ಪುತ್ತೂರು(ಏ.06): ಕರ್ನಾಟಕ ರಾಜ್ಯ ವಿಧಾನಸಭಾ (Karnataka Assembly Elections) ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ದಿನಗಣನೆ ಆರಂಭವಾಗದೆ. ಅತ್ತ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿವೆ. ಕಮಲ ಪಾಳಯದ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಆದರೀಗ ಇಂತಹ ಸೂಕ್ಷ್ಮ ಹಾಗೂ ಅಂತಿಮ ಸಮಯದಲ್ಲಿ ಬಿಜೆಪಿ ಪಾಲಿಗೆ ಕಂಟಕವೊಂದು ಎದುರಾಗಿದೆ. ಹೌದು ಕರಾವಳಿ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ (Puttur Assembly Constituency) ಹಾಲಿ ಶಾಸಕರದ್ದೆನ್ನಲಾದ ಅಶ್ಲೀಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಲಾರಂಭಿಸಿವೆ.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಕಾಂಗ್ರೆಸ್ ನ ಮಾಜಿ ಗ್ರಾ.ಪಂ ಸದಸ್ಯೆ ಜೊತೆಗಿರುವ ಅಶ್ಲೀಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಶಾಸಕರು ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು ಕ್ಷೇತ್ರದಲ್ಲಿ ಟಫ್ ಫೈಟ್: ಕೈ, ಕಮಲ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಘಟಾನುಘಟಿಗಳ ಕಸರತ್ತು!
ಶಾಸಕರ ದೂರಿನಲ್ಲೇನಿದೆ?
ಫೋಟೋದಲ್ಲಿರುವುದು ತಾನಲ್ಲ, ತನ್ನ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಮಠಂದೂರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಯಾರೋ ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆಂದು ಉಲ್ಲೇಖಿಸಿದ್ದು, ಈ ಫೋಟೋವನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಸ್ತುತ ಉಪ್ಪಿನಂಗಡಿ ಪೊಲೀಸರು ಐಟಿ ಆಕ್ಟ್ ಅಡಿ ಎಫ್.ಐ.ಆರ್ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್ನಿಂದ ಯಾರು ಕಣಕ್ಕೆ?
ಇನ್ನು ಚುನಾವಣಾ ಹೊಸ್ತಿಲಲ್ಲಿ ಇಂತಹದ್ದೊಂದು ಬೆಳವಣಿಗೆ ನಡೆದಿದ್ದು, ಇದು ಮಠಂದೂರು ಅವರ ಬಿಜೆಪಿ ಟಿಕೆಟ್ ಗಳಿಸುವ ಹಾದಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಚಟುವಟಕೆಗಳು ಜೋರು ಪಡೆದಿವೆ.
ಈ ಹಿಂದಿನ 2018ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಜೀವ್ ಮಠಂದೂರು ಕಾಂಗ್ರೆಸ್ನ ಶಕುಂತಳಾ ಶೆಟ್ಟಿ ಅವರನ್ನು 19 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಹೀಗಿರುವಾಗ ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿಯಲು ಮಠಂದೂರು ಸಿದ್ಧತೆ ನಡೆಸಿದ್ದರು. ಆದರೀಗ ಟಿಕೆಟ್ ಘೋಷಣೆಗೂ ಮುನ್ನ ವೈರಲ್ ಆಗುತ್ತಿರುವ ಫೋಟೋಗಳಿಂದ ಅವರ ಟಿಕೆಟ್ ಕೈತಪ್ಪಬಹುದೆಂಬ ಮಾತುಗಳು ಕೇಳಿ ಬಂದಿವೆ.
ಮಹಿಳೆ ಹೇಳಿದ್ದೇನು?
ಇನ್ನು ವೈರಲ್ ಆದ ಫೋಟೋಗಳ ಬಗ್ಗೆ ಮಹಿಳೆಯೂ ಸ್ಪಷ್ಟನೆ ನೀಡಿದ್ದು, ಇದರಲ್ಲಿ ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರಿ ಶಾಸಕರ ಜೊತೆಗಿರುವಂತೆ ಎಡಿಟ್ ಮಾಡಲಾಗಿದೆ. ಇದರಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ಹಾನಿಯುಂಟಾಗಿದೆ. ಫೋಟೋಗಳನ್ನು ವೈರಲ್ ಮಾಡಿ ಮಹಿಳೆ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನನ್ನ ಹಾಗೂ ಶಾಸಕರ ನಡುವೆ ಯಾವುದೇ ಸಂಬಂಧ ಇಲ್ಲ. ನಾನು ಅವರನ್ನು ಈ ಹಿಂದೆ ಕೂಡಾ ಎಲ್ಲಿಯೂ ಭೇಟಿಯಾಗಿಲ್ಲ. ಆದರೂ ನನ್ನ ತೇಜೋವಧೆ ಮಾಡಲಾಗುತ್ತಿದೆ. ಹೀಗಾಗಿ ನಾನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ