ಆನೇಕಲ್(ಫೆ.04): ಇಂದು ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಖುದ್ದು ಶಂಕುಸ್ಥಾಪನೆ ಮಾಡುವ ಮೂಲಕ ಇಲ್ಲಿನ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇಲ್ಲಿನ ಕಾಮಗರಿಗಳಿಗೆ ಚಾಲನೆ ನೀಡಿದ ಬಳಿಕ ವೇದಿಕೆಯನ್ನುದೇಶಿ ಮಾತಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಬೆಂಗಳೂರು ನಗರ ಅತಿವೇಗವಾಗಿ ಬೆಳವಣಿಗೆಯಾಗುತ್ತಿದೆ. ಹಾಗಾಗಿ ಎಲ್ಲರಿಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಕಳೆದ ಬಜೆಟ್ ನಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜನ ಸಾಮಾನ್ಯರಿಗೆ ಟ್ರಾಫಿಕ್ ಜಂಜಾಟವಿಲ್ಲದೇ ಪ್ರಯಾಣ ಮಾಡಲು ಅನುಕೂಲವಾಗಲಿದೆ ಎಂದರು.
ಇನ್ನು, ಈಗಾಗಲೇ ನಮ್ಮ ಸರ್ಕಾರ 94ಸಿ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 9 ಸಾವಿರ ಜನರಿಗೆ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಮನೆಯಿಲ್ಲದ ಹಲವು ಕುಟುಂಬಗಳಿಗೆ ಸೂರು ದೊರಕಿಸಿ ಕೊಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 83 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕ ಗೃಹ ಮಂಡಳಿ ವತಿಯಿಂದ 21 ಸಾವಿರ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಹಂತದಲ್ಲಿದೆ. ರಾಜ್ಯದ ಎಲ್ಲಾ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮೂರೂವರೆ ಲಕ್ಷ ಮನೆಗಳನ್ನು ಮುಂಬರುವ ಜೂನ್ ತಿಂಗಳ ಒಳಗಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು ಯಡಿಯೂರಪ್ಪ.
ಇದನ್ನೂ ಓದಿ: ಸಂಪುಟ ಪುನರ್ ರಚನೆ ಇಲ್ಲ, ವಿಸ್ತರಣೆ ಮಾತ್ರ; ಸಿಎಂ ಬಿಎಸ್ವೈ ಭರವಸೆ
ಮುಂದಿನ ಮೂರು ವರ್ಷಗಳ ಕಾಲ ಸರ್ಕಾರ ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ನಡೆಯುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಾಗಲೀ ಭಿನ್ನಮತವಾಗಲೀ ಇಲ್ಲ. ಮುಖ್ಯಮಂತ್ರಿಗಳು ರಾಜಾಹುಲಿ. ನಮ್ಮ ರಾಜಾಹುಲಿಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವುದು ಗೊತ್ತಿದೆ ಎಂದರು ಕಂದಾಯ ಸಚಿವ ಆರ್ ಅಶೋಕ್.
ಯಡಿಯೂರಪ್ಪನವರು ರೈತ ನಾಯಕರು. ಪ್ರತಿ ಬಾರಿಯೂ ಕೂಡ ಬಜೆಟ್ನಲ್ಲಿ ರೈತರ ಅನುಕೂಲವಾಗುವ ರೀತಿಯಲ್ಲಿ ಬಜೆಟ ಮಂಡನೆ ಮಾಡಿದ್ದಾರೆ. ಇನ್ನು ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಭಿನ್ನಮತಗಳ ಇಲ್ಲ. ಮೂರು ವರ್ಷಗಳ ಕಾಲ ಎಲ್ಲಾ ಶಾಸಕರಿಗೂ ಒಳ್ಳೆ ಕೆಲಸ ಮಾಡುತ್ತೆ. ಅದರಲ್ಲೂ ಯಡಿಯೂರಪ್ಪನವರು ಒಳ್ಳೆ ಬಜೆಟ್ ಮಾಡಿಕೊಡಬೇಕು ಅಂತ ಜನರು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಒಟ್ನಲ್ಲಿ ಸಿಎಂ ಯಡಿಯೂರಪ್ಪ ಯಾವುದೇ ಸಮಸ್ಯೆ ಇಲ್ಲದೆ ಸಂಪುಟ ರಚನೆ ಮಾಡಲಿದ್ದಾರೆ ಎಂದು ಭಿನ್ನಮತೀಯರಿಗೆ ಆರ್ ಆಶೋಕ್ ಪರೋಕ್ಷವಾಗಿ ಟಾಂಗ್ ನೀಡಿದ್ಧಾರೆ. ಹಾಗಾಗಿ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿರುವ ಎಂಪಿ ರೇಣುಕಾಚಾರ್ಯ ಅಂಡ್ ಟೀಮ್ ಮುಂದಿನ ನಡೆ ಏನು ಎಂಬುದು ಸದ್ಯದ ಕೂತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ