ಬೆಂಗಳೂರು(ಮಾ. 09): ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧದ ಆರೋಪವನ್ನು ಬಲವಾಗಿ ಅಲ್ಲಗಳೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ತನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಇದರ ಹಿಂದಿರುವ ಜನರನ್ನು ಜೈಲಿಗೆ ಹಾಕಿಸುವವರಿಗೂ ಹೋರಾಟ ಮಾಡುತ್ತೇನೆ ಎಂದು ಪಣತೊಟ್ಟರು. ಈ ವೇಳೆ ಗದ್ಗದಿತರಾಗಿ ಕಣ್ಣೀರು ಹಾಕಿದ ಗೋಕಾಕ ಸಾಹುಕಾರ್, ತನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ತನಗೆ ಕುಟುಂಬದ ಗೌರವ ಬಹಳ ಮುಖ್ಯ ಎಂದು ಹೇಳಿದರು.
ತನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ಹೆಸರು ಹೇಳಲು ನಿರಾಕರಿಸಿದ ಅವರು, ಬೆಂಗಳೂರಿನಲ್ಲಿ ಎರಡು ಕಡೆ ಷಡ್ಯಂತ್ರ ನಡೆದಿರುವ ಬಗ್ಗೆ ಮಾಹಿತಿ ನೀಡಿದರು. ಯಾರು ಷಡ್ಯಂತ್ರ ಮಾಡಿದ್ಧಾರೆ ಎಂದು ನನಗೆ ಚೆನ್ನಾಗಿ ಗೊತ್ತು. ಆದರೆ ನಾನು ಈಗ ಹೇಳಲ್ಲ. ಯಶವಂತಪುರದ ಪೊಲೀಸ್ ಠಾಣೆ ಅಕ್ಕಪಕ್ಕದಲ್ಲಿ ನಾಲ್ಕನೇ ಮಹಡಿ ಹಾಗೂ ಒರಾಯನ್ ಮಾಲ್ ಅಕ್ಕಪಕ್ಕದಲ್ಲಿ ಐದನೇ ಮಹಡಿಯಲ್ಲಿ ಈ ಷಡ್ಯಂತ್ರ ನಡೆದಿದೆ. ಇಷ್ಟು ಮಾತ್ರ ನಾನು ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಆ ಯುವತಿಗೆ 50 ಲಕ್ಷ ಅಲ್ಲ 5 ಕೋಟಿ ರೂ ಕೊಟ್ಟಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ಧಾರೆ. ಆಕೆಗೆ ವಿದೇಶದಲ್ಲಿ ಒಂದು ಅಪಾರ್ಟ್ಮೆಂಟ್ ಕೂಡ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಅದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ ಎಂದು ಮಾಜಿ ಜಲ ಸಂಪನ್ಮೂಲ ಸಚಿವರೂ ಆದ ಅವರು ಹೇಳಿದರು.
ಇದನ್ನೂ ಓದಿ: ACB Raid - ಭ್ರಷ್ಟಾಚಾರ ಆರೋಪ: ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 28 ಕಡೆ ಎಸಿಬಿ ದಾಳಿ
ಈ ಸಿಡಿ ಪ್ರಕರಣ ಹೊರಬಂದ ಬೆನ್ನಲ್ಲೇ ಕುಮಾರಸ್ವಾಮಿ ಕೂಡ ಈ ಸಿಡಿ ವಿಚಾರದಲ್ಲಿ ಐದು ಕೋಟಿ ಡೀಲ್ ನಡೆದಿದೆ ಎಂದು ಹೇಳಿದ್ದರು. ಈಗ ರಮೇಶ್ ಜಾರಕಿಹೊಳಿ ಕೂಡ ಇದೇ ವಿಚಾರವನ್ನು ಹೊರಗೆಡವಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ದೇವೇಗೌಡರ ಕುಟುಂಬದ ನೆರವನ್ನು ಸ್ಮರಿಸಿ ಮೆಚ್ಚಿದರು. ತಾನು ಮೈತ್ರಿ ಸರ್ಕಾರವನ್ನು ಬೀಳಿಸಿದ್ದರೂ ದೇವೇಗೌಡರ ಕುಟುಂಬದವರು ನನಗೆ ಧೈರ್ಯ ತುಂಬಿದರು. ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಕೂಡಲೇ ಫೋನ್ ಮಾಡಿ ನನ್ನ ಜೊತೆ ಮಾತನಾಡಿದರು ಎಂದರು.
ಈ ಸಿಡಿ ಹಿಂದೆ 2, 3, 4 ಮಂದಿ ಕುತಂತ್ರದಿಂದ ಕೆಲಸ ಮಾಡಿದ್ದಾರೆ. ಈ ಸಿಡಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಾಯಿತು. ನಾನು ತಪ್ಪೇ ಮಾಡಿಲ್ಲ. ನನಗೆ ಸಂಬಂಧ ಇಲ್ಲ ಅಂತ ಹೇಳಿದ್ದೆ. ಸಿಡಿ ಬಿಡುಗಡೆಗೆ 24 ತಾಸು ಮೊದಲೇ ದೆಹಲಿಯಿಂದ ನಮ್ಮವರೊಬ್ಬರು ಫೋನ್ ಮಾಡಿದ್ದರು. ಆದರೆ, ನಾನು ತಪ್ಪು ಮಾಡಿಲ್ಲದ್ದರಿಂದ ಧೈರ್ಯವಾಗಿದ್ದೆ ಎಂದು ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಧಾರವಾಡದಲ್ಲಿ ಬಡ್ಡಿ ಹಣಕ್ಕಾಗಿ ಮಗು ಮಾರಾಟ ಮಾಡಿದ ಗ್ಯಾಂಗ್; ಒಂದು ವಾಟ್ಸಾಪ್ ಮೆಸೇಜ್ನಿಂದ ಅಮ್ಮನ ಸೇರಿತು ಕಂದಮ್ಮ
ಸಿಡಿ ಹಿಂದಿರುವ ಮಹಾನ್ ನಾಯಕನ ಬಗ್ಗೆ ಮಾತನಾಡಿದ ಅವರು, ನಾನು ಸಚಿವನಾದಾಗ ನಾನು ಈ ಇಲಾಖೆ ನಡೆಸಲು ಆಗುವುದಿಲ್ಲ. ಮೂರು ತಿಂಗಳಲ್ಲಿ ಹೊರಬರುತ್ತಾನೆ ಎಂದು ಒಬ್ಬ ಮಹಾನ್ ನಾಯಕ ಹೇಳಿದ್ದ. ನಾನು ಇಲಾಖೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ತೋರಿಸಿದೆ. ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಗೋಕಾಕ್ ಶಾಕಸರೂ ಆದ ಅವರು ಗಂಭೀರ ಆರೋಪ ಮಾಡಿದರು.
ನಾನು ತಪ್ಪು ಮಾಡಿಲ್ಲ. ಇಂಥ ಹತ್ತು ದೂರು ಕೊಟ್ಟರೂ ಫೇಸ್ ಮಾಡುತ್ತೇನೆ. ನನ್ನನ್ನು ರಣರಂಗದಲ್ಲಿ ಎದುರಿಸಲು ಇವರಿಗೆ ಸಾಧ್ಯವಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿದರೂ ನನ್ನ ವಿರುದ್ಧ ಗೆಲ್ಲಲು ಆಗುವುದಿಲ್ಲ. ಹೀಗಾಗಿ ಈ ರೀತಿ ಪಿತೂರಿ ಮಾಡಿದ್ದಾರೆ ಎಂದು ಆ ಮಹಾನ್ ನಾಯಕನ ವಿರುದ್ಧ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಿಗದಿಗಿಂತ ಅರ್ಧ ತಾಸು ಮೊದಲೇ ನಡೆಸಲಾದ ಈ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಜೊತೆ ಶಾಸಕ ಮಹೇಶ್ ಕುಮಟಳ್ಳಿ, ವಿಧಾನಪರಿಷತ್ ಸದಸ್ಯ ಕೆಪಿ ನಂಜುಂಡಿ ಮೊದಲಾದವರು ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ