ಬೆಂಗಳೂರು (ಸೆ.27): ಅವಧಿ ಮುಗಿದ ಬಳಿಕವೂ ತಮ್ಮ ನೆಚ್ಚಿನ ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯವನ್ನು ಮುಂದುವರೆಸಿದ್ದ ಸಿದ್ದರಾಮಯ್ಯ ಅವರನ್ನು ಕಡೆಗೂ ಖಾಲಿ ಮಾಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಕಾವೇರಿ ನಿವಾಸಕ್ಕೆ ಬಿಎಸ್ ಯಡಿಯೂರಪ್ಪ ಹೋಗಲು ಮುಂದಾಗಿದ್ದು, ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಎಸ್ ಯಡಿಯೂರಪ್ಪ ತಮ್ಮ ಅದೃಷ್ಟದ ಮನೆಯಾಗಿದ್ದ ರೇಸ್ ಕೋರ್ಸ್ ರಸ್ತೆಯ ರೇಸ್ವ್ಯೂ ಕಾಟೇಜ್ ನಂ.2 ಮನೆಯಲ್ಲಿ ವಾಸ್ತವ್ಯ ಹೂಡುವುದಾಗಿ ಈ ಹಿಂದೆ ತಿಳಿಸಿದ್ದರು.
![cauvery nivasa]()
ಸರ್ಕಾರದ ಆದೇಶ
ಈ ಹಿನ್ನೆಲೆ ಸಿಎಂಗಳಿಗೆ ನಿಗದಿಯಾಗುವ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರೇ ವಾಸವಾಗಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದಗಿನಿಂದಲೂ ಈಗಿನವರೆಗೂ ಕಳೆದ 6ವರ್ಷಗಳಿಂದ ಸಿದ್ದರಾಮಯ್ಯ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಧಿಕಾರ ಹೋದ ಬಳಿಕವೂ ಈ ಮನೆಯನ್ನು ಅವರು ಖಾಲಿ ಮಾಡಿರಲಿಲ್ಲ. ಆದರೆ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿವಾಸದಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದು ಸಿದ್ದರಾಮಯ್ಯ ಮನೆ ಖಾಲಿ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮ್ಮರೇಸ್ವ್ಯೂ ಕಾಟೇಜ್ ನಂ.2 ನಿವಾಸದಿಂದ ಗೃಹ ಕಚೇರಿಗೆ ಪ್ರತಿನಿತ್ಯ ಸಂಚಾರ ಮಾಡುವುದು ಕಷ್ಟವಾಗುತ್ತಿದೆ. ಅಲ್ಲದೇ ಇದರಿಂದ ಸಿಎಂಗೆ ಅಹವಾಲು ನೀಡಲು ಬರುವ ಜನರಿಗೂ ಸಮಸ್ಯೆಯಾಗುವ ಹಿನ್ನೆಲೆ ಅವರು ಕುಮಾರ ಕೃಪದಲ್ಲಿರುವ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲು ಮುಂದಾಗಿದ್ದಾರೆ.
ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ತಮಗೆ ನಿಗದಿಯಾಗಿದ್ದ ರೇಸ್ವ್ಯೂ ಕಾಟೇಜ್ ನಂ.2 ಮನೆಗೆ ಪ್ರವೇಶಿಸುವುದಕ್ಕೆ ಮುನ್ನವೇ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲಿದ್ದಾರೆ.
ಇದನ್ನು ಓದಿ: ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿ ಆದೇಶ
ಪ್ರಸ್ತುತ ಸಿಎಂ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪಿತೃಪಕ್ಷದ ಬಳಿಕ ಅವರು ಸರ್ಕಾರದಿಂದ ಹಂಚಿಯಾಗಿದ್ದ ರೇಸ್ವ್ಯೂ ಕಾಟೇಜ್ ನಂ.2 ಮನೆಗೆ ಶಿಫ್ಟ್ ಆಗಲು ನಿರ್ಧರಿಸಿದ್ದರು. ಈಗ ರೇಸ್ ಕೋರ್ಸ್ ಬದಲಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಿ ಹೊಸ ಆದೇಶ ಹೊರಡಿಸಲಾಗಿದೆ.