ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದಲ್ಲಿ ಕಲಾವಿದ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಇಂದು ನಟ ಅಜಯ್ ರಾವ್ ಅವರನ್ನು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆಗೆ ಹಾಜರಾದ ಬಳಿಕ ಮಾತನಾಡಿದ ಅಜಯ್ ರಾವ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದರು. ಬಿಡದಿ ಬಳಿಯ ಜೋಗಯ್ಯನಪಾಳ್ಯದ ಬಳಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ನಲ್ಲಿ ಸಾಹಸ ಕಲಾವಿದ ವಿವೇಕ್ ಎಂಬಾತ ಸಾವನ್ನಪ್ಪಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಟ ಅಜಯ್ ರಾವ್ ನ್ನ ಇಂದು ಠಾಣೆಗೆ ಕರೆಸಿ ಡಿವೈಎಸ್ಪಿ ಮೋಹನ್ ಕುಮಾರ್ ಸರಿಸುಮಾರು 1 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು.
ವಿಚಾರಣೆ ಮುಗಿಸಿ ನಂತರ ಮಾತನಾಡಿದ ಅಜಯ್ ರಾವ್ ವಿರೋಧಿಗಳಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದರು. ನಾನು ಹೆದರಿಕೊಂಡು ಬೇಲ್ ಗೆ ಅಪ್ಲಿಕೇಶನ್ ಹಾಕಿಲ್ಲ.ಅದ್ಯಾರೋ ಮಹಾನುಭಾವರು ಹೇಳ್ತಿದ್ದಾರೆ. ನಾನು SSLC ಓದಿದ್ದೇನೆ ಅಷ್ಟೇ, ಪಿಯುಸಿ ಕೂಡ ಓದಿಲ್ಲ. ಹೆದರಿಕೆ ಇದ್ದಿದ್ದರೇ ನಾನು ಓದು ನಿಲ್ಲಿಸಿ ಬೆಂಗಳೂರಿಗೆ ಬರುತ್ತಿರಲಿಲ್ಲ. ನಾನು ನನಗಾಗಿ ಬೇಲ್ ಗೆ ಅಪ್ಲಿಕೇಶನ್ ಹಾಕಿಲ್ಲ, ನನ್ನನ್ನ ನಂಬಿ ಕೋಟ್ಯಾಂತರ ರೂಪಾಯಿ ಬಂಡಾವಾಳ ಹಾಕಿದ್ದಾರೆ. ಹಲವು ಸಿನಿಮಾಗಳು ಬಾಕಿ ಇದ್ದಾವೆ. ರೀ ರಿಲೀಸ್ ಸಿನಿಮಾ ಇದೆ, ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗಳು ಇದ್ದಾವೆ. ಎರಡು ವರ್ಷದ ಹಿಂದೆ ಕಮಿಟ್ ಆಗಿರುವ ಸಿನಿಮಾ ಕೂಡ ಇದೆ. ನಾನು ಜೈಲಿಂದ ಹಾರಿಕೊಂಡು ಬಂದು ಶೂಟಿಂಗ್ ಮಾಡ್ತೀನಿ ಅನ್ನೋಕಾಗುತ್ತಾ. ಹಾಗಾಗಿ ಲೀಗಲ್ ಆಗಿ ನಾನು ಬೇಲ್ ಗೆ ಅಪ್ಲಿಕೇಶನ್ ಹಾಕಿದ್ದೇನೆ ಅಷ್ಟೇ, ಭಯದಿಂದ ಅಲ್ಲ ಎಂದರು.
ಇನ್ನು ನಾನು ಸ್ಥಳದಲ್ಲಿ ಇರಲಿಲ್ಲ ಅನ್ನೋದಕ್ಕೆ ಒಂದು ವಿಡಿಯೋ ತೋರಿಸಿ. ರಂಜಿತ್ ಗೆ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ಖಾಸಗಿಯಾಗಿ ವಿಡಿಯೋ ಮಾಡಿ ತಪ್ಪಾಗಿ ಹೇಳಿಸಿದ್ದಾರೆ. ಈ ರೀತಿ ಮಾತನಾಡಿಸುವ ಅವಶ್ಯಕತೆ ಏನಿತ್ತು ಅನ್ನೋದು ಗೊತ್ತಿಲ್ಲ. ಕೆಲವರು ಕೆಟ್ಟದಾಗಿ ಬಿಂಬಿಸುತ್ತಾರೆ, ಒಳ್ಳೆಯದನ್ನು ಬಿಂಬಿಸುತ್ತಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳೊಕೆ ಆಗಲ್ಲ. ಸಹಾಯ ಅಂದರೆ ಸೆಟ್ ನಲ್ಲಿ ನಾನೊಬ್ಬನ್ನೇ ಇರಲಿಲ್ಲ, ಎಲ್ಲರೂ ಇದ್ದಾಗ ನಾನು ಎಲ್ಲರಂತೆ ಹೋಗಲು ಆಗಲ್ಲ. ನಾನು ಒಬ್ಬ ತಿಳುವಳಿಕೆ ಇರುವ ವ್ಯಕ್ತಿ. ಗುಂಪು ಸೇರಿರುವ ಸ್ಥಳದಲ್ಲಿ ನಾನು ಹೋಗೋದು ಸರಿಯಲ್ಲ.
ಇದನ್ನೂ ಓದಿ: Love U Rachu| ಲವ್ ಯು ರಚ್ಚು ಸಿನಿಮಾ ದುರಂತ; ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಬೇರೆಯವರು ಇದ್ದಾಗ ನಾನು ಕೂಲ್ ಆಗಿ ಮುಂದಿನ ಬಗ್ಗೆ ಯೋಚನೆ ಮಾಡಬೇಕು. ಇನ್ನು ಫಿಲ್ಮ್ ಚೇಂಬರ್ ಒಂದು ರೂಲ್ಸ್ ಮಾಡಲಿ, ಚಿತ್ರೀಕರಣದ ವೇಳೆ ಏನೇ ಆದರೂ ಹೀರೋ ಮೊದಲು ಹೋಗಬೇಕೆಂದು ರೂಲ್ಸ್ ಮಾಡಲಿ. ಈ ರೀತಿ ತಪ್ಪು ಮಾಹಿತಿ ಹಬ್ಬಿಸುತ್ತಿರುವವರು ಸಿಕ್ಕರೆ ಒಂದು ನಾಲ್ಕು ಒಳ್ಳೆಯ ಮಾತು ಹೇಳಬಹುದು. ಆದರೆ ಅಂತಹವರು ಯಾರು ಎಂದು ಗೊತ್ತಿಲ್ಲ. ಚಿತ್ರೀಕರಣದ ವೇಳೆ ಹೀರೋಯಿನ್ ಇರಲಿಲ್ಲ, ಪ್ಯಾಚ್ ವರ್ಕ್ ನಡೆಯುತ್ತಿತ್ತು ಅಷ್ಟೇ. ಆದರೆ ಸಾಕ್ಷಗಳನ್ನ ನಾಶ ಪಡಿಸುವ ಕೆಲಸವನ್ನ ಚಿತ್ರತಂಡ ಮಾಡಿಲ್ಲ ಎಂದರು.
ಇನ್ನು ನಿರ್ಮಾಪಕರು ಆತನ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತಾರೆ. ನಂತರ ನಾನು ಸಹ ನೆರವಾಗ್ತೀನಿ, ಆದರೆ ಇದಕ್ಕೂ ಹೀರೋನೆ ಮೊದಲು ಬರಬೇಕು ಅಂದರೆ ಅದಕ್ಕೂ ರೆಡಿ ಇದ್ದೇನೆ. ನಿರ್ಮಾಪಕರ ಚೆಕ್ ಆತನ ಕುಟುಂಬಕ್ಕೆ ಸಿಕ್ಕಿಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಲ್ಲ, ಆ ವಿಚಾರ ಗೊತ್ತಿಲ್ಲ, ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಗ್ತಿಲ್ಲ. ಮುಂದೆ ಮತ್ತೆ ನನ್ನನ್ನ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ