news18-kannada Updated:November 10, 2020, 4:45 PM IST
ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
ಬೆಂಗಳೂರು (ನ.10): ರಣರಂಗದ ಕಣವಾಗಿದ್ದ ಆರ್ಆರ್ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ 57,936 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಇದೇ ಮೊದಲ ಬಾರಿ ಚುನಾವಣೆ ಎದುರಿಸಿದ್ದ ಕುಸುಮಾ ಹನುಮಂತರಾಯಪ್ಪ ಸೋಲುಂಡಿದ್ದು, ಜನರ ತೀರ್ಪಿಗೆ ತಲೆ ಬಾಗಿದ್ದಾರೆ. ತಮಗೆ ಮತ ನೀಡಿದವರಿಗೆ ಧನ್ಯವಾದ ಅರ್ಪಿಸಿದ ಅವರು ಈ ಸೋಲನ್ನು ಸ್ವೀಕರಿಸುತ್ತೇನೆ. ಚುನಾವಣೆಯಲ್ಲಿ ನನ್ನ ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಚುನಾವಣೆಯಲ್ಲಿ ಗೆದ್ದಿಲ್ಲ ಎಂಬ ಮಾತ್ರಕ್ಕೆ ಜನಸೇವೆಯಿಂದ ನಿವೃತ್ತಿಯಾಗುವುದಿಲ್ಲ. ಎಂದಿನಂತೆ ನಿಮ್ಮ ಜೊತೆ ಸದಾ ಇದ್ದು, ಸಮಾಜ ಸೇವೆ ಮುಂದುವರೆಸುತ್ತೇನೆ. ಆ ಮೂಲಕ ನೊಂದವರ ದನಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮತಯಾಚನೆ ಸಂದರ್ಭದಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಮನೆ ಮಗಳಂತೆ ಬರಮಾಡಿಕೊಂಡು ಕುಂಕುಮ ಇಟ್ಟು, ಉಡಿ ತುಂಬಿ ತೋರಿದ ಪ್ರೀತಿಗೆ ಅಭಾರಿ ಎಂದಿದ್ದಾರೆ. ಉಪನ್ಯಾಸಕಿಯಾಗಿ, ಸಮಾಜ ಸೇವೆಯಲ್ಲಿದ್ದ ನನಗೆ ರಾಜಕೀಯಕ್ಕೆ ವೇದಿಕೆ ನೀಡಿದ ಆರ್ಆರ್ ನಗರ ಕ್ಷೇತ್ರ ಎಂದೆಂದಿಗೂ ನನ್ನ ಕರ್ಮ. ಇಲ್ಲಿನ ಜನರೊಂದಿಗೆ ಸದಾ ಒಡನಾಟ, ಜನರ ಸೇವೆ ಮುಂದುವರೆಸುವೆ ಎಂದಿದ್ದಾರೆ.
ಕ್ಷೇತ್ರದಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕುಸುಮಾ ಹನುಮಂತರಾಯಪ್ಪ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭರ್ಜರಿ ಪ್ರಚಾರ ನಡೆಸಿದ್ದರು. ಇನ್ನು ಈ ಕ್ಷೇತ್ರದ ಸಂಸದ ಡಿಕೆ ಸುರೇಶ್ ಈ ಕ್ಷೇತ್ರದಲ್ಲಿ ನಿಂತಿರುವುದು ನಾನೇ ಎಂದು ಭಾವಿಸಿ ನಮ್ಮ ಅಭ್ಯರ್ಥಿ ಗೆಲುವಿಗೆ ಮತ ಹಾಕಬೇಕು ಎಂದು ಜನರಲ್ಲಿ ಮನವಿ ಮಾಡಿದ್ದರು. ಈ ಕ್ಷೇತ್ರವನ್ನು ಹಾಗೂ ಅಭ್ಯರ್ಥಿ ಗೆಲುವನ್ನು ಡಿಕೆ ಶಿವಕುಮಾರ್ ಸಹೋದರರು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದರು. ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಹೆಂಡತಿಯಾಗಿದ್ದ ಕುಸುಮಾ ರವರನ್ನು ರಾಜಕೀಯಕ್ಕೆ ಕರೆ ತರುವ ಮೂಲಕ ಡಿಕೆ ಶಿವಕುಮಾರ್ ಜಾತಿ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿದ್ದವು.
ಇದನ್ನು ಓದಿ: ಡಿಕೆಶಿ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಉಪಚುನಾವಣಾ ಸೋಲು ಬಯಸಿದ್ದಾರೆ; ಸಂಸದ ಪ್ರತಾಪ್ ಸಿಂಹ
ಕುಸುಮಾ ಚುನಾವಣೆಗೆ ನಿಲ್ಲುತ್ತಿದ್ದಂತೆ ವಿರೋಧಿಸಿದ್ದ ಡಿಕೆ ರವಿ ತಾಯಿ ಚುನಾವಣೆಯಲ್ಲಿ ತಮ್ಮ ಮಗನ ಭಾವಚಿತ್ರ, ಹೆಸರು ಬಳಸದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಕಡೆ ಕ್ಷಣದಲ್ಲಿ ಕುಸುಮ ಅವರ ಗೆಲುವಿಗೆ ಹಾರೈಸಿ ಅವರು ಶುಭಾಶಯ ತಿಳಿಸಿದ್ದರು. ಆಕೆ ನೊಂದಿದ್ದಾಳೆ. ಜನರು ಕುಸುಮ ಕೈ ಹಿಡಿಯಬೇಕು ಎಂದು ಕುಸುಮಾ ಪರ ಬೆಂಬಲಿಸಿದ್ದರು.
Published by:
Seema R
First published:
November 10, 2020, 4:40 PM IST