ಕಲಬುರಗಿ: ರಾಜ್ಯದಲ್ಲಿ (Karnataka) ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ (PM Modi) ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ನಾವು ಮಾಡಿದ ಕೆಲಸವನ್ನ ಮೋದಿ ಉದ್ಘಾಟಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಹೆಚ್ಎಎಲ್ ಹೆಲಿಕಾಪ್ಟರ್ (HAL Helicopter Factory) ಘಟಕ UPA ಅವಧಿಯಲ್ಲಿ ಜಾರಿಯಾಗಿದೆ. ಆದರೆ ಈಗ ಮೋದಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಾವು ಅಡುಗೆ ಮಾಡ್ತೇವೆ, ಮೋದಿ ಬಂದು ಬಡಿಸ್ತಾರೆ ಅಂತ ಲೇವಡಿ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ನಾವು ಮಾಡಿದ ಕೆಲಸವನ್ನೇ ಯಾವಾಗಲು ಉದ್ಘಾಟನೆ ಮಾಡುತ್ತಾರೆ. ಎಚ್ಎಎಲ್ ಯುಪಿಎ ಸರ್ಕಾರದಲ್ಲಿ ಮಾಡಿರುವುದಾಗಿದೆ. ಲಂಬಾಣಿ ಜನರನ್ನು ಕಂದಾಯ ಗ್ರಾಮ ಮಾಡಿರೋದು ನಾವು, ಕಾನೂನು ಮಾಡಿರುವುದು, ನಾವು ಹಕ್ಕು ಪತ್ರ ಹಂಚಿಕೆ ಮಾಡಲು ಬಿಜೆಪಿಯವರು ಮೋದಿಯನ್ನ ಕರೆದುಕೊಂಡು ಬಂದಿದ್ದರು.
ನಾವು ಅಡುಗೆ ಮಾಡ್ತೀವಿ, ಮೋದಿ ಬಂದು ಬಡಿಸ್ತಾರೆ. ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ, ಏನು ಕೆಲಸ ಮಾಡಿಲ್ಲವಲ್ಲ. ಏಕೆಂದರೆ ಇದು ಜನ ವಿರೋಧಿ ಸರ್ಕಾರ 40% ಸರ್ಕಾರ. ಪ್ರಧಾನಿ ಮೋದಿ ಬಂದರೆ ವೋಟ್ ಬರುತ್ತೆ ಅಂತ ಬಿಜೆಪಿ ಅಂದುಕೊಂಡಿದೆ. ಆದರೆ ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ. ಬಿಜೆಪಿಯನ್ನು ಸೋಲಿಸಬೇಕು, ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂತ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿದ ಎಲ್ಲವನ್ನು ನಾನು ಒಪ್ಪೊದಿಲ್ಲ
ಪ್ರಹ್ಲಾದ್ ಜೋಶಿ ಅವರ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತಂತೆ ಮಾತನಾಡಿರುವ ಸಿದ್ದು, ಕುಮಾರಸ್ವಾಮಿ ಹೇಳಿದ ಎಲ್ಲವನ್ನು ನಾನು ಒಪ್ಪೊದಿಲ್ಲ. ಆರ್ ಎಸ್ ಎಸ್ ಅವರು ತೀರ್ಮಾನ ಮಾಡಿರಬಹುದು. ಆದರೆ ಅವರು ಬಹುಮತ ಬಂದರೆ ತಾನೇ ನಿರ್ಧಾರ ಮಾಡುವುದು. ಬಿಜೆಪಿಯವರಿಗೆ ಯಾವಾಗ ಬಹುಮತ ಬಂದಿದೆ.
ಇದನ್ನೂ ಓದಿ: Siddaramaiah: ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
ಅಶೋಕ್ಗೆ ಯಾವ ನೈತಿಕತೆ ಇದೆ?
2023 ರಲ್ಲಿ ಬಿಜೆಪಿಗೆ ಕೇವಲ 50 ರಿಂದ 60 ಸೀಟು ಬರುತ್ತೆ ಅಷ್ಟೇ. ಗೂಳಿಹಟ್ಟಿ ಶೇಖರ್ ಸತ್ಯವನ್ನ ಹೇಳಿದ್ದಾರೆ. ಬಿಜೆಪಿಯವರು ಕೆಲಸ ಮಾಡದೆ ಬಿಲ್ ಕೊಟ್ಟಿದ್ದಾರೆ. ಮಾನಪ್ಪ ವಜ್ಜಲ್ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕೆಲಸ ಮಾಡದೆಯೆ ದುಡ್ಡು ಪಡೆದಿದ್ದಾರೆ. ಅಶೋಕ್ ಗಿಂತ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಶೋಕ್ಗೆ ಯಾವ ನೈತಿಕತೆ ಇದೆ ನನಗೆ ಕೊನೆ ಚುನಾವಣೆ ಅಂತ ಹೇಳೊದಕ್ಕೆ ಬಂದಿದ್ದಾರೆ.
ಬಿಎಸ್ವೈ ಮಗನಿಗೆ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಅಂತ ಸಂಪುಟ ವಿಸ್ತರಣೆ ಮಾಡಲ್ಲ
ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೀನಿ. ಪಾಪ ಯಡಿಯೂರಪ್ಪ ಅವರಿಗೆ ಬಿಜೆಪಿಯವರು ಅನ್ಯಾಯ ಮಾಡಿರೋದು, ಅವರನ್ನು ಮನೆಗೆ ಕಳುಹಿಸಿ ಬೊಮ್ಮಾಯಿಯನ್ನ ತಂದಿದ್ದಾರೆ. ಬಿಎಸ್ವೈ ಮಗನಿಗೆ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಅಂತ ಮಂತ್ರಿ ಮಂಡಲ ವಿಸ್ತರಣೆ ಮಾಡಲ್ಲ. ಮುಖ್ಯಮಂತ್ರಿಯ ಎಲ್ಲಾ ಇಲಾಖೆಗಳನ್ನು ಬಿಎಸ್ವೈ ಪುತ್ರನೇ ನೋಡಿಕೊಳ್ಳುತ್ತಾರೆ ಅಂತ ಆರೋಪ ಮಾಡಿದ್ದಾರೆ.
ಎಲ್ಲರೂ ತುಟಿಗೆ ತುಪ್ಪ ಹಚ್ಚಿದ್ರೆ ಇವರು ಹಣೆಗೆ ತುಪ್ಪ ಹಚ್ಚುತ್ತಿದ್ದಾರೆ. ಹಣೆಗೆ ಹಚ್ಚಿದ್ದ ತುಪ್ಪವನ್ನ ನೆಕ್ಕುತ್ತಾ ಕುಡಿ ಎಂದಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನರೇಂದ್ರ ಮೋದಿ ಹೇಳಿದ್ದರು. ರೈತರ ಆದಾಯ ದುಪ್ಪಟ್ಟು ಆಗಿದೆಯಾ? ಭಾರತ ದೇಶದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳುವ ಪ್ರಧಾನ ಮಂತ್ರಿ ಯಾರು ಬಂದಿಲ್ಲ.
ಇದನ್ನೂ ಓದಿ: Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ
ಇವರಪ್ಪನ ಮನೆಯಿಂದ ಅಕ್ಕಿ ಕೊಟ್ಟಿದ್ರಾ?
ನಾವು ಕೊಡುತ್ತಿದ್ದ ಏಳು ಕೆಜಿ ಅಕ್ಕಿಯನ್ನ ಐದು ಕೆಜಿಗೆ ತಂದು ನಿಲ್ಲಿಸಿದ್ದರು. ಏನ್ ಇವರಪ್ಪನ ಮನೆಯಿಂದ ಅಕ್ಕಿ ಕೊಟ್ಟಿದ್ರಾ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡಲಾಗುವುದು. ಅಚ್ಚೇ ದಿನ್ ಎಲ್ಲಿವೆ? ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಮನ್ಮೋಹನ ಸಿಂಗ್ ಸರ್ಕಾರವಿದ್ದಾಗ 413 ರೂಪಾಯಿ ಸಿಲೆಂಡರ್ ಬೆಲೆ ಇತ್ತು. ಇಂದು ಸಿಲೆಂಡರ್ ಬೆಲೆ 1,200 ರೂಪಾಯಿ ಆಗಿದೆ. ನರೇಗಾ ಯೋಜನೆಯಲ್ಲಿ 29 ಸಾವಿರ ಕೋಟಿ ಕಡಿತ ಮಾಡಿದ್ದಾರೆ. ಆದರೂ ಇವರು ಜನಪರ ಬಜೆಟ್ ಅಂತಾರೆ! ಈ ಬಿಜೆಪಿ ಸರ್ಕಾರ ಜನರ ರಕ್ತ ಕುಡಿಯುವುದಕ್ಕೆ ಶುರು ಮಾಡಿದೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ