news18-kannada Updated:October 25, 2020, 9:37 PM IST
ಜಿಟಿಜಿಟಿ ಮಳೆ
ಬೆಂಗಳೂರು(ಅಕ್ಟೋಬರ್. 25) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ನಗರದ ಮಲ್ಲೇಶ್ವರಂ, ರಾಜಾಜಿನಗರ, ಶ್ರೀರಾಮಪುರ, ಯಶವಂತಪುರ, ಸುಬ್ರಮಣ್ಯನಗರ ಸೇರಿದಂತೆ ಹಲವೆಡೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ವಾಹನ ಸವಾರರು ಮಳೆಯಲ್ಲೆ ನೆನೆಯುತ್ತಾ ಮನೆ ಕಡೆಗೆ ಹೊರಟಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ಸಣ್ಣದಾಗಿ ಶುರುವಾದ ಮಳೆ ಬಳಿಕ ಜೋರಾಗಿ ಸುರಿಯಲಾರಂಭಿಸಿದ್ದು ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿತ್ತು. ಕಳೆದ ಶುಕ್ರವಾರ ಸುರಿದ ಬಾರಿ ಮಳೆಯಿಂದ ಬೆಂಗಳೂರು ನಗರ ಅಕ್ಷರಶಃ ತತ್ತರಿಸಿ ಹೋಗಿತ್ತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಮನೆಗಳು, ಶೆಡ್ ಗಳು, ಗುಡಿಸಲುಗಳು, ಅಪಾರ್ಟ್ಮೆಂಟ್ ಸೇರಿ ಹಲವೆಡೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಜನ ಪರಿತಪಿಸುವಂತೆ ಮಾಡಿತ್ತು. ಮೊನ್ನೆಯ ಮಳೆಯ ರೌದ್ರವತಾರ ಮರೆಯುವ ಮುನ್ನ ಇದೀಗ ಮತ್ತೆ ನಗರದಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ.
ಇದನ್ನೂ ಓದಿ :
Onion: ಈರುಳ್ಳಿಗೆ ಚಿನ್ನದ ಬೆಲೆ ; ಕಳ್ಳರ ಕಾಟ ಹೆಚ್ಚಳದಿಂದ ಅನ್ನದಾತ ಕಂಗಾಲು
ಅಕ್ಟೋಬರ್ 26 ಮತ್ತು 27ರಂದು ರಾಜ್ಯದ ಬಹುತೇಕ ಎಲ್ಲ ಕಡೆ ಮಳೆಯಾಗುವ ನಿರೀಕ್ಷೆ ಇದ್ದು, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರಿನ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ .
ಈಗ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತಗ್ಗಿದ್ದು, ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 27 ರವರೆಗೆ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
Published by:
G Hareeshkumar
First published:
October 25, 2020, 9:04 PM IST