರ್ಥಿ ಹಾಕುತ್ತೇವೆ. ನನಗೆ ಬಾಗಲಕೋಟೆಯ ತೇರದಾಳ ಹಾಗೂ ಕಾರ್ಕಳ ಅಂತ ಬಂತು. ಈಗ ಕಾರ್ಕಳ ಕ್ಷೇತ್ರವೇ ಫೈನಲ್ ಆಗಿದೆ. ನೂರಕ್ಕೆ ನೂರು ನಾನು ಗೆದ್ದು ಹಿಂದುತ್ವದ ಪತಾಕೆಯನ್ನು ಕಾರ್ಕಳದ ಮೂಲಕ ಹಾರಿಸುತ್ತೇನೆ. ನಾನು ಗೆದ್ದರೂ ಬೆಂಬಲಿಸುವುದು ಬಿಜೆಪಿಯನ್ನೇ ಎಂದು ಹೇಳಿದರು.
ಸುನೀಲ್ ಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ
ಇನ್ನು ಕಾರ್ಕಳದಲ್ಲಿ ಸಚಿವ ಸುನೀಲ್ ಕುಮಾರ್ ಸುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು ಎಂದು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಬಿಜೆಪಿ ಕಾರ್ಯಕರ್ತರು, ಸಿದ್ದಾಂತವನ್ನು ಕಡೆಗಣಿಸಿ ಸುನೀಲ್ ಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾನೇ ಸುನೀಲ್ ಕುಮಾರ್ ಅವರನ್ನ ಚಿಕ್ಕಮಗಳೂರಲ್ಲಿ ದತ್ತಪೀಠದ ಹೋರಾಟದಲ್ಲಿ ಜಿಲ್ಲೆಯಿಂದ ರಾಜ್ಯದವರೆಗೂ ಪರಿಚಯ ಮಾಡಿಸಿದೆ. ಇವತ್ತು ಅವರು ಬರೀ ಡೋಂಗಿ ಹಿಂದೂವಾದ ಮಾಡುತ್ತಿದ್ದಾರೆ. ಇದಕ್ಕೆ ಬುದ್ದಿ ಕಲಿಸಲು ನಾನು ಸ್ಪರ್ಧೆ ಮಾಡ್ತಿದ್ದೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ