ಮುಂದಿನ ತಿಂಗಳು ಅಂದ್ರೆ ಜೂನ್ 9 ರಿಂದ ಪ್ರಥಮ ಪಿಯು ತರಗತಿಗಳು (First PU Class) ಪ್ರಾರಂಭವಾಗಲಿದೆ. ಕಳೆದ ಎರಡು ವರ್ಷ ಕೋವಿಡ್ 19 ಸಾಂಕ್ರಾಮಿಕ (COVID 19 Pandemic) ರೋಗದಿಂದ ಕಲಿಕೆ ಅವಧಿ ಇಳಿಕೆಯಾಗಿತ್ತು. ಮತ್ತೆ ಕೋವಿಡ್ 4ನೇ ಅಲೆ ಅಪ್ಪಳಿಸುವ ಆತಂಕದ ಹಿನ್ನೆಲೆ ಪಿಯು ಕಾಲೇಜುಗಳು (PU College) ಕಲಿಕಾ ಅಂತರವನ್ನು ಸರಿದೂಗಿಸಲು ಈಗಿನಿಂದಲೇ ಪ್ರಯತ್ನಿಸುತ್ತಿವೆ. ಮೇ 19ರಂದು ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ (SSLC Exams Results) ಪ್ರಕಟವಾಗಿದ್ದು, ಪಿಯು ನೋಂದಣಿ ಸಹ ಆರಂಭಗೊಂಡಿವೆ. ಕಾಲೇಜು ಆರಂಭವಾದ ಮೊದಲ ದಿನದಿಂದಲೇ ಪಾಠ ಆರಂಭಿಸಲು ಶಿಕ್ಷಣ ಸಂಸ್ಥೆಗಳು (Education Institution) ಸಿದ್ಧತೆ ನಡೆಸಿಕೊಂಡಿವೆ. ಪಿಯು ಪಠ್ಯದ ಜೊತೆಗೆ ಪೂರಕವಾದ ಕೋರ್ಸ್ ಗಳನ್ನು ನೀಡಲು ಶಿಕ್ಷಣ ಸಂಸ್ಥೆಗಳು ಪ್ಲಾನ್ ಮಾಡಿಕೊಂಡಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೆಲ ಶಿಕ್ಷಣ ಸಂಸ್ಥೆಯ ಆಡಳಿತ ಸಿಬ್ಬಂದಿ ಮತ್ತು ಪ್ರಾಂಶುಪಾಲರು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರ, ಈ ಬಾರಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಕೆಲ ವರ್ಷಗಳ ಹಿಂದೆ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಇದೀಗ ಉತ್ತಮ ಫಲಿತಾಂಶದ ಬೆನ್ನಲ್ಲೇ ವಿದ್ಯಾರ್ಥಿಗಳು ವಿಜ್ಞಾನದತ್ತ ಒಲವು ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರು ಹೇಳೋದೇನು?
ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್.ಚಂದ್ರಶೇಖರಪ್ಪ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎರಡು ದಿನದ ಹಿಂದೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ವಿಜ್ಞಾನದ ವಿಭಾಗಕ್ಕೆ 300ಕ್ಕೂ ಅಧಿಕ ಹಾಗೂ ವಾಣಿಜ್ಯ ವಿಭಾಗಕ್ಕೆ 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bridge: ಸೇತುವೆ ನಿರ್ಮಾಣವಾದ್ರೂ ತಪ್ಪಿಲ್ಲ ಜನರ ಸಂಕಷ್ಟ, ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟ ಕಷ್ಟ!
ಈ ಬಾರಿ SSLC ಫಲಿತಾಂಶದಲ್ಲಿ 145 ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಪಡೆದುಕೊಂಡಿದ್ದಾರೆ. ಇದರಿಂದಾಗಿ ವಿಜ್ಞಾನಕ್ಕೆ ಶೇ. 80 ಮತ್ತು ವಾಣಿಜ್ಯ ವಿಭಾಗಕ್ಕೆ ಶೇ.70 ಕಟ್ ಆಫ್ ಇರಿಸಲಾಗಿದೆ.
ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ
ಆರಂಭದಲ್ಲಿ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ. ಕಳೆದ ಎರಡು ವರ್ಷ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಅನುಭವಿಸಿದ ತೊಂದರೆಗಳು ಸದ್ಯದ ಮಕ್ಕಳಿಗೆ ಬೇಡ. ಹಾಗಾಗಿ ವರ್ಚುವಲ್ ನಲ್ಲಿ ಪಾಠ ಕೇಳಿ ಆಫ್ ಲೈನ್ ನಲ್ಲಿ ಪರೀಕ್ಷೆ ತೆಗೆದುಕೊಳ್ಳುವದರಿಂದ ವಿದ್ಯಾರ್ಥಿಗಳ ಅಂಕ ಗಳಿಕೆ ಕಡಿಮೆ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಈಗ ಅಗತ್ಯವಾದ ಬರವಣಿಗೆ ಮತ್ತು ಪರಸ್ಪರ ಸಂವಹನ ಕೌಶಲ್ಯಗಳ ಕೊರತೆಯಿದೆ. ಈ ಕೊರತೆ ನಿವಾರಿಸಲು ಶಿಕ್ಷಣ ಸಂಸ್ಥೆ ಕೆಲಸ ಮಾಡಲಿದೆ.
ಇದೇ ವೇಳೆ ಡ್ರೆಸ್ ಕೋಡ್ ಬಗ್ಗೆ ಮಾತನಾಡಿದ ಬಿ.ಆರ್.ಚಂದ್ರಶೇಖರಪ್ಪ, ವಿದ್ಯಾರ್ಥಿಗಳು ಸಮವಸ್ತ್ರ ಧರಿಸೋದು ಕಡ್ಡಾಯವಾಗಿದೆ. ಹಿಜಾಬ್ ಅಥವಾ ಯಾವುದೇ ವಸ್ತ್ರ ಧರಿಸಲು ಕ್ಯಾಂಪಸ್ ನಲ್ಲಿ ಅನುಮತಿ ನೀಡಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ
ಇನ್ನೂ ವಿಜಯಾ ವಿಭಜಿತ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎ. ಪದ್ಮನಾಭ್ ಮಾತನಾಡಿ, ಈ ವರ್ಷ ವಿದ್ಯಾರ್ಥಿಗಳಿಗೆ ಟ್ಯಾಲಿ, ಎಕ್ಸೆಲ್ ಮತ್ತು ಇಂಗ್ಲಿಷ್ ಭಾಷೆಯ ಕುರಿತು ಹೆಚ್ಚುವರಿ ತರಬೇತಿ ನೀಡಲಾಗುವುದು. ನಾವು CET/NEET, ಸಾಮಾನ್ಯ ಕಂಪ್ಯೂಟರ್ ಜ್ಞಾನ ಮತ್ತು ನಿಜವಾದ ಕೋರ್ಸ್ ಗೆ ಆಡ್-ಆನ್ ಕೋರ್ಸ್ ಗಳನ್ನು ಒದಗಿಸುತ್ತಿರುವ ಮಾಹಿತಿ ನೀಡಿದರು.
ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ 16,000 ರೂ ರಿಯಾಯಿತಿ ಮತ್ತು ಶೇ.80 ರಿಂದ ಶೇ.90 ಅಂಕ ಪಡೆದವರಿಗೆ 9,600 ರೂ. ರಿಯಾಯಿತಿ ನೀಡಲಾಗುತ್ತಿರುವ ವಿಷಯವನ್ನು ತಿಳಿಸಿದರು.
ಈ ವರ್ಷ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ಸಮಾನವಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಕೆಲ ಕಾಲೇಜುಗಳ ಕಟ್ ಆಫ್ ಪ್ರಮಾಣ ಹೆಚ್ಚಿಸಿದ್ರೆ, ಕೆಲವು ಸಂಸ್ಥೆಗಳು ಪ್ರಮಾಣಿತ ಕಟ್ ಆಫ್ ನಿಗದಿ ಮಾಡಿಕೊಂಡಿವೆ.
ಇದನ್ನೂ ಓದಿ: Viral Coconut Tree: ಒಂದೇ ಮರದಲ್ಲಿ ಭರ್ತಿ 2,000 ತೆಂಗಿನಕಾಯಿ! ವೈರಲ್ ಆಗ್ತಿದೆ ಕಾರವಾರದ ಕಲ್ಪವೃಕ್ಷ
ನ್ಯಾಷನಲ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಬಹುದು
ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಆರ್ ಸಂಪತಕುಮಾರಿ ಮಾತನಾಡಿ, ನಮ್ಮ ಕಟ್-ಆಫ್ ದರವು ಶೇ.60ರಷ್ಟಾಗಿದೆ. ಒಂದು ದಿನದಿಂದ ನಮ್ಮಲ್ಲಿ ಅರ್ಜಿಗಳು ಆರಂಭಗೊಂಡಿವೆ. ರಂಗಭೂಮಿ ಮತ್ತು ಸಂಗೀತದಂತಹ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಲು ನಾವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತೇವೆ ಎಂದರು.
ನಮ್ಮ ಕಾಲೇಜು ಯಾವುದೇ ನಿಗಧಿತಯ ಸಮವಸ್ತ್ರ ಹೊಂದಿಲ್ಲ. ವಿದ್ಯಾರ್ಥಿಗಳು ಬಯಸಿದ್ದಲ್ಲಿ ಹಿಜಾಬ್ ಧರಿಸಬಹುದು ಎಂದು ಸಿ.ಆರ್.ಸಂಪತಕುಮಾರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ