ರಾಮನಗರ (ಮಾ. 09): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಜಿಲ್ಲೆಯಲ್ಲಿ ಮಾತ್ರ ದೋಸ್ತಿಗಳ ರಾಜ್ಯಭಾರ ನಡೆಯುತ್ತಿದೆ. ಜಿಲ್ಲೆಗೆ ಡಿಸಿಎಂ ಅಶ್ವಥ್ ನಾರಾಯಣ್ ಉಸ್ತುವಾರಿ ಸಚಿವರಾದರೂ, ಇಲ್ಲಿ ನಡೆಯುವುದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಮಾತುಗಳೇ ಎನ್ನಲಾಗುತ್ತಿದೆ.ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ಬಗ್ಗೆ ಇರುವ ನಿರ್ಲಕ್ಷ್ಯ.
ಅಚ್ಚರಿಯಾದರೂ ಹೌದು. ಜಿಲ್ಲೆಯ ಚನ್ನಪಟ್ಟಣ ಶಾಸಕರಾದ ಎಚ್ಡಿ ಕುಮಾರಸ್ವಾಮಿ ಹಾಗೂ ಕನಕಪುರ ಶಾಸಕ ಡಿಕೆ ಶಿವಕುಮಾರ್ ಮಾತು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಬಿಜೆಪಿ ನಾಯಕರ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತೆ ಆಗಿದೆ. ಇದಕ್ಕೆ ತಕ್ಕಂತೆ ಜಿಲ್ಲಾ ಉಸ್ತುವಾರಿ ಸಚಿವರ ನಡೆ ಕೂಡ ಸಾಕ್ಷ್ಯ ಒದಗಿಸಿದೆ.
ಬಿಎಸ್ವೈ ಸರ್ಕಾರ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವರಾನ್ನಾಗಿ ಮಾಡಲಾಗಿದ್ದರೂ, ಇಲ್ಲಿಯವರೆಗೆ ಅವರು ಜಿಲ್ಲೆಗೆ ಭೇಟಿ ನೀಡಿರುವುದು ಕೇವಲ ಆರು ಬಾರಿ ಮಾತ್ರ. ಅಲ್ಲದೇ ಈವರೆಗೆ ಕೇವಲ ಒಂದು ಕೆಡಿಪಿ ಸಭೆಯನ್ನು ಮಾತ್ರ ನಡೆಸಿದ್ದಾರೆ. ಅಲ್ಲದೇ ಮಾಗಡಿ ಕ್ಷೇತ್ರಕ್ಕೆ ಮಾತ್ರ ಅವರು ತಮ್ಮ ಅಧಿಕಾರವನ್ನು ಸೀಮಿತವಾಗಿರಿಸಿದ್ದಾರೆ ಎಂಬ ಆರೋಪ ಜಿಲ್ಲೆಯ ಜನರಿಂದ ಕೇಳಿ ಬಂದಿದೆ.
ತಮ್ಮ ಹುಟ್ಟೂರಾದ ಮಾಗಡಿಗೆ ಮಾತ್ರ ಸಚಿವರು ಬಂದು ಹೋಗುತ್ತಾರೆ. ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಜಿಲ್ಲೆಗೆ ಬರಲು ಮಾತ್ರ ಸಚಿವರಿಗೆ ಯಾಕೋ ಮನಸ್ಸಿಲ್ಲ ಎಂಬ ಭಾವನೆ ಕಾಣುತ್ತಿದೆ. ಜಿಲ್ಲೆಯ ಪ್ರವಾಸ ಕೈಗೊಳ್ಳುವಲ್ಲಿ ಡಿಸಿಎಂ ವಿಫಲವಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸುವ ಆಲೋಚನೆ ಕೂಡ ಅವರಿಗೆ ಕಾಣುತ್ತಿಲ್ಲ ಎಂದು ಕನ್ನಡ ಪರ ಹಿರಿಯ ಹೋರಾಟಗಾರ ರಮೇಶ್ ಗೌಡ ಆರೋಪಿಸಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 42ಕ್ಕೇರಿಕೆ; ವಿಶ್ವಾದ್ಯಂತ 3,800 ದಾಟಿದ ಸಾವಿನ ಸಂಖ್ಯೆ
ಉಸ್ತುವಾರಿ ಸಚಿವರು ಒಲ್ಲದ ಮನಸ್ಸಿನಿಂದ ಅಧಿಕಾರ ವಹಿಸಿಕೊಂಡಂತೆ ಇದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿಯೇ ಎಸ್.ಟಿ. ಸೋಮಶೇಖರ್ ರಾಮನಗರ ಜಿಲ್ಲಾ ಉಸ್ತುವಾರಿ ನನಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಜಿಲ್ಲೆಯ ಜನರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅಶ್ವಥ್ ನಾರಾಯಣ್ಗೆ ಕ್ಷೇತ್ರದ ಬಗ್ಗೆ ಮನಸ್ಸಿಲ್ಲದಿದ್ದರೆ ನೂತನ ಸಚಿವರಿಗೆ ಕ್ಷೇತ್ರ ಬಿಟ್ಟುಕೊಡುವುದು ಉತ್ತಮ ಎನ್ನುತ್ತಿದ್ದಾರೆ ಜಿಲ್ಲೆಯ ಜನರು.
(ವರದಿ: ಎಟಿ ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ