ಬೆಂಗಳೂರು(ಆ.24): ಶಾಲೆಗಳು ಶುರುವಾಗುತ್ತಿದ್ದಂತೆ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಖಾಸಗಿ ಶಾಲಾ ಒಕ್ಕೂಟಗಳು ಆಗ್ರಹಿಸಿದ್ದು, ಸೆಪ್ಟೆಂಬರ್ 15ರವರೆಗೆ ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟಿವೆ. ಬೇಡಿಕೆ ಈಡೇರಿಸದಿದ್ದರೆ ತೀವ್ರ ಸ್ವರೂಪದಲ್ಲಿ ಹೋರಾಟ ಮಾಡಲು ಖಾಸಗಿ ಶಾಲಾ ಒಕ್ಕೂಟ ನಿರ್ಧಾರ ಮಾಡಿದೆ.
ಇಂದು ಶಾಸಕರ ಭವನದಲ್ಲಿ ಮೂರು ಖಾಸಗಿ ಶಾಲೆಗಳ ಒಕ್ಕೂಟಗಳು ಮಹತ್ವದ ಸಭೆ ನಡೆಸಿವೆ. ರುಪ್ಸಾ ಕರ್ನಾಟಕ - ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ಸಭೆ ನಡೆಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ, ರುಪ್ಸಾ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆ ಬಳಿಕ ಖಾಸಗಿ ಶಾಲಾ ಒಕ್ಕೂಟ ಪ್ರತಿನಿಧಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿವೆ.
ಸಭೆ ಬಳಿಕ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ನಮ್ಮ ಬೇಡಿಕೆಗಳ ಬಗ್ಗೆ ಸಾಕಷ್ಟು ಮನವಿ ಕೊಟ್ಟಿದ್ದೇವೆ. ದಶಕಗಳಿಂದ ಹೋರಾಟ ಮಾಡಿಕೊಂಡು ಬಂದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಒಟ್ಟಾಗಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳು ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸೆಪ್ಟೆಂಬರ್ 15ರವರೆಗೆ ನಾವು ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಇಲ್ಲವಾದಲ್ಲಿ ನಾವು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:B S Yediyurappa: ರಾಜ್ಯ ಪ್ರವಾಸಕ್ಕೆ ಹೊಸ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ
1995 ರ ನಂತರ ಖಾಸಗಿ ಅನುದಾನಿತ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು. ನೂತನ ಪಿಂಚಣಿ ಪದ್ಧತಿಯನ್ನ ರದ್ದುಗೊಳಿಸಿ,ಹಳೆಯ ಪಿಂಚಣಿ ಪದ್ಧತಿಯನ್ನ ಜಾರಿಗೊಳಿಸಬೇಕು - ಸೇರಿದಂತೆ ಹಲವು ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಸರ್ಕಾರ ಖಾಸಗಿ ಶಾಲೆಗಳ ಸಮಸ್ಯೆಗಳ ಬೇಡಿಕೆ ಈಡೇರಿಸಿಲ್ಲ. ಈಗ ಹೊಸ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಕಳೆದ ಬಾರಿ ಬಸವರಾಜ್ ಹೊರಟ್ಟಿ ಧಾರವಾಡದಲ್ಲಿ 13 ದಿನಗಳ ಕಾಲ ಉಪವಾಸ ನಡೆಸಿದ್ದರು. ಹೀಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದ್ರೆ ಈ ಭಾರೀ ಉಗ್ರ ಹೋರಾಟ ಮಾಡುತ್ತೇವೆ ಎಮದು ಖಾಸಗಿ ಶಾಲೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಬೇಡಿಕೆಗಳೇನು?
1. 1995 ರ ನಂತರ ಖಾಸಗಿ ಅನುದಾನಿತ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸುವುದು.
2. ನೂತನ ಪಿಂಚಣಿ ಪದ್ಧತಿಯನ್ನ ರದ್ದುಗೊಳಿಸಿ, ಹಳೆಯ ಪಿಂಚಣಿ ಪದ್ಧತಿಯನ್ನ ಜಾರಿಗೊಳಿಸುವುದು.
3. ಈಗಾಗಲೇ ನಿವೃತ್ತರಾದ ಹಾಗೂ ಮರಣ ಹೊಂದಿದ 2006 ರ ನಂತರದ ನೌಕರರಿಗೆ ತಕ್ಷಣ ಪಿಂಚಣಿ ಜಾರಿಗೊಳಿಸುವುದು.
4. ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ/ ಅನುದಾನ ರಹಿತ ಶಾಲಾ ಕಾಲೇಜು ಸಿಬ್ಬಂದಿಗೆ ವಿಸ್ತರಿಸುವುದು.
ಇದನ್ನೂ ಓದಿ:Landslide: ಉತ್ತರಾಖಂಡದಲ್ಲಿ ಗುಡ್ಡ ಕುಸಿತ; ಪ್ರಾಣ ಭಯದಿಂದ ಓಡಿ ಹೋದ ಜನರು, ವಿಡಿಯೋ ಇಲ್ಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ