ವಿಜಯಪುರ (ಮಾ. 19): ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಗೆ ಚುನಾವಣೆ ಇನ್ನೂ ಘೋಷಣೆಯಾಗದಿದ್ದರೂ ಕಾಂಗ್ರೆಸ್ ಮಾತ್ರ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಚುನಾವಣೆ ರಾಜಕೀಯದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯದ ಮಸ್ಕಿ ಮತ್ತು ಬಸವ ಕಲ್ಯಾಣ ಬೈ ಎಲೆಕ್ಷನ್ ಗೆ ದಿನಾಂಕ ಘೋಷಣೆಯಾಗಿದ್ದು, ಈ ಕ್ಷೇತ್ರದ ಅಭ್ಯರ್ಥಿಗಳ ಜೊತೆಯಲ್ಲಿಯೇ ಇನ್ನೂ ಚುನಾವಣೆ ಘೋಷಣೆಯಾಗದ ಸಿಂದಗಿಗೂ ಅಭ್ಯರ್ಥಿ ಘೋಷಣೆ ಮಾಡಿದ್ದು, ಮೂರು ಮತಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿಂದಗಿಯ ಅಶೋಕ ಮನಗೂಳಿ ಅವರ ಹೆಸರು ಮೊದಲಿಗೆ ಇರುವುದು ಗಮನಾರ್ಹವಾಗಿದೆ.
ಟಿಕೆಟ್ ಘೋಷಣೆಯ ಕುರಿತು ವಿಜಯಪುರದಲ್ಲಿ ನ್ಯೂಸ್ 18 ಕನ್ನಡದ ಜೊತೆ ಸಂತಸ ಹಂಚಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಟಿಕೆಟ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಟಿಕೆಟ್ ಸಿಗಲು ಪ್ರಮುಖ ಕಾರಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರಾದ ರಾಹುಲ ಗಾಂಧಿ, ಎಸ್. ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ, ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ರಾಜು ಆಲಗೂರ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಮಾ. 9 ರಂದು ಕಾಂಗ್ರೆಸ್ಸಿಗೆ ಬೇಷರತ್ತಾಗಿ ಸೇರಿದ್ದೆ. ಟಿಕೆಟ್ ನೀಡಿದರೆ ಸ್ಪರ್ಧಿಸುವೆ. ಇಲ್ಲದಿದ್ದರೆ ಟಿಕೆಟ್ ನೀಡಿದ ಅಭ್ಯರ್ಥಿಯ ಪರವಾಗಿ ಚುನಾವಣೆ ಮಾಡುತ್ತೇನೆ ಎಂದು ಹೇಳಿದ್ದೆ. ಈಗ ಹೈಕಮಾಂಡ್ ತಮ್ಮನ್ನು ಗುರುತಿಸಿ ಟಿಕೆಟ್ ನೀಡಿರುವುದ ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
75 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕೇಂದ್ರದಿಂದ ಸಮಿತಿ ರಚನೆ; ವಿರೇಂದ್ರ ಹೆಗ್ಡೆ, ಬಿಎಮ್ ಹೆಗ್ಡೆ ಆಯ್ಕೆ
ನನಗೆ ಮತ್ತು ನಮ್ಮ ಮನೆತನದ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದ್ದಾರೆ. ಸಿಂದಗಿಯ ಸ್ಥಳೀಯ ಎಲ್ಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ ಅವರು, ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ದುರಾಡಳಿತವನ್ನು ಮತದಾರರ ಎದುರು ಪ್ರಸ್ತಾಪಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಈ ಎರಡೂ ಸರಕಾರಗಳ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮ ತಂದೆ ಎಂ. ಸಿ. ಮನಗೂಳಿ ಶಾಸಕರು ಮತ್ತು ಸಚಿವರಾಗಿದ್ದಾಗ ಸಿಂದಗಿ ಮತಕ್ಷೇತ್ರಕ್ಕೆ ರೂ. 700 ರಿಂದ ರೂ. 1000 ಕೋ. ಅನುದಾನವನ್ನು ತಂದಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ವಿಚಾರ ಸಿಂದಗಿ ಮತಕ್ಷೇತ್ರದ ಜನತೆಗೂ ಗೊತ್ತಿದೆ. ತಂದೆಯವರು ಸಿಂದಗಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವುದನ್ನು ಜನತೆ ಈಗಲೂ ನೆನೆಯುತ್ತಿದ್ದಾರೆ. ತಂದೆಯವರ ಅವರ ಸಾಧನೆ, ಕಾಂಗ್ರೆಸ್ಸಿನ ಸಿದ್ಧಾಂತ, ವಿಚಾರಗಳು ಮತ್ತು ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಪ್ರಚಾರ ನಡೆಸಿ ಮತ ಕೇಳುತ್ತೇನೆ. 20 ವರ್ಷಗಳಿಂದ ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದೂ ಅಶೋಕ ಮನಗೂಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಮತ್ತು ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಸಚಿವ ಎಂ. ಸಿ. ಮನಗೂಳಿ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ದಿ. ಎಂ. ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರಿಗೆ ಜೆಡಿಎಸ್ ಟಿಕೆಟ್ ಫಿಕ್ಸ್ ಎಂದು ಹೇಳಲಾಗಿತ್ತಾದರೂ, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ಖಚೀತತೆ ಇರಲಿಲ್ಲ.
ಅಲ್ಲದೇ, ಅಶೋಕ ಮನಗೂಳಿ ಅವರು ಮಾಜಿ ಸಚಿವ ಎಚ್. ಕೆ. ಪಾಟೀಲ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರಿಂದ ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಕಾಂಗ್ರೆಸ್ ಸೇರ್ಪಡೆಗೆ ಅನುಕೂಲವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ