news18-kannada Updated:January 12, 2021, 7:27 PM IST
ಆದಿತ್ಯ ಆಳ್ವ
ಬೆಂಗಳೂರು (ಜ. 12): ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಸಿಸಿಬಿ ಪೊಲೀಸರು ಮತ್ತೋರ್ವ ಪ್ರಭಾವಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಾಜಿ ಸಚಿವ ಜೀವರಾಜ್ ಆಳ್ವರ ಮಗ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಬಾಮೈದನಾಗಿರುವ ಆದಿತ್ಯಾ ಆಳ್ವ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ ದಂಧೆಯ 6ನೇ ಆರೋಪಿಯಾಗಿದ್ದ ಆದಿತ್ಯ ಆಳ್ವ ಕೆಲವು ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದರು. ನಿನ್ನೆ ರಾತ್ರಿ ಅವರನ್ನು ಚೆನ್ನೈನಲ್ಲಿ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದಾರೆ. ಆದಿತ್ಯ ಆಳ್ವ ಅವರ ರೆಸಾರ್ಟ್ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು ಪಾರ್ಟಿ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ, ಆದಿತ್ಯ ಆಳ್ವ ಅವರ ಬಂಧನದಿಂದ ಇನ್ನಷ್ಟು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಆದಿತ್ಯನನ್ನು ಬಂಧಿಸಿದ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಡ್ರಗ್ ಕೇಸ್ನ ಎ6 ಆರೋಪಿಯಾಗಿದ್ದ ಆದಿತ್ಯಾ ಆಳ್ವ ವಿರುದ್ಧ ಸೆಪ್ಟೆಂಬರ್ 4ರಂದು ದಾಖಲಾಗಿದ್ದ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲು ಬಳಿಕ ಆದಿತ್ಯ ಆಳ್ವ ಅವರ ಮನೆ ಮೇಲೆ ಸಿಸಿಬಿ ದಾಳಿ ನಡೆಸಲಾಗಿತ್ತು. ಹೆಬ್ಬಾಳದ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಲಾಗಿತ್ತು. ಮನೆಯಲ್ಲೆ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದ ಆದಿತ್ಯ ಆಳ್ವ ಈ ಕೇಸ್ನಲ್ಲಿ ಹಲವರು ಬಂಧನಕ್ಕೊಳಗಾದ ಬಳಿಕ ನಾಪತ್ತೆಯಾಗಿದ್ದರು. ಆದಿತ್ಯ ಆಳ್ವ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದ ಸಿಸಿಬಿ ಪೊಲೀಸರು ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲೂ ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ್ದರು. ಆದರೆ, ತಂಗಿ ಪ್ರಿಯಾಂಕಾ ಆಳ್ವ ಹಾಗೂ ವಿವೇಕ್ ಒಬೆರಾಯ್ ಅವರ ಮನೆಯಲ್ಲೂ ಆದಿತ್ಯ ಪತ್ತೆಯಾಗಿರಲಿಲ್ಲ.
ಇದನ್ನು ಓದಿ: KGF-2 ಅಧೀರ ಸಂಜಯ್ ದತ್ ಹೆಂಡತಿ ಮಾನ್ಯತಾ ದತ್ ಸುಂದರ ಚಿತ್ರಗಳು
ಇದೀಗ ಸುಮಾರು ನಾಲ್ಕು ತಿಂಗಳ ಬಳಿಕ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆದಿತ್ಯ ಆಳ್ವನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಚೆನ್ನೈನಿಂದ ಇಂದು ಮುಂಜಾನೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಆದಿತ್ಯ ಆಳ್ವನನ್ನು ಕರೆತರಲಾಗಿದೆ. ಇನ್ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡದಿಂದ ಆದಿತ್ಯ ಆಳ್ವನನ್ನು ಬಂಧಿಸಲಾಗಿದೆ. ಆದಿತ್ಯ ಆಳ್ವಾ ಚೆನ್ನೈನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ನಿನ್ನೆ ಚೆನ್ನೈಗೆ ತೆರಳಿ ಆದಿತ್ಯನನ್ನು ಬಂಧಿಸಿದ್ದಾರೆ.
ಒಂದುವೇಳೆ ಆದಿತ್ಯ ಅಳ್ವ ಬಾಯಿ ಬಿಟ್ಟರೆ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಕೇಸ್ನ ಬಿಸಿ ತಟ್ಟುವ ಸಾಧ್ಯತೆಯಿದೆ. ಆದಿತ್ಯ ಆಳ್ವನ ಹೌಸ್ ಆಫ್ ಲೈಫ್ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ನಟ ನಟಿಯರಲ್ಲದೆ ಹಲವು ಸೆಲೆಬ್ರಿಟಿಗಳು ಸಹ ಪೇಜ್ 3 ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಹೌಸ್ ಆಫ್ ಲೈಫ್ ಮೇಲೆ ಸಿಸಿಬಿ ದಾಳಿ ವೇಳೆ ಗಾಂಜಾ, ಎಕ್ಸಟೆಸಿ ಮಾತ್ರೆಗಳು ಪತ್ತೆಯಾಗಿತ್ತು. ಪಾರ್ಟಿಗಳು ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಿಸಿಬಿ ಕಲೆ ಹಾಕಿದೆ. ಇದೀಗ ಆದಿತ್ಯ ಆಳ್ವನ ವಿಚಾರಣೆಯಿಂದ ಮತ್ತಷ್ಟು ಮಂದಿಯ ಬಣ್ಣ ಬಯಲಾಗೋ ಸಾಧ್ಯತೆಯಿದೆ.
Published by:
Seema R
First published:
January 12, 2021, 7:27 PM IST