• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ಅನ್ಯ ಶಕ್ತಿಗಳು ರೈತ ಹೋರಾಟವನ್ನೇ ತಲೆಕೆಳಗು ಮಾಡಲು ಯತ್ನಿಸುತ್ತಿವೆ; ಹೆಚ್​.ಡಿ. ಕುಮಾರಸ್ವಾಮಿ

HD Kumaraswamy: ಅನ್ಯ ಶಕ್ತಿಗಳು ರೈತ ಹೋರಾಟವನ್ನೇ ತಲೆಕೆಳಗು ಮಾಡಲು ಯತ್ನಿಸುತ್ತಿವೆ; ಹೆಚ್​.ಡಿ. ಕುಮಾರಸ್ವಾಮಿ

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮುಂದೆ ಓದಿ ...
  • Share this:

    ಬೆಂಗಳೂರು (ಜನವರಿ 27); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ತಮ್ಮ ಹಕ್ಕೊತ್ತಾಯಕ್ಕಾಗಿ ಜನವರಿ 26ರ ಗಣರಾಜ್ಯ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ರ್‍ಯಾಲಿಯನ್ನೂ ಆಯೋಜಿಸಿದ್ದರು. ಆದರೆ, ಶಾಂತಿಯುತವಾಗಿ ನಡೆಯುತ್ತಿದ್ದ ಟ್ರ್ಯಾಕ್ಟರ್​ ರ್‍ಯಾಲಿ ಕೆಲವೆಡೆ ಮಾತ್ರ ಹಿಂಸಾಚಾರಕ್ಕೆ ತಿರುಗಿತ್ತು. ಕೆಲವು ರೈತ ಹೋರಾಟಗಾರರು ಕೆಂಪು ಕೋಟೆಯನ್ನು ವಶಕ್ಕೆ ಪಡೆದು ರೈತರ ಧ್ವಜವನ್ನು ಹಾರಿಸಿದ್ದರು. ಈ ವೇಳೆ ನಡೆದ ಪೊಲೀಸ್​ ಲಾಠಿ ಚಾರ್ಚ್​ನಲ್ಲಿ ಓರ್ವ ಮೃತಪಟ್ಟರೆ 20 ಜನ ಗಾಯಾಳುಗಳಾಗಿದ್ದಾರೆ. ಕೆಲವು ಪೊಲೀಸರೂ ಗಾಯಾಳುಗಳಾಗಿದ್ದರು. ಈ ಘಟನೆಯನ್ನು ಅನೇಕರು ಖಂಡಿಸಿದ್ದಾರೆ. ಸ್ವತಃ ರೈತ ಮುಖಂಡರು ಸಹ ಈ ಘಟನೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, "ಶಾಂತಿಯುತವಾಗಿ ನಡೆಯುತ್ತಿದ್ದ ರೈತ ಹೋರಾಟದಲ್ಲಿ ಅನ್ಯ ಶಕ್ತಿಗಳು ಹೊಕ್ಕಿದ್ದು, ಅವರು ಇಡೀ ರೈತ ಹೋರಾಟವನ್ನು ತಲೆ ಕೆಳಗು ಮಾಡಲು ಯತ್ನಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.


    ದೆಹಲಿ ರೈತ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದಕ್ಕೆ ಅನ್ಯ ಶಕ್ತಿಗಳೇ ಕಾರಣ ಎಂದು ಟ್ವೀಟ್ ಮೂಲಕ ಆರೋಪಿಸಿರುವ ಕುಮಾರಸ್ವಾಮಿ, "ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ.



    ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ.


    ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಯಾಕೆ ಆಯಿತು, ಹೇಗೆ ಆಯಿತು, ಘಾತಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೇ, ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು" ಎಂದು ಅಭಿಪ್ರಾಯಪಟ್ಟಿದ್ದಾರೆ.


    ಇದನ್ನೂ ಓದಿ: Farmers Protest: ಇದು ರೈತ ಹೋರಾಟವಲ್ಲ, ಭಯೋತ್ಪಾದಕರ ಕೃತ್ಯ ಇದರ ಹಿಂದೆ ಕಲಿಸ್ತಾನಿಗಳ ಕೈವಾಡವಿದೆ; ಸಚಿವ ಬಿ.ಸಿ. ಪಾಟೀಲ್


    ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೂ ಕಿವಿಮಾತು ಹೇಳಿರುವ ಕುಮಾರಸ್ವಾಮಿ, "ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂ ಕೋರ್ಟ್‌ ಕೂಡ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು" ಎಂದು ತಿಳಿಸಿದ್ದಾರೆ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು