ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ, ಈ ಹಿರಿಯ ನಾಯಕ ತಮ್ಮ ಇಮೇಜ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಿಸಿದ ನಂತರ ಕರ್ನಾಟಕದ ಒಂದಷ್ಟು ಬಿಜೆಪಿ ನಾಯಕರು ಈ ವಿಚಾರದ ಬಗ್ಗೆ ಜಾಗರೂಕರಾಗಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ BJP ಸರ್ಕಾರವು ಈಗಾಗಲೇ ಯಡಿಯೂರಪ್ಪ ಅವರೇ ಸೂಚಿಸಿರುವ CM Basavaraj Bommai ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಮಯದಲ್ಲಿ ಮಾಜಿ ಸಿಎಂ ಪಕ್ಷದಲ್ಲಿ ಹಾಗೂ ರಾಜ್ಯದಲ್ಲಿ ಸಮಾನಾಂತರ ನಾಯಕತ್ವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಪಕ್ಷದ ಒಳಗೆ ಊಹಾಪೋಹಗಳು ಎದ್ದಿದ್ದು, ಪಕ್ಷದ ನಾಯಕತ್ವವು ಇದರ ಬಗ್ಗೆ ಒಂದು ಕಣ್ಣಿಡುತ್ತದೆ ಎಂದು ಹೇಳಲಾಗಿದೆ. ಸ್ಥಳೀಯವಾಗಿ ಏನಾದರೂ ಸಮಸ್ಯೆ ಉದ್ಭವಿಸಿದರೆ ಆ ವಿಚಾರವಾಗಿ ಬಿಜೆಪಿ ಪಕ್ಷ ತಲೆ ಹಾಕುವುದಿಲ್ಲ ಎನ್ನುವ ಸಂದೇಶ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಕರ್ನಾಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ಅವರು ಈ ಕುರಿತು ಮಾತನಾಡಿ ಕಾರ್ಯಕ್ರಮವನ್ನು ಕೈಬಿಡುವಂತೆ ಯಡಿಯೂರಪ್ಪಗೆ ಮನವರಿಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನಾನು ಮೂರು ದಿನಗಳ ಕಾಲ ಕರ್ನಾಟಕದಲ್ಲಿರುತ್ತೇನೆ. ಪಕ್ಷದೊಳಗಿನ ಕೆಲವು ಸಾಂಸ್ಥಿಕ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ವಿವಿಧ ವಿಷಯಗಳು ನನ್ನ ಕಾರ್ಯಸೂಚಿಯಲ್ಲಿವೆ, ”ಎಂದು ಸಿಂಗ್ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಧ್ಯಾವಧಿಯನ್ನು ಪೂರ್ಣಗೊಳಿಸಿದ ನಂತರ ಕಳೆದ ತಿಂಗಳು ಯಡಿಯೂರಪ್ಪ ಅವರು ತಮ್ಮ ಸಿಎಂ ಕುರ್ಚಿಗೆ ರಾಜೀನಾಮೆ ನೀಡಿದರು. ಆದರೆ ಮಾಜಿ ಸಿಎಂ, ಕಳೆದ ವಾರ ಮಾಲ್ಡೀವ್ಸ್ನಿಂದ ಹಿಂದಿರುಗಿದ ನಂತರ, ಸಕ್ರಿಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿ ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದರು. ಸಾಕಷ್ಟು ಕುತೂಹಲ ಮೂಡಿಸಿದ ಭೇಟಿಯ ಹಿಂದೆ ಏನಿದೆ ಎಂಬುದೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಹಾಗೇ ನೋಡಿದರೆ ಈಶ್ವರಪ್ಪ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ದಂಗೆ ಎದ್ದ ಮೊದಲ ಸಚಿವ ಎಂದೇ ಹೇಳಬಹುದು.
ರಾಜ್ಯ ಪ್ರವಾಸ ಯೋಜನೆ ಸಿದ್ಧವಾಗುತ್ತಿರುವಂತೆ ಯಡಿಯೂರಪ್ಪ ಅವರ ಪುತ್ರ ಹಾಗೂ ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಪ್ರವಾಸದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ಯಡಿಯೂರಪ್ಪ ಅವರ ಪುತ್ರ ಎನ್ನುವ ಇಮೇಜ್ ಒಂದುಕಡೆಯಾದರೆ, ಮುಂದಿನ ಲಿಂಗಾಯತರ ನಾಯಕ ಎಂಬುದಾಗಿ ವಿಜಯೇಂದ್ರ ಅವರು ಮುಂದಿನ ಚುನಾವಣೆಗೆ ಮುನ್ನ ತಮ್ಮ ಸಾಮರ್ಥ್ಯವನ್ನು ಕೇಂದ್ರ ನಾಯಕತ್ವಕ್ಕೆ ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಂತ್ರಿ ಸ್ಥಾನ ಪಡೆಯಲು ವಿಜಯೇಂದ್ರ ಮಾಡಿದ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ. ಈಗ ಮಾಡಲು ಹೊರಟಿರುವ ರಾಜ್ಯ ಪ್ರವಾಸ ಒಂದು ರೀತಿಯಲ್ಲಿ ಪಕ್ಷ ಸಂಘಟನೆ ಎಂದು ಹೇಳುತ್ತಿದ್ದರೂ, ಇದು ತಂದೆ ಮತ್ತು ಮಗನ ಶಕ್ತಿಯನ್ನು ತೋರಿಸುವ ಉಪಾಯ ಎಂದು ಹೇಳಲಾಗುತ್ತಿದೆ.
Arun Singh ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಸೋಮವಾರ ಸಂಜೆ Mysuruಗೆ ಆಗಮಿಸಲಿದ್ದಾರೆ. ಅವರು ರಾಜ್ಯದಲ್ಲಿ ಬಿಜೆಪಿ ಬಲಪಡಿಸುವ ಕುರಿತು ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ