ಬೆಂಗಳೂರು (ಜನವರಿ 29); ಆರು ತಿಂಗಳ ನಿರಂತರ ಜಟಾಪಟಿಯ ನಂತರ ಮಾಜಿ ಸಿಎಂ ಯಡಿಯೂರಪ್ಪ ಕೊನೆಗೂ ವಿವಾದಕ್ಕೆ ಕಾರಣವಾಗಿದ್ದ ಕಾವೇರಿ ನಿವಾಸವನ್ನು ಖಾಲಿ ಮಾಡಿ ಹೊಸ ಬಂಗಲೆಗೆ ಶಿಫ್ಟ್ ಆಗಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ನಂತರ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಸಿಎಂ ಸ್ಥಾನ ಕಳೆದುಕೊಂಡ ನಂತರವೂ ಅವರು ಅದೇ ಮನೆಯಲ್ಲಿ ವಾಸವಿದ್ದರು.
ಹೀಗಾಗಿ ಸಿದ್ದರಾಮಯ್ಯ ಆ ಮನೆಯನ್ನು ಕೂಡಲೇ ಖಾಲಿ ಮಾಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಆದರೆ, ಮನೆ ಖಾಲಿ ಮಾಡಲು ಒಪ್ಪದ ಸಿದ್ದರಾಮಯ್ಯ ಆ ಮನೆಯನ್ನು ಮತ್ತೆ ತನಗೆ ಮಂಜೂರು ಮಾಡುವಂತೆ ಸರ್ಕಾರದ ಬಳಿ ಕೇಳಿಕೊಂಡಿದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಬೇಡಿಕೆಯನ್ನು ನಿರಾಕರಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಇಂದು ತಮ್ಮ ಕಾವೇರಿ ನಿವಾಸವನ್ನು ತೆರವುಗೊಳಿಸಿದ್ದಾರೆ.
ಅದೃಷ್ಟದ ಮನೆಗೆ ಕಾಲಿಟ್ಟ ಸಿದ್ದರಾಮಯ್ಯ;
ಕಾವೇರಿ ನಿವಾಸವನ್ನು ತೆರವುಗೊಳಿಸಿರುವ ಸಿದ್ದರಾಮಯ್ಯ ಇದೀಗ ಗಾಂಧಿ ಭವನದ ಹಿಂಭಾಗದಲ್ಲಿರುವ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಪ್ರವೇಶಕ್ಕೂ ಮುನ್ನ ಕುಟುಂಬಸ್ಥರು ವಿಶೇಷ ಪೂಜೆ ನಡೆಸಿ ಮನೆಯ ದ್ವಾರದ ಎದುರು ಬೂದ ಕುಂಬಳ ಕಾಯಿಯನ್ನೂ ಹೊಡೆದಿದ್ದಾರೆ.
ಅಸಲಿಗೆ ಸಿದ್ದರಾಮಯ್ಯ ಸಿಎಂ ಆಗುವುದಕ್ಕೂ ಮೊದಲೂ ಇದೇ ಮನೆಯಲ್ಲಿ ವಾಸವಿದ್ದರು. ಈ ಮನೆಯಿಂದಲೇ 2013ರ ಚುನಾವಣೆ ಎದುರಿಸಿ ಸಿಎಂ ಪಟ್ಟಕ್ಕೇರಿದ್ದರು. ಹೀಗಾಗಿ ಈ ಮನೆಯನ್ನು ಸಿದ್ದರಾಮಯ್ಯ ಅವರ ಅದೃಷ್ಟದ ಮನೆ ಎನ್ನಲಾಗುತ್ತದೆ. ಪ್ರಸ್ತುತ ಇದೇ ಮನೆಯನ್ನು ಮತ್ತೆ ವಿಪಕ್ಷ ನಾಯಕನಿಗೆ ಸರ್ಕಾರ ಮಂಜೂರು ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ