ರಾಮನಗರ : ಜಿಲ್ಲೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 2 ಆಂಬ್ಯುಲೆನ್ಸ್ ಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ರಾಮನಗರ ತಾಲೂಕಿನಲ್ಲಿ ಆಂಬ್ಯುಲೆನ್ಸ್ ಗಳ ಕೊರತೆ ಇದ್ದ ಕಾರಣ ಹೆಚ್ಡಿಕೆ ಕೊಡುಗೆ ನೀಡಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ಆಂಬ್ಯುಲೆನ್ಸ್ ಗಳನ್ನು ಹಸ್ತಾಂತರಿಸಿದರು. ಸ್ವಂತ ಹಣದಿಂದ 2 ಆಂಬ್ಯುಲೆನ್ಸ್ ಕೊಡುಗೆ ನೀಡಿದ್ದು ಕೊರೋನಾ ಮುಗಿಯುವವರೆಗೆ ಸಾರ್ವಜನಿಕ ಸೇವೆಗೆ ಲಭ್ಯವಿರಲಿದೆ. ಇನ್ನು ಆಂಬ್ಯುಲೆನ್ಸ್ ನ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಲು ಹೆಚ್ಡಿಕೆ ಭರಿಸಿದ್ದಾರೆ.
ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಸಾಕಷ್ಟು ತೊಂದರೆಯಾಗ್ತಿದೆ. ಜಿಲ್ಲೆಯಲ್ಲಿಯೂ ಸಹ ಹಲವಾರು ಜನ ಸಾವನ್ನಪ್ಪಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಂಬ್ಯುಲೆನ್ಸ್ ಗಳಿಲ್ಲದೇ ತೊಂದರೆ ಪಡುತ್ತಿದ್ದರು. ಹಾಗಾಗಿ ಕುಮಾರಸ್ವಾಮಿಯವರು ಈ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಎರಡು ಆಂಬ್ಯುಲೆನ್ಸ್ಗಳನ್ನು ನೀಡಿದ್ದಾರೆಂದು ತಿಳಿಸಿದರು.
ಕೊರೋನಾ ಎರಡನೇ ಅಲೆ ಪ್ರಾರಂಭವಾದ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಮನಗರ ತಾಲೂಕಿನ ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಮನಗರ-ಚನ್ನಪಟ್ಟಣ ಕ್ಷೇತ್ರದ ಯಾವೊಬ್ಬ ಕಾರ್ಯಕರ್ತರು ಕಷ್ಟ ಎಂದರೂ ಸಹ ಹೆಚ್ಡಿಕೆ ತಮ್ಮ ತೋಟದ ಮನೆಯಿಂದಲೇ ಪರಿಹರಿಸುತ್ತಿದ್ದಾರೆ. ಜೊತೆಗೆ ದಿನನಿತ್ಯವೂ ಸಹ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಕೊರೋನಾ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಹ ಪರಿಹರಿಸುತ್ತಿದ್ದಾರೆ.
ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಲಸಿಕೆ ಕೊಡೋಕೆ ಆಗುತ್ತಿಲ್ಲ, ಕರ್ನಾಟಕಕ್ಕೆ ಕಾಂಗ್ರೆಸ್ ಲಸಿಕೆ ಕೊಡುತ್ತೆ: ಸಿದ್ದರಾಮಯ್ಯ
ಇನ್ನು ಕಳೆದ ಕೆಲದಿನಗಳ ಹಿಂದೆ ರಾಮನಗರ ಕ್ಷೇತ್ರಕ್ಕೆ ಎರಡು ಆಂಬುಲೆನ್ಸ್ ಕೊಡುತ್ತೇನೆಂದು ಹೇಳಿದ್ದರು, ಹಾಗಾಗಿ ಇವತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಮೂಲಕ ಹಸ್ತಾಂತರ ಮಾಡಿಸಿದ್ದಾರೆ. ಪ್ರಮುಖವಾಗಿ ರಾಮನಗರದಲ್ಲಿ ಯಾವೊಬ್ಬ ಕೊರೋನಾ ಸೋಂಕಿತ ಸಾವನ್ನಪ್ಪಿದ ಸಂದರ್ಭದಲ್ಲಿ ಆ ವ್ಯಕ್ತಿಯ ದೇಹವನ್ನ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಈವರೆಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ಆಂಬುಲೆನ್ಸ್ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಕಾರಣ ರೊಗಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಈಗ ಹೆಚ್ಡಿಕೆ ನೀಡಿರುವ ಹೆಚ್ಚುವರಿ ಎರಡು ಆಂಬ್ಯುಲೆನ್ಸ್ ನಿಂದಾಗಿ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲದಿನಗಳ ಹಿಂದೆ ಕೊರೋನಾ ಸೋಂಕಿತರು ನಮಗೆ ಸೂಕ್ತ ಚಿಕಿತ್ಸೆ, ಊಟದ ವ್ಯವಸ್ಥೆ, ಸ್ವಚ್ಛತೆ ಇಲ್ಲ ಎಂದು ಚನ್ನಪಟ್ಟಣದ ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಸೆಂಟರ್ ನಲ್ಲಿ ಗಲಾಟೆ ಮಾಡಿದ್ದರು. ಕೂಡಲೇ ಇದರ ಬಗ್ಗೆ ತಿಳಿದು ಕುಮಾರಸ್ವಾಮಿ ತಮ್ಮ ತೋಟದ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮಾಡಿ ಸೋಂಕಿತರಿಗೆ ಧೈರ್ಯ ತುಂಬಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಒಟ್ಟಾರೆ ರಾಮನಗರ-ಚನ್ನಪಟ್ಟಣದ ಜನರ ಯಾವುದೇ ಸಮಸ್ಯೆ ಇದ್ದರೂ ಸಹ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಗೆಹರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ದೇಶದಲ್ಲಿ ಕಳೆದ ಏಳು ದಿನಗಳಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಹಿಂದಿನ ಏಳು ದಿನಗಳಲ್ಲಿ ವರದಿಯಾದ ಪ್ರಕರಗಳ ನಡುವಿನ ವ್ಯತ್ಯಾಸ ಶೇಕಡಾ 23ರಷ್ಟು. ವಿಶ್ವ ಮಟ್ಟದಲ್ಲಿ ಈ ಸರಾಸರಿ ಶೇಕಡಾ 13ರಷ್ಟಿದೆ. ದೇಶದಲ್ಲಿ ಈಗ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಸೋಮವಾರ ತಮಿಳುನಾಡಿನಲ್ಲಿ 34.87 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದರೆ ಕರ್ನಾಟಕದಲ್ಲಿ 25.31 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸಂಪೂರ್ಣ ನಿಯಂತ್ರಣ ಆಗುತ್ತಿದ್ದು ಕೇವಲ 22.12 ಸಾವಿರ ಪ್ರಕರಣಗಳು ಗೋಚರಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ