ರಾಜ್ಯಸಭಾ ಚುನಾವಣೆ (Rajyasabha Polls) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ (JDS) ಮತ್ತು ಬಿಜೆಪಿಯಲ್ಲಿನ (BJP) ಕೆಲ ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಆತ್ಮಸಾಕ್ಷಿಯ ಮತಗಳು ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದೆ ಬರುತ್ತವೆ. ಜೆಡಿಎಸ್ ಗೆ ಈಗಲೂ ಬಿಜೆಪಿ ಗೆಲ್ಲಬಾರದು ಎಂಬ ಇಚ್ಛೆ ಇದ್ರೆ ಅವರ ಅಭ್ಯರ್ಥಿಯನ್ನ ಕಣದಿಂದ ನಿವೃತ್ತಿ ಮಾಡಿಸಲಿ. ನಾವು ಅನೇಕ ಬಾರಿ ಜೆಡಿಎಸ್ ಗೆ ನೆರವಾಗಿಲ್ವಾ? ಹೆಚ್ ಡಿ ದೇವೇಗೌಡರನ್ನ (HD Devegowda) ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ವಾ? ಮೂವತ್ತೇಳು ಸ್ಥಾನ ಇದ್ದ ಜೆಡಿಎಸ್ ಗೆ ನಾವು ಸಿಎಂ ಸ್ಥಾನ ಕೊಡಲಿಲ್ಲವಾ ಎಂದು ದಳಪತಗಳಿಗೆ ಸಾಲು ಸಾಲು ಪ್ರಶ್ನೆ ಕೇಳಿದರು.
ಹಲವು ಬಾರಿ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಗೆ ಸಹಕಾರ ಕೊಟ್ಟಿದ್ದೇವೆ. ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು ಎಂದು ಪ್ರಶ್ನೆ ಮಾಡಿದರು.
ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ
ರಾಜ್ಯಸಭೆ ಚುನಾವಣೆಯಲ್ಲಿ ಬಿಎಸ್ವೈ ಮತ್ತು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ. ಅವನು ಜೆಡಿಎಸ್ ನಲ್ಲಿ ಕ್ಯಾಪ್ಟೀವ್ ಪ್ರೆಸಿಡೆಂಟ್ ಇದ್ದಂತೆ. ಕೂತ್ಕೋ ಅಂದ್ರೆ ಕೂತ್ಕೊಬೇಕು. ನಿಂತ್ಕೊ ಅಂದ್ರೆ ನಿಂತ್ಕೊಬೇಕು ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: C T Ravi: ‘ಕಾಂಗ್ರೆಸ್ನವರು ಚಡ್ಡಿ ಸುಟ್ಕೊಂಡೇ ಇರಲಿ, ನಮ್ಮ ಹಳೇ ಚಡ್ಡಿಗಳು ಇವೆ ಕಳಿಸಿ ಕೊಡುತ್ತೇವೆ, ಸುಟ್ಕಂಡ್ ಇರಿ’
MLC ಮಾಡ್ತೀವಿ ಅಂತ ಇಬ್ರಾಹಿಂ ಕರ್ಕೊಂಡು ಹೋದ್ರು, ಎಂಎಲ್ಸಿ ಮಾಡಿದ್ದಾರಾ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಮಾತನಾಡ್ತಾನೆ. ಅವರ ಬಗ್ಗೆ ಮಾತನಾಡೋದು ಬೇಡ ಎಂದರು.
ಹಿಂದೂಗಳ ಭಾವನೆಗೆ ಧಕ್ಕೆಯಾಗುವ ಕೆಲಸ
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಪರಿಹಾರ ಅಲ್ಲ. ಪರಿಷ್ಕರಣೆಯನ್ನೇ ರದ್ದು ಮಾಡಿ, ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕರಣೆಯೇ ಜಾರಿಯಾಗಲಿ. ಕವಿಗಳ, ಮಹಾತ್ಮರ ಕೃತಿಚೌರ್ಯ ನಡೆದಿವೆ. ನಾನು ಹಿಂದೂ ಅಲ್ಲವಾ, ಅಂಬೇಡ್ಕರ್ ಹಿಂದೂ ಅಲ್ಲವಾ? ಎಲ್ಲರಿಗೂ ಅವಮಾನ ಆಗಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಾಪ್ ಸಿಂಹಗೆ ಏನು ಗೊತ್ತು?
ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ? ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಮೀ ಹೆದ್ದಾರಿ ಬರುತ್ತೆ. ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವ್ರು ಏನು ಮಾಡಿದ್ದಾರೆ ಚರ್ಚೆಗೆ ಬರಲಿ. ಚರ್ಚೆಗೆ ನಾನು ಬರುವುದಿಲ್ಲ ನಮ್ಮ ಪಕ್ಷದ ವಕ್ತಾರರನ್ನ ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Siddaramaiah: ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿದೆ; ಹಳೇ ಸಮಿತಿ ತಯಾರಿಸಿದ ಪುಸ್ತಕವನ್ನೇ ಮಕ್ಕಳಿಗೆ ಕೊಡಿ
ಮೈಸೂರು ವಿಮಾನ ಉನ್ನತೀಕರಣ ಯಾರ ಕಾಲದಲ್ಲಿ ಆಗಿದ್ದು, ಪ್ರತಾಪ್ ಆ ಸಿಂಹನಿಗೆ ಗೊತ್ತಿಲ್ಲ. ದಲಿತರಿಗೆ ನಾವು ಏನ್ ಮಾಡಿದ್ದೀವಿ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ದಲಿತರಿಗೆ. ಕಾಂಗ್ರೆಸ್ ನಲ್ಲಿ ಅವರಿಗೆ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಜೆಡಿಎಸ್ನವರಿಂದ ಹೇಳಿಸಿಕೊಳ್ಳುವುದು ಏನಲ್ಲ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ