ಬೆಂಗಳೂರು (ಏ. 2): ಸಿಡಿ ಪ್ರಕರಣದ ಆರೋಪದ ಮೇಲೆ ಇಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್ ಜಾರಿ ಮಾಡಿದೆ. ಇಂದು ಬೆಳಗ್ಗೆ 10.30ಕ್ಕೆ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈಗಾಗಲೇ ವಿಚಾರಣೆ ಎದುರಿಸಿರುವ ರಮೇಶ್ ಜಾರಕಿಹೊಳಿಗೆ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತೆ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದು, ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಎಫ್ಐಆರ್ ದಾಖಲಾಗಿರುವ ಹಿನ್ನಲೆ ಅವರಿಗೆ ಬಂಧನದ ಭೀತಿ ಕೂಡ ಇದ್ದು, ಅವರು ಇಂದಿನ ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ.
ಒಂದು ವೇಳೆ ರಮೇಶ್ ಜಾರಕಿಹೊಳಿ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗದಿದ್ದರೆ ಅವರ, ಎಸ್ಐಟಿ ಕೂಡ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ. ಸಂತ್ರಸ್ತೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿದಾಗಿನಿಂದಲೂ ರಮೇಶ್ ಜಾರಕಿಹೊಳಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ, ನಿರೀಕ್ಷಣಾ ಜಾಮೀನಿಗೂ ಅವರು ಅರ್ಜಿ ದಾಖಲಿಸಿಲ್ಲ. ಈ ಹಿನ್ನಲೆ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಯಾರ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ.
ಮಾ. 29ರಿಂದ ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ಅವರು ಮುಂಬೈನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಿಚಾರಣೆ ಹಿನ್ನಲೆ ಅವರು ದಿಢೀರ್ ಎಂದು ಹಾಜರಾಗುತ್ತಾರಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
10:30 ಕ್ಕೆ ಜಾರಕಿಹೊಳಿಗೆ ಎಸ್ ಐ ಟಿ ಮುಂದೆ ಹಾಜರಾಗಲು ನೊಟೀಸ್ ಹಿನ್ನಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಸ್ ಐ ಟಿ ಹಿರಿಯ ಅಧಿಕಾರಗಳ 10 ಗಂಟೆಗೆ ಸಭೆ ನಡೆಸಲಿದ್ದಾರೆ. ರಮೇಶ್ ಜಾರಕಿಹೊಳಿ ಬಂದರೆ ವಿಚಾರಣೆ ಹೇಗೆ ಮಾಡಬೇಕು. ಯುವತಿ ಹೇಳಿಕೆ ಆಧಾರದ ಮೇಲೆ ಏನೆಲ್ಲಾ ಪ್ರಶ್ನೆಗಳನ್ನು ಮಾಡಬೇಕು. ರಮೇಶ್ ಜಾರಕಿಹೊಳಿಯನ್ನು ಯಾರು ವಿಚಾರಣೆ ಮಾಡಬೇಕು. ಒಂದು ವೇಳೆ ಜಾರಕಿಹೊಳಿ ಇಂದು ಬಂದಿಲ್ಲ ಅಂದ್ರೆ ಮುಂದೇನು..? ಮತ್ತೊಂದು ದಿನಕ್ಕೆ ಬರುವಂತೆ ನೊಟೀಸ್ ನೀಡೋದಾ..? ಅಥವಾ ಬಂಧನ ಮಾಡಿ ವಿಚಾರಣೆ ಮಾಡೋದ ಎನ್ನುವುದರ ಬಗ್ಗೆಎಸ್ ಐ ಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ