ಬೆಂಗಳೂರು: ನಮ್ಮದು ಶ್ರೀಗಂಧದ ನಾಡು ಅಂತಲೇ ಪ್ರಸಿದ್ಧಿ. ಗಂಧದ ಗುಡಿ ಅಂತಲೇ ಕರೆಯಲಾಗುವ ನಮ್ಮ ರಾಜ್ಯದ ಗಂಧದ ಮರಗಳ (Tree - Sandalwood) ಗುಣಮಟ್ಟದ ಅತ್ಯಂತ ಉತ್ಕೃಷ್ಟವಾದದ್ದು. ಆದ್ರೆ ಇದರ ನಾಶ ಅವ್ಯಾಹತವಾಗಿ ಸಾಗಿದೆ ಅನ್ನೋದೇನೂ ಗುಟ್ಟಾಗಿ ಉಳಿದಿಲ್ಲ. ನಮ್ಮಲ್ಲಿಯ ಅತ್ಯಂತ ಅಪರೂಪದ ಗಂಧದ ಮರಗಳು ಅಪಾಯದಲ್ಲಿವೆ. ಮರಗಳ್ಳರು ರಾತ್ರೋ ರಾತ್ರಿ ಗಂಧದ ಮರಗಳನ್ನು ಕಡಿದು (Tree Cutting) ಸಾಗಿಸುತ್ತಿದ್ದಾರೆ. ದುಬಾರಿ ಬೆಲೆಗೆ ಬೇರೆ ಬೇರೆ ಕಡೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಇದನ್ನು ತಡೆಗಟ್ಟಬೇಕು ಎಂಬ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ ನಮ್ಮ ರಾಜ್ಯದ ಶ್ರೀಗಂಧದ ಮರಗಳಿಗೆ ವಿಶೇಷ ರಕ್ಷಣೆ (Special Protection) ಒದಗಿಸಲಾಗುತ್ತಿದೆ.
ಹೌದು, ಕರ್ನಾಟಕದಲ್ಲಿ (Karnataka) ಪ್ರಪ್ರಥಮ ಬಾರಿಗೆ ಶ್ರೀಗಂಧದ ಮರಕ್ಕೆ ವಿಶೇಷ ರಕ್ಷಣೆ ದೊರೆಯಲಿದೆ. ಮರ ಕಳ್ಳರಿಂದ ಶ್ರೀಗಂಧದ ಮರಗಳನ್ನು ರಕ್ಷಿಸಲು ಮತ್ತು ರಾಜ್ಯದಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೋಸ್ಕರ ರಾಜ್ಯ ಸರ್ಕಾರ ವಿಶೇಷ ರಕ್ಷಣೆ ನೀಡಲು ನಿರ್ಧರಿಸಿದೆ. ಶ್ರೀಗಂಧ ನೀತಿಯ (sandalwood policy) ಭಾಗವಾಗಿ ಈ ನಿರ್ಧಾರವು ಅಂತಿಮ ಹಂತದಲ್ಲಿದೆ.
ಗಂಧದ ಮರಗಳಿಗೆ 24 ಗಂಟೆ ಕಾವಲು
ಶ್ರೀಗಂಧ ನೀತಿಯ ಪ್ರಕಾರ, 100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವ ಮತ್ತು ಉತ್ತಮ ಸುತ್ತಳತೆ ಹೊಂದಿರುವ ಮರಗಳಿಗೆ ವಿಶೇಷ ರಕ್ಷಣೆ ನೀಡಲಾಗುವುದು.
"ಈ ಪ್ರದೇಶಗಳು ಶೂನ್ಯ ಸಹಿಷ್ಣು ವಲಯಗಳಾಗಿರುತ್ತವೆ. ಇಲ್ಲಿ ವಿಶೇಷ ಶಸ್ತ್ರಸಜ್ಜಿತ ಭದ್ರತೆ ಒದಗಿಸಲಾಗುತ್ತದೆ. ಅಲ್ಲದೇ ಶ್ವಾನದಳ ನೇಮಿಸಲಾಗುತ್ತದೆ. ಇದರ ಜೊತೆಗೆ ಸಿಸಿಟಿವಿಗಳನ್ನು ಅಳವಡಿಸಿ 24 ಗಂಟೆಗಳ ಕಾಲ ಈ ಪ್ರದೇಶವನ್ನು ಸಕಲ ಭದ್ರತೆಯೊಂದಿಗೆ ಕಾಯಲಾಗುತ್ತದೆ.
ಪ್ರತಿ ಗಂಧದ ಮರ ಮತ್ತು ಕ್ಲಸ್ಟರ್ ಅನ್ನು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲಾಗುವುದು. ಅಂದಹಾಗೆ ಕೇರಳ ರಾಜ್ಯದ ಮರಯೂರಿನಲ್ಲಿರುವ ಶ್ರೀಗಂಧದ ಮರಗಳಿಗೆ ಹೀಗೆಯೇ ರಕ್ಷಣೆ ನೀಡಲಾಗಿದೆ" ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮವಾಗಿ ಗಂಧದ ಮರ ಕಡಿದರೆ 7-10 ವರ್ಷ ಜೈಲು!
ಈ ಶ್ರೀಗಂಧ ನೀತಿಯಲ್ಲಿ ಗಂಧದ ಮರಗಳನ್ನು ಕಡಿಯುವುದು ಅಪರಾಧ. ಹಾಗೇನಾದರು ಅಕ್ರಮವಾಗಿ ಗಂಧದ ಮರವನ್ನು ಕಡಿಯುವವರು ಸಿಕ್ಕಿಬಿದ್ದರೆ ಅಂಥ ತಪ್ಪಿತಸ್ಥರು 7 ರಿಂದ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
“ನಮ್ಮ ರಾಜ್ಯವು ಶ್ರೀಗಂಧಕ್ಕೇ ಪ್ರಸಿದ್ಧವಾಗಿದೆ. ಆದರೆ ಹಲವಾರು ಕಾರಣಗಳಿಂದ ಗಂಧದ ಮರಗಳ ಸಂಖ್ಯೆಯು ಕ್ಷೀಣಿಸುತ್ತಿದೆ. ಶ್ರೀಗಂಧವನ್ನು ರಾಜ್ಯ ವೃಕ್ಷವೆಂದು ಘೋಷಿಸಿದ್ದರೂ ಮರಗಳನ್ನು ಕಾಪಾಡುವುದು ಮತ್ತು ರಕ್ಷಿಸುವುದು ದೊಡ್ಡ ಸವಾಲಾಗಿದೆ.
ಮರಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ
ಇದೀಗ ರಾಜ್ಯ ಗಂಧದ ಮರಗಳ ಗುರುತಿಸುವಿಕೆ ಮತ್ತು ರಕ್ಷಣೆ ಮಾಡುವುದರೊಂದಿಗೆ ಕಡಿಮೆಯಾಗಿರುವ ಗಂಧದ ಮರಗಳ ಸಂಖ್ಯೆ ಹೆಚ್ಚಾಗಬಹುದು" ಎಂಬುದಾಗಿ ಅವರು ಹೇಳಿದ್ದಾರೆ.
ಇದುವರೆಗೆ 20-30 ಬ್ಲಾಕ್ಗಳನ್ನು ಗುರುತಿಸಲಾಗಿದೆ. ಈ ಮರಗಳು ಸುಮಾರು 30 ವರ್ಷ ಹಳೆಯವು ಮತ್ತು ಕೆಲವು 45 ಸೆಂ.ಮೀ ಸುತ್ತಳತೆ ಹೊಂದಿವೆ.
ರಾಜ್ಯ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಇಂಥದ್ದು ಕನಿಷ್ಠ ಎರಡು ಮರಗಳಿವೆ. ಕ್ಲಸ್ಟರ್ ಘೋಷಿಸಲು, ಕೇವಲ ವಿಸ್ತೀರ್ಣ ಮಾತ್ರವಲ್ಲದೆ ಮರಗಳ ಸಂಖ್ಯೆಯನ್ನು ಸಹ ಪರಿಗಣಿಸಲಾಗುವುದು ಎಂಬುದಾಗಿ ಹೇಳಲಾಗಿದೆ.
ಹೊರ ರಾಜ್ಯಗಳಿಗೆ ಮರಗಳ ಮಾರಾಟ
ಅಂದಹಾಗೆ ನಮ್ಮಲ್ಲಿ ಗಂಧದ ಕಳ್ಳರು ಮರಗಳನ್ನು ಅವ್ಯಾಹತವಾಗಿ ಕಡಿದು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ದಿನಬೆಳಗಾದರೆ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.
ಹೀಗೆ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯುವುದರಿಂದ ಗಂಧದ ಮರಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ. ಸಾಕಷ್ಟು ಜನ ತಪ್ಪಿತಸ್ಥರನ್ನು ಹಿಡಿಯಲಾಗಿದ್ದರೂ ಗಂಧದ ಕಳ್ಳತನ ನಡೆಯುವುದು ನಿಂತಿಲ್ಲ.
ಇದನ್ನೂ ಓದಿ: Voters List 2023: ಮೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ 221 ಕ್ಷೇತ್ರದ ಮತದಾರರ ಪಟ್ಟಿ ಪ್ರಕಟ
ಒಟ್ಟಿನಲ್ಲಿ ನಮ್ಮ ಹೆಮ್ಮೆಯಾಗಿರುವ ಗಂಧದ ಮರಗಳಿಗೆ ರಕ್ಷಣೆ ನೀಡುತ್ತಿರುವುದು ಸಂತೋಷದ ವಿಚಾರವೇ. ಆದ್ರೆ ಇದನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಅನ್ನೋದನ್ನು ಕಾದು ನೋಡಬೇಕಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ