ಚಿಕ್ಕೋಡಿ (ಮಾ.07): ಈ ಹಿಂದೆ ಬಿಎಸ್ ಯಡಿಯೂರಪ್ಪ ನಾನು ಇಲಿ-ಬೆಕ್ಕಿನ ಹಾಗೇ ಇದ್ದೇವು. ಆದರೆ, ಈಗ ಅವರನ್ನೇ ನಾವು ಮುಖ್ಯಮಂತ್ರಿಯಾಗಿ ಮಾಡಬೇಕಾಯಿತು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಯಭಾಗ ತಾಲೂಕಿನ ಹಳೆ ದಿಗ್ಗೆವಾಡಿ ಹಾಗೂ ಇಂಗಳಿ ಗ್ರಾಮದ ನಡುವಿನ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇವರ ಆಟದ ಮುಂದೆ ನಮ್ಮದೇನೂ ನಡೆಯಲ್ಲ. ಇನ್ನು ಮೂರು ವರ್ಷ ರಮೇಶ್ ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಾನೆ ಎನ್ನುತ್ತಾರೆ. ಈ ವಂದಂತಿಗಳಿಗೆ ಕಿವಿಗೊಡಬೇಡಿ. ನನ್ನ ರಾಜಕೀಯ ಬಿಜೆಪಿಯಲ್ಲೇ ಮುಗಿಯಲಿದೆ ಎಂದರು.
ಯಡಿಯೂರಪ್ಪನವರು ಕೊಟ್ಟ ವಿಶ್ವಾಸದಂತೆ ಮಂತ್ರಿ ಮಾಡಿದರು. ಕೇಳಿದಂತೆ ನೀರಾವರಿ ಖಾತೆ ನೀಡಿದರು. ಆ ಖಾತೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ. ಅದಕ್ಕೆ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ನೀರಾವರಿ ಸೌಲಭ್ಯಕ್ಕಾಗಿ ಈಗಾಗಲೇ ಎರಡು ಬಾರಿ ಸಭೆ ನಡೆಸಿದ್ದೇನೆ. ಜಿಲ್ಲೆಯ ಯಾವುದೇ ಒಂದು ಸಣ್ಣ ಹಳ್ಳಿಯೂ ಸಹ ನೀರಾವರಿ ವಂಚಿತವಾಗಬಾರದು ಎಂಬ ನಿರ್ಣಯ ಮಾಡಿದ್ದೇವೆ. ಇವತ್ತು ನನ್ನ ಮತಕ್ಷೇತ್ರ ಶೇ 95ರಷ್ಟು ನೀರಾವರಿಯಾಗಿದೆ. ಕೃಷ್ಣಾ ನದಿ ಅಷ್ಟೆ ಅಲ್ಲದೆ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಿಗೂ ಬಂದರು ನಿರ್ಮಾಣ ಮಾಡುವ ನಿರ್ಣಯ ಮಾಡಿದ್ದೇನೆ ಎಂದರು.
ಇದನ್ನು ಓದಿ: ಕೃಷಿ, ಕುರಿ ಸಾಕಾಣಿಕೆಯೊಂದಿಗೆ ನೂರಾರು ಮಹಿಳೆಯರಿಗೆ ಸ್ಫೂರ್ತಿಯಾದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ!
ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಇಟ್ಟಿರಲಿಲ್ಲ, ನಾವು ಮನವಿ ಮಾಡಿದ ನಂತರ ಬಿಎಸ್ ಯಡಿಯೂರಪ್ಪ 10 ಸಾವಿರ ಕೋಟಿ ರೂಪಾಯಿ ಘೋಷಿಸಿದರು ಎಂದು ಇದೇ ವೇಳೆ ತಿಳಿಸಿದರು.
(ವರದಿ: ಲೋಹಿತ್ ಶಿರೋಳ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ