ಬೆಂಗಳೂರು: ಸಾಮಾನ್ಯವಾಗಿ ಪ್ರತಿ ಬಾರಿ ವಿಧಾನಸಭಾ ಚುನಾವಣೆಗಳು (Assembly Election 2023) ಹತ್ತಿರ ಬಂದಾಗಲೂ ಸಹ ಆಯಾ ರಾಜಕೀಯ ಪಕ್ಷಗಳು (Political Party) ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು (Election Candidates) ಚುನಾವಣೆ ಕಣಕ್ಕೆ ಇಳಿಸುವುದು ಮತ್ತು ಅವರ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಳ್ಳಲು ಬಯಸುತ್ತಿರುವ ಮತ್ತು ಅಂಬೆಗಾಲಿಡಲು ಪ್ರಯತ್ನಿಸುತ್ತಿರುವ ಪಕ್ಷಗಳು ಕೆಲವು ಇವೆ. ಅವುಗಳ ನಿಲುವುಗಳು, ನಿರ್ಧಾರಗಳು ಚುನಾವಣೆ ಬರುವವರೆಗೂ ಬದಲಾಗುತ್ತಲೇ ಇರುತ್ತವೆ. ಇದೆಲ್ಲಾ ಈಗೇಕೆ ನಾವು ಹೇಳುತ್ತಿದ್ದೇವೆ ಅಂತೀರಾ? ಇಲ್ಲೊಂದು ಪಕ್ಷ ಮೊದಲಿಗೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿ, ಈಗ ಆ ಸಂಖ್ಯೆಯನ್ನು ಬರೀ 16 ಕ್ಕೆ ಇಳಿಸಿದೆ ನೋಡಿ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) 224 ಸದಸ್ಯರ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಈಗ ಬರೀ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಈ ಹಿಂದೆ ಪಾರ್ಟಿ 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿತ್ತಂತೆ. ಆದರೆ ಈಗ ಈ ಪಕ್ಷವು ಹಣಕಾಸು ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಬರೀ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ನಿರ್ಧಾರ ಬದಲಾವಣೆ ಬಗ್ಗೆ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಏನ್ ಹೇಳಿದ್ರು?
"ನಮ್ಮದು ಕೇಡರ್ ಆಧಾರಿತ ಪಕ್ಷ, ಆರ್ಥಿಕ ಶಕ್ತಿ, ತೋಳ್ಬಲ ಮತ್ತು ಜಾತಿ ಬಲದ ಆಧಾರದ ಮೇಲೆ ನಾವು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
"ನಾವು 100 ಸೀಟುಗಳಲ್ಲಿ ಸ್ಪರ್ಧಿಸುವ ಯೋಚನೆಯನ್ನು ಹೊಂದಿದ್ದೆವು ಮತ್ತು ಅದಕ್ಕೆ ತಕ್ಕಂತೆ ಕೆಲಸ ಸಹ ಮಾಡಿದ್ದೆವು ಮತ್ತು ನಾವು 54 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದೇವು ಎಂಬುದು ಸಹ ನಿಜ" ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.
ಪ್ರಮುಖ 16 ಕ್ಷೇತ್ರಗಳ ಆಯ್ಕೆ
"ಈಗ ಚುನಾವಣೆಗಳಲ್ಲಿ ಮತಗಳಿಗೆ ಯಾವುದೇ ಮೌಲ್ಯವಿಲ್ಲ, ಪ್ರತಿ ಕ್ಷೇತ್ರದಲ್ಲೂ ಸೀರೆಗಳು ಮತ್ತು ಕುಕ್ಕರ್ ಗಳನ್ನು ವಿತರಿಸುವುದನ್ನು ನೀವು ನೋಡಬಹುದು. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪ್ರಯತ್ನವಾಗಿದೆ. ಈ ಎಲ್ಲಾ ಸವಾಲುಗಳ ನಡುವೆ, ನಾವು ಸಿದ್ಧಾಂತದ ಆಧಾರದ ಮೇಲೆ ಪಕ್ಷವನ್ನು ನಡೆಸುತ್ತಿದ್ದೇವೆ. ಇದರ ಆಧಾರದ ಮೇಲೆ, ನಾವು ಪ್ರಬಲವಾಗಿರುವ 16 ಸ್ಥಾನಗಳನ್ನು ಮಾತ್ರವೇ ರಾಜ್ಯದಲ್ಲಿ ಆಯ್ಕೆ ಮಾಡಿದ್ದೇವೆ” ಅಂತ ಅಫ್ಸರ್ ಹೇಳಿದರು.
“ಪಕ್ಷವು ತಮ್ಮ ಸಂಪನ್ಮೂಲಗಳನ್ನು 54 ಸ್ಥಾನಗಳಿಗಿಂತ 16 ಸ್ಥಾನಗಳಿಗೆ ಬಳಸಿಕೊಳ್ಳುವುದು ಸುಲಭ ಎಂದು ಅವರು ಹೇಳಿದರು. ಪ್ರಚಾರ, ಪೋಸ್ಟರ್ ಗಳು, ಕರಪತ್ರಗಳಂತಹ ಕನಿಷ್ಠ ವೆಚ್ಚಗಳಿಗಾಗಿ ನಮಗೆ ಸಂಪನ್ಮೂಲಗಳು ಬೇಕಾಗುತ್ತವೆ" ಎಂದು ಅಫ್ಸರ್ ಹೇಳಿದರು.
ಹಠಾತ್ ಚುನಾವಣಾ ಘೋಷಣೆಯನ್ನು ಖಂಡಿಸಿದ ಎಸ್ಡಿಪಿಐ ಪಾರ್ಟಿ
"ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಪರಿಶೀಲಿಸಲು ನಾವು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹೊಂದಿದ್ದೇವೆ, ಇದು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ಇದ್ದಕ್ಕಿದ್ದಂತೆ, ಚುನಾವಣೆಯನ್ನು ಘೋಷಿಸಲಾಯಿತು ಮತ್ತು ನಮಗೆ ಸಮಯ ಸಿಗಲಿಲ್ಲ" ಎಂದು ಕೊಡ್ಲಿಪೇಟೆ ಹೇಳುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಎಸ್ಡಿಪಿಐ ಪಾರ್ಟಿ ಮುಂಬರುವ ಚುನಾವಣೆಯಲ್ಲಿ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಬೆಂಗಳೂರಿನ ಪುಲಿಕೇಶಿ ನಗರ ಮತ್ತು ಸರ್ವಜ್ಞನಗರ ಕ್ಷೇತ್ರಗಳಲ್ಲಿ ಈ ಪಕ್ಷ ಸ್ಪರ್ಧಿಸಲಿದೆ.
ಇದನ್ನೂ ಓದಿ: Appachu Ranjan: ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ರಾಜಕೀಯ ಜೀವನ ಹೀಗಿದೆ
2018ರಲ್ಲಿ ಮೂರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ
ಇದಲ್ಲದೆ ರಾಜ್ಯದಲ್ಲಿ ಚಿತ್ರದುರ್ಗ, ತೇರದಾಳ, ಕಾಪು, ಉಳ್ಳಾಲ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ದಾವಣಗೆರೆ, ಹುಬ್ಬಳ್ಳಿ ಪೂರ್ವ, ಮೂಡಿಗೆರೆಯಲ್ಲೂ ಎಸ್ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ ನಡೆದ ಯಾವುದೇ ಚುನಾವಣೆಯಲ್ಲಿ ಈ ಪಾರ್ಟಿ ಗೆದ್ದಿಲ್ಲ. 2018 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷವು ಕೇವಲ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ