ಆನೇಕಲ್(ನ.07): ಕೊರೋನಾ ಉಲ್ಬಣಿಸುವುದನ್ನು ತಡೆಯುವ ಸಲುವಾಗಿ ತಜ್ಞರ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಪಟಾಕಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದೆ. ಆದ್ರೆ ರಾಜ್ಯ ಸರ್ಕಾರದ ಕ್ರಮಕ್ಕೆ ಪಟಾಕಿ ಮಾರಾಟಗಾರರು ಮತ್ತು ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೌದು, ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಹೊಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಿದೆ. ಆದ್ರೆ ಪಟಾಕಿ ನಿಷೇಧ ಆದೇಶ ಒಂದೆರಡು ತಿಂಗಳ ಮೊದಲು ಮಾಡಿದ್ದರೆ., ನಾವ್ಯಾರೂ ಪಟಾಕಿಗೆ ಸಾಲ ಮಾಡಿ ಬಂಡವಾಳ ಹಾಕುತ್ತಿರಲಿಲ್ಲ. ಹೀಗೆ ಕೊನೆ ಗಳಿಗೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಬೀದಿಗೆ ಬರುತ್ತಿರಲಿಲ್ಲ. ಸರ್ಕಾರ ನಮ್ಮ ಬಗ್ಗೆಯು ಚಿಂತನೆ ಮಾಡಬೇಕಿದ್ದು, ಕನಿಷ್ಠ ಒಂದೆರಡು ದಿನ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಪಟಾಕಿ ಮಾರಾಟಗಾರರಾದ ಮಾದೇಶ್ವರಿ ಮತ್ತು ಜಗದೀಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದಾವಣಗೆರೆ; 16 ಹೋಬಳಿಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ
ಇನ್ನು, ಮಾರಾಟಗಾರರ ಜೊತೆಗೆ ಗ್ರಾಹಕರೂ ಸಹ ಪಟಾಕಿ ನಿಷೇಧಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬ ಹಿಂದೂಗಳ ಶ್ರೇಷ್ಟ ಹಬ್ಬ. ದೀಪಾವಳಿ ಹಬ್ಬ ಎಂದರೆ ಪಟಾಕಿ, ಕಜ್ಜಾಯ, ಹೊಸ ಬಟ್ಟೆಗಳು . ಮನೆ ಮಂದಿಯೆಲ್ಲ ಸೇರಿ ಪಟಾಕಿ ಸಿಡಿಸಿ ಹಬ್ಬ ಆಚರಿಸಿ ಸಂಭ್ರಮಿಸುವುದು ವಾಡಿಕೆ. ಆದ್ರೆ ಕೊರೋನಾ ನೆಪದಲ್ಲಿ ಪಟಾಕಿ ನಿಷೇಧ ಮಾಡುವುದು ಸರಿಯಲ್ಲ. ರಾಜಕಾರಣಿಗಳು ಗೆದ್ದಾಗ ಸಂಭ್ರಮಾಚರಣೆ ಮಾಡಲು ಪಟಾಕಿ ಸಿಡಿಸುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬಾರ್ ಓಪನ್ ಆಗಿದೆ. ಸಿನಿಮಾ ಮಂದಿರವೂ ಓಪನ್ ಆಗಿದೆ. ಇವುಗಳನ್ನು ಓಪನ್ ಮಾಡಿ ಪಟಾಕಿ ನಿಷೇಧ ಮಾಡುವುದು ಸರಿಯಾದ ಕ್ರಮವಲ್ಲ. ಸರ್ಕಾರ ಕೂಡಲೇ ಪಟಾಕಿ ನಿಷೇಧ ಹಿಂಪಡೆಯಬೇಕು ಎಂದು ಗ್ರಾಹಕ ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ