ಬೆಂಗಳೂರು: ಬಿಜೆಪಿಯನ್ನು ಟೀಕಿಸುವ ಭರದಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗದ (Bengaluru Karaga) ಬಗ್ಗೆ ಹಗುರವಾದ ಪದಗಳನ್ನು ಬಳಸಿ ಅವಹೇಳನಕಾರಿಯಾಗಿ ಮಾತನಾಡಿ ಶಾಂತಿನಗರ (Shanthinagar MLA) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರೀಸ್ (NA Haris) ಯಡವಟ್ಟು ಮಾಡಿಕೊಂಡಿದ್ದಾರೆ.
ಹೌದು.. ಶಾಂತಿನಗರ ಶಾಸಕ ಎನ್ಎ ಹ್ಯಾರೀಸ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ‘ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ, ಮುಂದಿನ ಎರಡು ತಿಂಗಳು ನಾಟಕದ ಟೈಮ್, ಹಬ್ಬದ ಸಮಯದಲ್ಲಿ ಕರಗ ಟೈಮ್ನಲ್ಲೆಲ್ಲ ಹಾಕೊಂಡು ಬರ್ತಾರಲ್ಲ, ಅದೇ ಥರ ಇವರೆಲ್ಲ ಈಗ ಓಡಾಡುತ್ತಿರೋದು’ ಎಂದು ಹೇಳಿದ್ದರು. ಶಾಸಕ ಎನ್ಎ ಹ್ಯಾರೀಸ್ ಅವರು ಸಾರ್ವಜನಿಕವಾಗಿ ಕರಗದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕರಗ ಉತ್ಸವ ಸಮಿತಿ ಸೋಮವಾರ ಭಾರಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿತ್ತು.
ಇದನ್ನೂ ಓದಿ: Emotional Story: ಐಸಿಯುನಲ್ಲಿರುವ ಅಮ್ಮನ ಜೊತೆ ಹಾಡು ಹೇಳಿ, ಹೋಳಿ ಆಡಿದ ಮಗಳು; ಎಂಥವರಿಗಾದ್ರೂ ಹೃದಯ ಕರಗದೇ ಇರದು!
ಶಾಸಕ ಎನ್ಎ ಹ್ಯಾರೀಸ್ ಕ್ಷಮೆಯಾಚನೆ
ತಾನು ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಶಾಸಕ ಎನ್ಎ ಹ್ಯಾರೀಸ್, ಇದೀಗ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿರುವ ಹ್ಯಾರೀಸ್, ನಾನು ಭಾಷಣ ಮಾಡುತ್ತಿದ್ದ ಭರಾಟೆಯಲ್ಲಿ ಈ ರೀತಿ ಮಾತನಾಡಿದ್ದೇನೆ. ನನ್ನ ಮಾತಿನ ತಪ್ಪು ನನಗೆ ಅರಿವಾಗಿದೆ. ವಹ್ನಿಕುಲ ಕ್ಷತ್ರಿಯ, (ತಿಗಳ) ಸಮುದಾಯದ ಹಲವು ಸ್ನೇಹಿತರು ನನ್ನ ಅತ್ಮಿಯರು ಇದ್ದಾರೆ. ದಯವಿಟ್ಟು ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಶಾಸಕ ಎನ್ಎ ಹ್ಯಾರಿಸ್ ಅವರು ಮಾಡಿರುವ ವಿಡಿಯೋದಲ್ಲಿ, ‘ನಾನು ಕರಗದ ಬಗ್ಗೆ ಆ ರೀತಿ ಏನೂ ಹೇಳಿಲ್ಲ. ನನ್ನ ಮಾತನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೂ ನಿಮಗೆ ಯಾರಿಗೂ ನೋವಾಗಬಾರದು, ತಪ್ಪು ಭಾವಿಸಬಾರದು. ನಾನು ಆ ರೀತಿ ಯಾವತ್ತೂ ಹೇಳಲ್ಲ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ತಿಗಳ ಸಮುದಾಯದ ಸುದ್ದಿಗೋಷ್ಠಿ ರದ್ದು
ಇನ್ನೊಂದೆಡೆ ಶಾಸಕ ಹ್ಯಾರೀಸ್ ಕರಗದ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಬೆಂಗಳೂರು ಕರಗ ಉತ್ಸವ ಸಮಿತಿ ದೊಡ್ಡ ಮಟ್ಟದಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧಾರ ನಡೆಸಿತ್ತು.
ಅದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಶಾಸಕರ ಮಾತಿಗೆ ಖಂಡನೆ ವ್ಯಕ್ತಪಡಿಸಲು ನಿರ್ಧರಿಸಿದ್ದರು. ಆದರೆ ಶಾಸಕರು ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚನೆ ಕೇಳಿದ ನಂತರ ತಿಗಳ ಸಮುದಾಯದ ಮುಖಂಡರು ತಾವು ಕರೆದಿದ್ದ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ