ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಮಹಾಮಳೆಗೆ (heavy rains) ಒಂದು ಪ್ರಾಣವೇ ಹೋಗಿದೆ. ಆಂಧ್ರದಿಂದ ಬೆಂಗಳೂರು ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರ ಕಾರು ಕೆಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಅಲ್ಲಿದ್ದ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡಿದ್ದಳು. ಆಗ ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ (St. Martha's Hospital.) ಕರೆದುಕೊಂಡಲಾಯ್ತು. ಆದ್ರೆ ಯುವತಿಯನ್ನು ದಾಖಲಿಸಿ, ಚಿಕಿತ್ಸೆ ನೀಡಲು ಸೇಂಟ್ ಮಾರ್ಥಾಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಯುವತಿಯ ಕುಟುಂಬಸ್ಥರು ಅತ್ತು, ಕರೆದು ಮನವಿ ಮಾಡಿದ್ರೂ ಆಸ್ಪತ್ರೆ ಸಿಬ್ಬಂದಿ ಕರಗಲಿಲ್ಲ. ಕೊನೆಗೆ ಅಲ್ಲಿ ನೆರೆದಿದ್ದ ಸಾರ್ವಜನಿಕರು, ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದ ಮೇಲೆ ಆಸ್ಪತ್ರೆ ಒಳಗೆ ಸೇರಿಸಿಕೊಳ್ಳಲಾಗಿದೆ. ಆದರೆ ಅಷ್ಟರಲ್ಲಾಗಲೇ ಯುವತಿ ಪ್ರಾಣ ಹೋಗಿದೆ ಅಂತ ಘೋಷಿಸಲಾಯ್ತು. ಇಷ್ಟೆಲ್ಲಾ ಆಗಲು ಸುಮಾರು 1 ಗಂಟೆ ಟೈಮ್ ಆಗಿದೆ. ಆದ್ರೆ ವೈದ್ಯರು ಮೊದಲೇ ಸ್ಪಂದಿಸಿದ್ದರೆ ಯುವತಿ ಉಳಿಯುತ್ತಿದ್ದಳು ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರದಿಂದ ಬಂದಿದ್ದ ಕುಟುಂಬ
ಆಂಧ್ರ ಮೂಲದ ಕುಟುಂಬ ಬೆಂಗಳೂರು ಪ್ರವಾಸಕ್ಕೆ ಬಂದಿತ್ತು ಎನ್ನಲಾಗಿದೆ. ಈ ವೇಳೆ ಕೊನೆಯದಾಗಿ ಕಬ್ಬನ್ ಪಾರ್ಕ್ ನೋಡಿಕೊಂಡು ತೆರಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರಿದ್ದ ಬಾಡಿಗೆ ಕಾರು ಕೆಆರ್ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿದೆ.
ನೋಡ ನೋಡುತ್ತಿದ್ದಂತೆ ಇಡೀ ಕಾರು ನೀರಿನಲ್ಲಿ ಮುಳುಗಿದೆ. ಇದರಲ್ಲಿ ಯುವತಿ ಭಾನುರೇಖಾ ಹಾಗೂ ಅವರ ಕುಟುಂಬಸ್ಥರು ಸೇರಿ ಒಟ್ಟೂ 6 ಮಂದಿ ಇದ್ದರೂ ಎನ್ನಲಾಗಿದೆ. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆ ಇಡೀ ಕುಟುಂಬಸ್ಥರು ಕಂಗಾಲಾಗಿ, ಭಯದಿಂದ ರಕ್ಷಣೆಗಾಗಿ ಕೂಗಿ ಕೊಂಡಿದ್ದಾರೆ.
ಇದನ್ನೂ ಓದಿ: Bengaluru: ಕೆಆರ್ ಸರ್ಕಲ್ನಲ್ಲಿ ಮಳೆ ನೀರಿನಲ್ಲಿ ಮುಳುಗಿದ ಕಾರು; ನಾಲ್ವರ ರಕ್ಷಣೆ, ಯುವತಿ ಸಾವು
ಸಾರ್ವಜನಿಕರು, ರಕ್ಷಣಾ ಸಿಬ್ಬಂದಿಯಿಂದ ರಕ್ಷಣೆ
ಕೊನೆಗೆ ಅಲ್ಲಿದ್ದ ಸಾರ್ವಜನಿಕರು ಕುಟುಂಬಸ್ಥರ ಸಹಾಯಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ರಕ್ಷಣೆಗೆ ಆಗಮಿಸಿದ ಪೊಲಿೀಸರು, ಅಗ್ನಿಶಾಮಕದಳ ಸಿಬ್ಬಂದಿ ಜೊತೆ ಸಾರ್ವಜನಿಕರು ಕೈ ಜೋಡಿಸಿದ್ದಾರೆ. ಸೀರೆ, ಹಗ್ಗ ಇತ್ಯಾದಿಗಳ ಸಹಾಯದಿಂದ ಕಾರಿನಲ್ಲಿದ್ದ 6 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಈ ಪೈಕಿ ಯುವತಿ ಭಾನುರೇಖಾ ತೀವ್ರ ಅಸ್ವಸ್ಥಗೊಂಡಿದ್ದಾರೆ. ಆಟೋ ಒಂದರಲ್ಲಿ ಕೂರಿಸಿ, ಪ್ರಥಮ ಚಿಕಿತ್ಸೆ ನೀಡೋ ಯತ್ನ ಮಾಡಿದ್ದಾರೆ. ಆದರೆ ಆಕೆ ಸ್ಪಂದಿಸುತ್ತಾ ಇರಲಿಲ್ಲ ಎನ್ನಲಾಗಿದೆ. ಕೂಡಲೇ ಸಾರ್ವಜನಿಕರು ಅಲ್ಲೇ ಹತ್ತಿರದಲ್ಲಿದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಅವರನ್ನು ಕರೆತಂದಿದ್ದಾರೆ.
ಚಿಕಿತ್ಸೆ ನೀಡಲು ಸೇಂಟ್ ಮಾರ್ಥಾಸ್ ಆಸ್ಪತ್ರೆ ನಿರಾಕರಣೆ
ಆದರೆ ಅಸ್ವಸ್ಥ ಯುವತಿಯನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಲು ಸೇಂಟ್ ಮಾರ್ಥಾಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಯುವತಿ ಈಗಾಗಲೇ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಎದೆಬಡಿತ ಇತ್ತು ಎನ್ನುತ್ತಿರುವ ಕುಟುಂಬಸ್ಥರು
ಆದರೆ ಯುವತಿ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಕರೆತರುವಾಗ ಯುವತಿ ಎದೆಬಡಿತ ಇತ್ತು. ಆದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ವಿಳಂಬ ಮಾಡಿದ್ರು ಎಂದಿದ್ದಾರೆ.
ಆಕ್ರೋಶದ ಬಳಿಕ ದಾಖಲಿಸಿಕೊಂಡ ಆಸ್ಪತ್ರೆ
ಇಷ್ಟಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾರ್ವಜನಿಕರ ತಾಳ್ಮೆ ಕಟ್ಟೆ ಒಡೆದಿದೆ. ಅಲ್ಲೇ ಇದ್ದ ಮಾಧ್ಯಮದವರೂ ಕೂಡ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕೊನೆಗೆ ಆಕ್ರೋಶಕ್ಕೆ ಮಣಿದ ಆಸ್ಪತ್ರೆ ವೈದ್ಯರು ಭಾನುರೇಖಾರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡೋ ಯತ್ನ ಮಾಡಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸದೇ ಭಾನುರೇಖಾ ಕೊನೆಯುಸಿರು
ಆದರೆ ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೇ ಅಸ್ವಸ್ಥ ಯುವತಿ ಭಾನುರೇಖಾ ಮೃತಪಟ್ಟಿದ್ದಾರೆ. ಆದ್ರೆ ವೈದ್ಯರು ಮೊದಲೇ ಸ್ಪಂದಿಸಿದ್ದರೆ ಯುವತಿ ಉಳಿಯುತ್ತಿದ್ದಳು ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ