ಬೆಂಗಳೂರು (ಮಾ. 4): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ತನಿಖಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ವಿಡಿಯೋದಲ್ಲಿದ್ದ ಯುವತಿಗೆ ರಮೇಶ್ ಜಾರಕಿಹೊಳಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿರುವ ದಿನೇಶ್ ಕಲ್ಲಹಳ್ಳಿ ಘಟನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜೀವ ಬೆದರಿಕೆ ಹಿನ್ನಲೆಯಲ್ಲಿ ಯುವತಿಯ ಸ್ನೇಹಿತರ ಮೂಲಕ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು ಎಂದು ಹೇಳಿದ್ದ ದಿನೇಶ್ ಕಲ್ಲಹಳ್ಳಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಆ ಸ್ನೇಹಿತ ಯಾರು? ಕುಟುಂಬಸ್ಥರು ಯಾರು? ಸಂತ್ರಸ್ಥೆ ಯಾಕೆ ದೂರು ಕೊಡಲು ಬರಲಿಲ್ಲ? ಆಕೆ ವಾಸವಾಗಿರೋದು ಎಲ್ಲಿ? ಎಷ್ಟು ದಿನದ ಹಿಂದೆ ಕುಟುಂಬಸ್ಥರು ಭೇಟಿ ಮಾಡಿದ್ದರು? ಎಂಬುದರ ಬಗ್ಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಸ್ಪಷ್ಟವಾದ ಮಾಹಿತಿ ನೀಡಿಲ್ಲ.
Karnataka Budget Session: ಇಂದಿನಿಂದ ಬಜೆಟ್ ಅಧಿವೇಶನ; ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಸಜ್ಜು
ಇದೇ ಕಾರಣಕ್ಕೆ ಇಂದು ವಿಚಾರಣೆ ನಡೆಸಲು ಮುಂದಾಗಿರುವ ಇನ್ಸ್ಪೆಕ್ಟರ್ ಆ ಸಂತ್ರಸ್ಥೆ ಬಗ್ಗೆ ಮಾಹಿತಿ ಪಡೆದು ದಿನೇಶ್ ವಿಚಾರಣೆ ಬಳಿಕ ಆಕೆಯ ಹೇಳಿಕೆ ಪಡೆಯುವ ಸಾಧ್ಯತೆಯಿದೆ. ಇವತ್ತು ವಿಚಾರಣೆಗೆ ಬರುವಂತೆ ದೂರುದಾರ ದಿನೇಶ್ ಗೆ ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ನೋಟಿಸ್ ನೀಡಿದ್ದರು.
ಇನ್ನು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಸಂತ್ರಸ್ಥೆಗಾಗಿ ಹುಡುಕಾಟ ನಡೆಸಿದ್ದಾರೆ. ಆರ್ಟಿ ನಗರದ ಸುತ್ತಮುತ್ತಲಿನ ಮಹಿಳಾ ಪಿಜಿಗಳಲ್ಲಿ ಆಕೆಗಾಗಿ ಹುಡುಕಾಟ ನಡೆಸಲಾಗಿದೆ. ದೂರುದಾರ ದಿನೇಶ್ ಕಲ್ಲಹಳ್ಳಿ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಲ್ಲಿದ್ದ ಯಾವ ಮಹಿಳಾ ಪಿಜಿಗಳಲ್ಲಿಯೂ ಸಂತ್ರಸ್ಥೆ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ