ಬೆಂಗಳೂರು: ಕಬಡ್ಡಿ ಆಡುತ್ತಿದ್ದ ವೇಳೆಯೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಗೊಂಡು (Heart Attack) ಮೃತಪಟ್ಟಿರುವ ಘಟನೆ ಬೆಂಗಳೂರು (Bengaluru) ನಗರದ ಆನೇಕಲ್ ತಾಲೂಕಿನ (Anekal) ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದುರಂತ ಸಾವಿಗೆ ಒಳಗಾಗಿದ್ದು, ಮೃತ ವಿದ್ಯಾರ್ಥಿನಿಯನ್ನು ಸಂಗೀತಾ (17) (Sangeetha) ಎಂದು ಗುರುತಿಸಲಾಗಿದೆ. ಈಕೆ ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದಳು ಎಂದು ತಿಳಿದು ಬಂದಿದೆ.
ಎಂದಿನಂತೆ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಕಬಡ್ಡಿ ಆಡುತ್ತಿರುವಾಗ ಸಂಗೀತಾ ಕುಸಿದುಬಿದ್ದಿದ್ದು, ತಕ್ಷಣ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಅತ್ತಿಬೆಲೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಸ್ಥಳಾಂತರಿಸಲಾಗಿದ್ದು, ವಿದ್ಯಾರ್ಥಿನಿ ಸಂಗೀತಾ ಸಾವು ಹಿನ್ನೆಲೆ ಇಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: Heart Attack: 6ನೇ ತರಗತಿಯ ವಿದ್ಯಾರ್ಥಿಗೆ ಹೃದಯಾಘಾತ; ಪೋಷಕರ ಮಡಿಲಲ್ಲೇ ಕೊನೆಯುಸಿರೆಳೆದ ಬಾಲಕ
ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತ
ಕಾಲೇಜಿನಲ್ಲಿ ಕ್ರೀಡಾ ಉತ್ಸವದ ಹಿನ್ನೆಲೆ ಮಹಿಳೆಯರ ತಂಡದ ಕಬಡ್ಡಿ ಕೂಡ ಇತ್ತು, ಹೀಗಾಗಿ ಸಂಗೀತಾ ತನ್ನ ತಂಡದ ಪರವಾಗಿ ರೈಡಿಂಗ್ ಹೋಗಿದ್ದಳು. ಆಗ ಎದುರಾಳಿ ತಂಡದವರು ಆಕೆಯನ್ನು ಹಿಡಿಯಲು ಮುಂದಾಗಿದ್ದರು. ಆಗ ಒಮ್ಮೆಗೆ ಹೃದಯಾಘಾತಗೊಂಡು ಸಂಗೀತಾ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಶಾಲಾ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಲು ವಿಫಲಗೊಂಡಿದ್ದಾಳೆ.
ಕೊಡಗಿನಲ್ಲೂ ನಡೆದಿತ್ತು ಇಂತಹದೇ ದುರಂತ
ಇತ್ತಿಚೆಗೆ ತೀವ್ರ ಹೃದಯಾಘಾತದಿಂದ 6ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಲ್ಲಿ ಕೂಡ ನಡೆದಿತ್ತು. 12 ವರ್ಷದ ಬಾಲಕ ಕೀರ್ತನ್ ಹೃದಯಾಘಾತದಿಂದ ಮೃತ ಪಟ್ಟಿದ್ದ. ರಾತ್ರಿ ಮನೆಯಲ್ಲಿದ್ದ ವೇಳೆ ಬಾಲಕ ಕಿರುಚಿಕೊಂಡಿದ್ದು, ಆತಂಕಗೊಂಡ ಪೋಷಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾರ್ಗ ನಡುವೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಪದೇ ಪದೇ ಹೃದಯಾಘಾತದಿಂದ ಮಕ್ಕಳ ಮರಣ!
ಇದರ ಜೊತೆಗೆ ಕಳೆದ ಜನವರಿ 11 ರಂದು ಒಂದೇ ದಿನ ಇಬ್ಬರು ವಿದ್ಯಾರ್ಥಿಗಳು ಹೃದಯಾಘಾತದಿಂದ ಮೃತಪಟ್ಟಿದ್ದರು. ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜದಾತ್ರಯ್ಯ ಶಾಲೆಗೆ ಹೋಗಲು ರೆಡಿಯಾಗುತ್ತಿದ್ದ ವೇಳೆ ಕುಸಿದು ಮೃತಪಟ್ಟರೆ, ದಕ್ಷಿಣ ಕನ್ನಡದ ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಅಬ್ದುಲ್ ರೆಹಮಾನ್ ಎಂಬುವವರ ಪುತ್ರ 8ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಹಸೀನ್ (14) ಶಾಲೆಗೆ ಹೊರಡಲೆಂದು ರೆಡಿ ಆಗುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳನ್ನೂ ಬಿಡದೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸರ್ಕಾರ ಇನ್ನಾದರೂ ಇದರ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಕಾರಣ ಹುಡುಕುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಅನ್ನೋದನ್ನು ನೋಡಬೇಕಿದೆ.
ಇದನ್ನೂ ಓದಿ: Nandamuri Taraka Ratna: ನಂದಮೂರಿ ತಾರಕ ರತ್ನಗೆ ಹೃದಯಾಘಾತ! ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ತೀವ್ರ ಅಸ್ವಸ್ಥ
ಬಾಲಕಿಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಮೃತ ಬಾಲಕಿ ಸಂಗೀತಾಳ ಪೋಷಕರು ಆಘಾತಕ್ಕೆ ಒಳಗಾಗಿದ್ದು, ಇನ್ನಿಲ್ಲದಂತೆ ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮಗಳನ್ನು ಜೀವಂತವಾಗಿ ಕೊಡಿ ಎಂದು ಗೋಗರೆಯುತ್ತಿದ್ದಾಗ ಎಂತವರ ಮನಸ್ಸೂ ಕರಗುವಂತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ