ರಾಮನಗರ : ಇಂದು ವಿಶ್ವ ಪೋಷಕರ ದಿನ. ಆದರೆ ರೇಷ್ಮೆನಗರಿಯಲ್ಲಿ ಪೋಷಕರ ದಿನದಂದೇ ಹೆತ್ತವರು ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ವಿರೋಧದ ನಡುವೆಯೂ ಮಗಳು ಪ್ರೇಮವಿವಾಹವಾಗಿದ್ದರಿಂದ ನೊಂದ ಪೋಷಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆಯಷ್ಟೇ ಮಗಳು ಪ್ರೀತಿಸಿದ ಯುವಕನನ್ನು ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದರಿಂದ ನೊಂದ ತಂದೆ-ತಾಯಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಈ ದುರಂತ ಘಟನೆ ನಡೆದಿರುವುದು ಚನ್ನಪಟ್ಟಣ ತಾಲೂಕಿನ ತೆಂಕನಹಳ್ಳಿದೊಡ್ಡಿ ಗ್ರಾಮದಲ್ಲಿ. ರಮೇಶ್ (50) ಹಾಗೂ ಅವರ ಪತ್ನಿ ಶೈಲಜಾ (42) ಆತ್ಮಹತ್ಯೆಗೆ ಶರಣಾಗಿದ್ದಾರೆ.
ತೆಂಕನಹಳ್ಳಿದೊಡ್ಡಿ ಗ್ರಾಮದ ರಮೇಶ್ ಅವರ ಮಗಳು ತನ್ನ ಪ್ರಿಯಕರನ ಜೊತೆ ನಿನ್ನೆ ಓಡಿ ಹೋಗಿ ಮದುವೆಯಾಗಿದ್ದಳು. ಇದರಿಂದ ನೊಂದ ಪೋಷಕರು ಇವತ್ತು ಬೆಳ್ಳಂಬೆಳಗ್ಗೆ ತೋಟಕ್ಕೆ ಹೋಗಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ದಂಪತಿಯ ಮಗಳು ಶಿಲ್ಪಾ ತಮ್ಮದೇ ಗ್ರಾಮದ ಪುನೀತ್ ಎಂಬ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ಹಲವು ಸಲ ಮಗಳ ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ಮನಸು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದ ಮಗಳು ಏಕಾಏಕಿ ಮನೆಯಿಂದ ಪರಾರಿಯಾಗಿ ಮದುವೆ ಮಾಡಿಕೊಂಡಿದ್ದು ಪೋಷಕರಿಗೆ ಆಘಾತ ತಂದಿತ್ತು. ಇದರಿಂದ ಮನನೊಂದು ದಂಪತಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ರಮೇಶ್ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಹಲವು ಬಾರಿ ಗ್ರಾಮ ಪಂಚಾಯ್ತಿ ಸದಸ್ಯನಾಗಿಯೂ ಆಯ್ಕೆಯಾಗಿದ್ದರು. ಈ ಕಾರಣಕ್ಕಾಗಿ ಗ್ರಾಮದಲ್ಲಿ ಸಣ್ಣ-ಪುಟ್ಟ ಗಲಾಟೆ ನಡೆದ ಸಂದರ್ಭದಲ್ಲಿ ರಮೇಶ್ ನ್ಯಾಯ ಪಂಚಾಯ್ತಿ ಮಾಡುತ್ತಿದ್ದರು. ಈಗ ಮಗಳ ಪ್ರೇಮ ವಿವಾಹದಿಂದ ಮಾನ ಹೋಯಿತು ಎಂದು ಭಾವಿಸಿದ ರಮೇಶ್ ಪತ್ನಿ ಸಮೇತರಾಗಿ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ರಮೇಶ್ ಅವರ ಪುತ್ರಿಯನ್ನು ಪ್ರೇಮವಿವಾಹವಾಗಿರುವ ಯುವಕ ಕೂಡ ಇದೇ ಗ್ರಾಮದವನಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಗ್ರಾಮಸ್ಥರು ಯಾರಿಗೂ ಹೇಳದೇ ಅಂತ್ಯಕ್ರಿಯೆ ಮಾಡಿ ಮುಗಿಸುವ ಪ್ಲಾನ್ ಮಾಡಿದ್ದರು. ಆದರೆ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಯಾರೂ ದೂರು ಕೊಡದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರಪರೀಕ್ಷೆಗೆ ಕಳುಸಿಕೊಟ್ಟಿದ್ದಾರೆ. ಎಂ.ಕೆ ದೊಡ್ಡಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿದ್ಯಾ-ಇರ್ಷಾದ್ ಮದುವೆಗೆ ‘ಧರ್ಮ’ಸಂಕಟ; ಮಧ್ಯರಾತ್ರಿ ಕಾಣೆಯಾದ ಪ್ರೇಮಿಗಳ ದುರಂತ ಅಂತ್ಯ!
ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,27,510 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ 2,81,75,044ಕ್ಕೆ ಏರಿಕೆ ಆಗಿದೆ. ಒಂದೇ ದಿನ ದೇಶಾದ್ಯಂತ 2,795 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,31,895ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ಈವರೆಗೆ 2,59,47,629 ಮಂದಿ ಕೊರೋನಾದಿಂದ ಗುಣಮುಖ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸತತವಾಗಿ 19ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣ ಆಗುವವರ ಸಂಖ್ಯೆ ಹೆಚ್ಚಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 9.04ರಷ್ಟಾಗಿದೆ. ದೈನಂದಿನ ಪಾಸಿಟಿವಿಟಿ ದರ 6.62ರಷ್ಟಾಗಿದ್ದು ಸತತವಾಗಿ 8 ದಿನಗಳವರೆಗೆ ಶೇಕಡಾ 10ಕ್ಕಿಂತ ಕಡಿಮೆ ಇದೆ. . ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 21 ಕೋಟಿ ದಾಟಿದೆ. ಈವರೆಗೆ 21,60,46,638 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ