ಬೆಂಗಳೂರು: ಲವ್ ಜಿಹಾದ್ (Love Jihad) ಹಾಗೂ ಹಲಾಲ್ (Halal) ಪ್ರಮಾಣಪತ್ರ ನಿಷೇಧಿಸುವಂತೆ ಆಗ್ರಹಿಸಿ ಇಂದು ಹಿಂದೂ ಪರ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ನಲ್ಲಿ (Freedom Park) ಬೃಹತ್ ಪ್ರತಿಭಟನೆಯನ್ನು ನಡೆಸಿವೆ. ಮತ್ತೆ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು (Pro-Hindu Organisations) ಹೋರಾಟಕ್ಕೆ ಇಳಿದಿದ್ದು, ಲವ್ ಜಿಹಾದ್ ವಿರೋಧಿ ಪೋಲಿಸ್ ಪಡೆ ನೇಮಕ (Anti-Love Jihad squad) ಹಾಗೂ ಹಲಾಲ್ ಪ್ರಮಾಣಪತ್ರ ನಿಷೇಧಿಸುವಂತೆ ಆಗ್ರಹಿಸಿವೆ. ಇಂದು ಬೆಳಗ್ಗೆ 11 ಗಂಟೆಗೆ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ನೂರಾರು ಹಿಂದೂ ಕಾರ್ಯಕರ್ತರು, ಶೀಘ್ರವೇ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹಿಂದೂ ಪರ ಸಂಘಟನೆಗಳಿಂದ ಬೃಹತ್ ಅಭಿಯಾನ
ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಪರ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಲವ್ ಜಿಹಾದ್ ಹಾಗೂ ಹಲಾಲ್ ಪ್ರಮಾಣಪತ್ರ ನಿಷೇಧಿಸುವಂತೆ ಒತ್ತಾಯ ಮಾಡಿವೆ. ಈ ಕುರಿತಂತೆ ಡಿಸೆಂಬರ್ 11ರಿಂದ ಹಿಂದೂ ಪರ ಸಂಘಟನೆಗಳು ಅಭಿಯಾನವನ್ನು ನಡೆಸಿದ್ದವು. ಇದರ ಮುಂದುವರಿದ ಭಾಗವಾಗಿ ಇಂದು ನೂರಾರು ಕಾರ್ಯಕರ್ತರು ಫ್ರೀಡಂಪಾರ್ಕ್ನಲ್ಲಿ ಸೇರಿದ್ದ ಪ್ರತಿಭಟನೆ ನಡೆಸಿದರು.
ಲವ್ ಜಿಹಾದ್ ವಿರೋಧಿಸಿ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆಯ ಕಿಚ್ಚು
ಲವ್ ಜಿಹಾದ್ ಎಂಬ ವಿಷ ಬಳ್ಳಿಯಿಂದ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸಿ. ಹಿಂದೂ ಪೋಷಕರೇ ಎಚ್ಚರ ಎಚ್ಚರ! ನಿಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ನೀಡಿ ಎಂದು ಪ್ರತಿಭಟನೆ ವೇಳೆ ಕಾರ್ಯಕರ್ತರು ಘೋಷಣೆ ಕೂಗಿದರು. ಅಲ್ಲದೇ ಲವ್ ಜಿಹಾದ್ ಆಗಿದೆಯೇ ಎಂಬುವುದನ್ನು ಪರಿಶೀಲಿಸಲು ವ್ಯವಸ್ಥೆ ರೂಪಿಸಿ. ಲವ್ ಜಿಹಾದ್ ಮಾಡುವ ಮೌಲ್ವಿಗಳನ್ನು ಬಂಧಿಸಿ. ಅದೇ ರೀತಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಎಂದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Belagavi Politics: ಬೆಳಗಾವಿಯಲ್ಲಿ ಬಿಜೆಪಿಗೆ ಬಿಗ್ ಶಾಕ್? ಕುಂದಾನಗರಿಯಲ್ಲಿ ಕುಂದುತ್ತಿದೆಯಾ ಕಮಲ ಶಕ್ತಿ?
"ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರಿಗೆ ಮೋಸ"
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯೆ ಭವ್ಯ ಗೌಡ, ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಹೀಗಾಗಿ ನಮ್ಮ ಸಂಘಟನೆಯಿಂದ ಕೆಲ ಬೇಡಿಕೆ ಇಟ್ಟಿದ್ದೇವೆ. ಹಿಂದೂ ಯುವತಿಯರನ್ನು ಚಿತ್ರ ಹಿಂಸೆ ಕೊಟ್ಟು ಸಾಯಿಸಲಾಗುತ್ತಿದೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರು ಮೋಸ ಹೋಗುತ್ತಿದ್ದಾರೆ. ಮತಾಂತರ ನೀತಿ ಅಡಿಯಲ್ಲಿ ಈವರೆಗೂ ಅಂತಹ ಆರೋಪಿಗಳಿಗೆ ಯಾರಿಗೂ ಶಿಕ್ಷೆ ನೀಡಿಲ್ಲ.
ಯಾವ ಕಾರಣಕ್ಕೆ ಲವ್ ಜಿಹಾದ್ ನಡೆಯುತ್ತಿದೆ ಅಂತ ಮೊದಲು ಅರಿಯಬೇಕು. ಹಲಾಲ್ ಸರ್ಟಿಫಿಕೇಟ್ ನಿಷೇಧ ಮಾಡಬೇಕು. ಇದರಿಂದ ಬರುವ ಹಣವನ್ನು ಭಯೋತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಒಂದು ಧರ್ಮಕ್ಕೆ ಸೀಮಿತವಾದ ಹಲಾಲ್ ಸರ್ಟಿಫಿಕೇಟ್ ಹಂಚಿಕೆ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.
ಹಲಾಲ್ ಪ್ರಮಾಣ ಪತ್ರ ನಿಲ್ಲಿಸಲು ಆಗ್ರಹ
ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಭಾಸ್ಕರನ್, ಬಿಜೆಪಿ ಸರ್ಕಾರಕ್ಕೆ ಹಿಂದೂ ಸಂಘಟನೆಗಳಿಂದ ಎಚ್ಚರಿಕೆ ನೀಡುತ್ತಿದ್ದೇವೆ. ನಿಮಗೆ ವೋಟು ಹಾಕಿ ಅಧಿಕಾರಕ್ಕೆ ತಂದಿರುವುದು ಹಿಂದೂ ಸಂಘಟನೆಗಳು. ಆದರೆ ನಿಮಗೆ ಬೇರೆ ಧರ್ಮದ ಮೇಲೆ ಯಾಕೆ ಇಷ್ಟು ವಾತ್ಸಲ್ಯ? ಸಾಫ್ಟ್ ಹಿಂದುತ್ವ ಬೇಕಾಗಿಲ್ಲ. ಚುನಾವಣೆಯ ಸಮಯದಲ್ಲಿ ಯಾರು ಯಾರಿಗೆ ಮಣ್ಣು ಹಾಕಬೇಕು ಅನ್ನೋದು ನಮ್ಗೆ ಗೊತ್ತು.
ಇದನ್ನೂ ಓದಿ: Bengaluru: ರಾಜ್ಯಾದ್ಯಂತ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ? ಮುಷ್ಕರಕ್ಕೆ ಸಜ್ಜಾದ ನೌಕರರು!
ಮೊದಲು ಜಿಹಾದಿ ಪೋರ್ಸ್ ಗಳನ್ನು ತಡೆಯಿರಿ. ಹಿಂದೂ ಹುಡುಗಿಯರ ಸ್ನೇಹವನ್ನು ಬೆಳೆಸಿ ಬಲೆಗೆ ಕೆಡವಿಕೊಳ್ಳಲು ಮುಸ್ಲಿಂ ಯುವಕರ ಗ್ಯಾಂಗ್ ತಯಾರಿಸಲಾಗಿದೆ. ನಿರಂತರವಾಗಿ ಹಿಂದೂ ಯುವತಿಯರ ಬ್ರೈನ್ ವಾಷ್ ಮಾಡಲಾಗುತ್ತಿದೆ. ನಾವೇನಾದರೂ ತಡೆದರೆ ನೈತಿಕ ಪೊಲೀಸ್ ಗಿರಿ ಅಂತ ಆಗುತ್ತೆ. ಇದೆಲ್ಲವೂ ಬೇಡ, ಮೊದಲು ಲವ್ ಜಿಹಾದ್ ತಡೆಯಲು ಪೊಲೀಸ್ ಪಡೆ ತನ್ನಿ. ಇಲ್ಲದೇ ಇದ್ದರೆ ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ವಿರುದ್ಧವೇ ಕೆಲಸ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ