ಬೆಳಗಾವಿ: ಮೋದಿ ನಂತರವೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರಧಾನಿ ಮಂತ್ರಿ ಆಗಲಿ ಎಂದು ಟಿಕೆಟ್ ವಂಚಿತ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Former DCM Laxman Savadi) ವ್ಯಂಗ್ಯ ಮಾಡಿದ್ದಾರೆ. ಅಥಣಿ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಲಕ್ಷ್ಮಣ್ ಸವದಿ ಬಿಜೆಪಿ (BJP) ತೊರೆಯುವ ಸುಳಿವು ನೀಡಿದ್ದಾರೆ. ಇಂದು ಸಂಜೆ ಕ್ಷೇತ್ರದ ಜನತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸೋದಾಗಿ ಹೇಳಿದರು. ಬಿಜೆಪಿಯಲ್ಲಿದ್ದಾಗ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿದ್ದೇನೆ. ಇಂದು ನನ್ನನ್ನು ನಂಬಿಕೊಂಡು ಬಂದಿರೋರಿಗೆ ಅನ್ಯಾಯ ಆಗಬಾರದು. ಇಂದು ನಾನೇ ನೆಲೆ ಕಳೆದುಕೊಂಡ ಮೇಲೆ ನಂಬಿಕೊಂಡವರ ಋಣ ತೀರಿಸೋದು ಹೇಗೆ ಎಂದು ಪ್ರಶ್ನೆ ಮಾಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಣ್ ಸವದಿ, ನಾನು ಒಂದು ತಪ್ಪಲು ಅಂತ ಅವರು ತಿಳಿದುಕೊಂಡಿರಬೇಕು. ಎಲ್ಲೋ ಬಿದ್ದು ಹಾರಾಡಿ ಹೋಗುತ್ತೆ ಎಂದು ತಿಳಿದಿದ್ದಾರೆ.
ರಮೇಶ್ ಜಾರಕಿಹೊಳಿಗೆ ಟಾಂಗ್
ರಾಜ್ಯದ ಪ್ರಭಾವಿ, ನಮ್ಮ ಜಿಲ್ಲೆಯ ಆಗರ್ಭ ಶ್ರೀಮಂತರು, ಸಾಹುಕಾರರು ನಮ್ಮ ರಮೇಶ್ ಜಾರಕಿಹೊಳಿ ಅಣ್ಣ. ಅವರಿಗೆ ಆದಷ್ಟು ಶಕ್ತಿ ಒದಗಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮನ್ನು ತಪ್ಪಲು ಎಂದ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.
ನನಗೆ ಟಿಕೆಟ್ ಸಿಗದ ಹಿನ್ನೆಲೆ ಅನೇಕ ಪಕ್ಷಗಳು ನನ್ನನ್ನು ಸಂಪರ್ಕಿಸಿವೆ. ಪಕ್ಷಗಳು ತಮ್ಮ ವಿಚಾರ ಮತ್ತು ಅಭಿಪ್ರಾಯ ತಿಳಿಸಿವೆ. ನಾನು ಸಹ ಜನರ ಅಭಿಪ್ರಾಯ ಪಡೆದು ಹೇಳುತ್ತೇನೆ ಎಂದಿದ್ದೇನೆ. 20 ವರ್ಷ ನನ್ನ ಜೊತೆಯಲ್ಲಿ ನಿಂತಿದ್ದಾರೆ. ಈ ಹಿಂದೆ ಒಂದು ಘಟನೆಯಾದಾಗ ನಾನು ಮತ್ತು ಸಿಸಿ ಪಾಟೀಲ್ ರಾಜೀನಾಮೆ ನೀಡುವ ಪ್ರಸಂಗ ಎದುರಾದಾಗ ಅವರ ಕಣ್ಣಿನಲ್ಲಿ ನೀರು ಬಂತು. ಇಂದು ಅವರೆಲ್ಲರಿಗೂ ಧನ್ಯವಾದ ಹೇಳಬೇಕಿದೆ ಎಂದರು.
ಇದನ್ನೂ ಓದಿ: Mangaluru: ಹಳೆ ಮನೆ ನಂಬಿ ಅದೃಷ್ಟ ಪರೀಕ್ಷೆಗೆ ಇಳಿದ ದಕ್ಷಿಣ ಕನ್ನಡ ಬಿಜೆಪಿ
ಪಕ್ಷದ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಅಧಿಕಾರ ನನಗೆ ಶಾಶ್ವತ ಅಲ್ಲ. ಕ್ಷೇತ್ರದ ಅಭಿವೃದ್ಧಿ, ಕಾರ್ಯಕರ್ತರು ಮತ್ತು ಜನರನ್ನು ರಕ್ಷಣೆ ಮಾಡುವ ಅಮಲು ನನಗಿದೆ. ಅಧಿಕಾರಕ್ಕಾಗಿ ಭಿಕ್ಷೆ ಪಾತ್ರೆ ಹಿಡಿಯುವ ಲಜ್ಜೆಗಟ್ಟೆ ರಾಜಕಾರಣಿ ಅಲ್ಲ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ