ಹೊಸನಗರ (ಜೂನ್ 19): ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಬಿಡದೇ ಮಳೆ ಸುರಿಯುತ್ತಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದ್ದು, ಗುರುವಾರ ಒಂದೇ ದಿನ 320 ಮಿ.ಮೀ. ಮಳೆ ದಾಖಲಾಗಿದೆ. ಇದು ಕರ್ನಾಟಕದಲ್ಲಿ ಸುರಿದ ಅತಿಹೆಚ್ಚು ಪ್ರಮಾಣದ ಮಳೆಯಾಗಿದೆ. ಹೊಸನಗರದಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಯಿಂದ ಬಹುತೇಕ ರಸ್ತೆಗಳಲ್ಲಿ ಮರ ಬಿದ್ದು, ರಸ್ತೆ ಮಾರ್ಗ ಬಂದ್ ಆಗಿದೆ. ಹೊಳೆಗಳು ತುಂಬಿ ಜಮೀನು ಮುಳುಗಡೆಯಾಗಿದೆ. ಇದರ ನಡುವೆ ಹೊಸನಗರದ ನಿಟ್ಟೂರು ಬಳಿಯ ನಾಗೋಡಿಯಲ್ಲಿ ರಸ್ತೆ ಕುಸಿತವಾಗಿದ್ದು, ಕೊಲ್ಲೂರು ಘಾಟಿ ರಸ್ತೆಯನ್ನು ಬಂದ್ ಮಾಡಲಾಗಿದೆ.
2-3 ತಿಂಗಳಿಂದ ಬಂದ್ ಆಗಿದ್ದ ಹುಲಿಕಲ್ ಘಾಟ್ ಮಾರ್ಗ ಈಗಾಗಲೇ ಓಪನ್ ಆಗಿದೆ. ಜೂನ್ 15ರಿಂದ ಹುಲಿಕಲ್ ಘಾಟ್ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಕೊಲ್ಲೂರು ಮಾರ್ಗವಾಗಿ ಹೋಗುವ ವಾಹನಗಳನ್ನು ಹುಲಿಕಲ್ ಘಾಟ್ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಶಿವಮೊಗ್ಗ, ಹೊಸನಗರದಿಂದ ಉಡುಪಿ, ಕುಂದಾಪುರ, ಭಟ್ಕಳಕ್ಕೆ ಸಂಪರ್ಕ ಕಲ್ಪಿಸುವ ಕೊಲ್ಲೂರು ಘಾಟ್ ಬಂದ್ ಆಗಿದ್ದು, ಆಗಸ್ಟ್ 30ರ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಇದನ್ನೂ ಓದಿ: Karnataka Rain: ಮಲೆನಾಡು, ಕರಾವಳಿಯಲ್ಲಿ ಬಿಡದೆ ಸುರಿಯುತ್ತಿರುವ ಮಳೆ; ವರುಣನ ಆರ್ಭಟಕ್ಕೆ ಜನ ತತ್ತರ
ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಳೆಯ ಆರ್ಭಟದಿಂದ ನಿಟ್ಟೂರಿನ ನಾಗೋಡಿ ಬಳಿಯ ರಸ್ತೆ ಕುಸಿದಿದ್ದು, ತ್ವರಿತ ಕಾಮಗಾರಿ ನಡೆಸಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ. ಅಲ್ಲದೆ, ಆ. 30ರವರೆಗೆ ಕೊಲ್ಲೂರು ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೊಸನಗರ ತಾಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಸಿ ನಾಗೋಡಿ ಘಾಟಿಯ ಆರಂಭದಲ್ಲಿ ರಸ್ತೆ ಕುಸಿತವಾಗಿದೆ.
ಇದನ್ನೂ ಓದಿ: Dharwad Rain: ಧಾರವಾಡದಲ್ಲಿ ಧಾರಾಕಾರ ಮಳೆ; ಕೆರೆ ಒಡೆದು ಸಾವಿರಾರು ಎಕರೆ ಜಲಾವೃತ
2 ವರ್ಷಗಳ ಹಿಂದೆ ಕೂಡ ನಾಗೋಡಿ ಬಳಿ ರಸ್ತೆ ಕುಸಿತವಾಗಿತ್ತು. ಇದೀಗ ಮತ್ತೆ ರಸ್ತೆ ಕುಸಿತವಾಗಿದೆ. ಇದರಿಂದ ನಿಟ್ಟೂರು, ಸಿಗಂದೂರು, ಬ್ಯಾಕೋಡ್, ತುಮರಿ, ಸಂಪೆಕಟ್ಟೆ ಭಾಗದ ಜನರಿಗೆ ಕೊಲ್ಲೂರು, ಕುಂದಾಪುರದ ಸಂಪರ್ಕವೇ ಕಡಿತವಾದಂತಾಗಿದೆ. ರಾಣೆಬೆನ್ನೂರು ಮಾರ್ಗದಿಂದ ಶಿಕಾರಿಪುರ, ಹೊಸನಗರ, ಬೈಂದೂರು ಮಾರ್ಗವಾಗಿ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಹೊಸನಗರ- ನಗರ- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಸಿದ್ಧಾಪುರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ