ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತರೊಬ್ಬರು ಹೂಡಿರುವ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಗೌಡ ಮತ್ತು ಶ್ರವಣ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಆಕ್ಷೇಪಣೆ ಸಲ್ಲಿಸಲು ವಿಫಲವಾದ ಪ್ರಾಸಿಕ್ಯೂಷನ್ ಪರ ವಕೀಲ ಕಿರಣ್ ಜವಳಿ ಅವರನ್ನು ನ್ಯಾಯಮೂರ್ತಿ ಲಕ್ಷ್ಮಿನಾರಾಯಣ್ ಭಟ್ ಅವರಿದ್ದ ಪೀಠವು ತರಾಟೆಗೆ ತೆಗೆದುಕೊಂಡಿತು. ಕೋವಿಡ್ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯಕ್ಕೆ ರಜೆ ನೀಡಲಾಗಿದ್ದು, ಇಂದು ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಅವಕಾಶ ಕಲ್ಪಿಸಲಾಗಿತ್ತು.
“ಸೆಕ್ಸ್ ಸಿ ಡಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಮನವಿಯು ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿ ಇದ್ದು, ಅದು ಪೂರ್ಣಗೊಂಡ ಬಳಿಕ ಸದರಿ ಪ್ರಕರಣದ ವಿಚಾರಣೆ ನಡೆಸಬೇಕು” ಎಂದು ಪ್ರಾಸಿಕ್ಯೂಷನ್ ಪರ ವಕೀಲ ಕಿರಣ್ ಜವಳಿ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ತಗಾದೆ ಎತ್ತಿದ ನರೇಶ್ ಮತ್ತು ಶ್ರವಣ್ ಪರ ವಕೀಲ ಎ ಎಸ್ ಪೊನ್ನಣ್ಣ ಅವರು “ಪಿಐಎಲ್ಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ” ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್ಗೆ ನ್ಯಾಯಾಲಯ ನಿರ್ದೇಶಿಸಿದ್ದು, ವಿಚಾರಣೆಯನ್ನು ಮುಂದೂಡಿತು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ಸಿ ಡಿ ಸೃಷ್ಟಿಸಿ, ಬ್ಲ್ಯಾಕ್ ಮೇಲ್ ಮತ್ತು ವಂಚನೆ ಮಾಡಲಾಗಿದೆ ಎಂದು ಜಾರಕಿಹೊಳಿ ಆಪ್ತ ಎನ್ನಲಾದ ನಾಗರಾಜ್ ಎಂಬವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕಳೆದ ಮಾರ್ಚ್ನಲ್ಲಿ ದೂರು ದಾಖಲಿಸಿದ್ದರು.
ಇದನ್ನು ಓದಿ: Karnataka Lockdown: ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆ?; ಸಿಎಂಗೆ ತಜ್ಞರು ನೀಡಿದ ವರದಿಯಲ್ಲೇನಿದೆ?
ಪ್ರಕರಣದ ಹಿನ್ನೆಲೆ
ಮಾರ್ಚ್ 2 ರಂದು ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ದೂರು ನೀಡ್ತಾರೆ. ಅವರು ದೂರನ್ನು ತೆಗೆದುಕೊಳ್ಳದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಮಾಚ್೯ 3ರಂದು ರಮೇಶ್ ಜಾರಕಿ ಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಮಾರ್ಚ್ 4ರಂದೇ ದಿನೇಶ್ ಕನಕಪುರದಲ್ಲಿ ಠಾಣೆಯಲ್ಲಿ ಭಯ ಇದೆ ಅಂತಾ ದೂರು ನೀಡ್ತಾರೆ. ಮಾರ್ಚ್ 9ರಂದು ರಮೇಶ್ ಜಾರಕಿಹೊಳಿ ಗೃಹ ಸಚಿವರಿಗೆ ಪತ್ರ ಬರೆಯುತ್ತಾರೆ. ನಾನು ನಿರಪರಾಧಿ, ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಆ ಸಿಡಿ ನಕಲಿ ಅದರಲ್ಲಿರುವುದು ನಾನಲ್ಲ ಅಂತಾ ಹೇಳುತ್ತಾರೆ. ಜಾರಕಿಹೊಳಿ ಪತ್ರದ ಮೇಲೆ ಮಾರ್ಚ್ 10 ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಎಸ್ಐಟಿ ರಚಿಸಿ ಎಂದು ಸೂಚಿಸುತ್ತಾರೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲು ಸೂಚಿಸುತ್ತಾರೆ. ಅವರು ವಿಚಾರಣೆ ಮಾಡಿ ವರದಿ ನೀಡಲಿ ಎಂದು ಸೂಚಿಸುತ್ತಾರೆ. ಈ ವಿಶೇಷ ತನಿಖಾ ತಂಡದಲ್ಲಿ 6 ಅಧಿಕಾರಿಗಳು ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ