ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ (Prashant Nagaraj Murder Case) ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ (IGP Praveen Madhukar Pawar) ಹೇಳಿದ್ದಾರೆ. ನಗರಕ್ಕೆ ಭೇಟಿ ನೀಡಿ ತನಿಖೆ ಬಗ್ಗೆ ಮಾಹಿತಿ ಪಡೆದು ಮತ್ತು ಜೆಡಿಎಸ್ ಚುನಾಯಿತ ಸದಸ್ಯರು ಹಾಗೂ ಇತರರಿಂದ ದೂರು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಎಸ್ಪಿ ಮತ್ತು ಇತರೆ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಚರ್ಚೆ ಮಾಡಿದ್ದೇನೆ. ನಿಷ್ಪಕ್ಷಪಾತವಾಗಿ ಹೇಗೆ ತನಿಖೆ ಆಗಬೇಕು. ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿ ಆರೋಪಿಗಳ ಬಂಧನಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದರು.
ಕೊಲೆ ಆರೋಪಿ ಬಗ್ಗೆ ನಮಗೆ ಸ್ವಲ್ಪ ಮಾಹಿತಿ ಸಿಕ್ಕಿದೆ. ಅವರ ಪತ್ತೆಗಾಗಿ ಮೂರು ತಂಡಗಳು ಕೆಲಸ ಮಾಡುತ್ತಿವೆ. ಶೀಘ್ರ ಎಲ್ಲರ ಬಂಧನ ಆಗಲಿದೆ. ಪ್ರಕರಣರಲ್ಲಿ ಸರಿಯಾದ ತನಿಖೆ ನಡೆಸಿ ಚಾರ್ಜ್ಶೀಟ್ ಹಾಕಿ ಆರೋಪಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ನಮ್ಮ ಇಲಾಖೆ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ವಿರುದ್ಧ ತನಿಖೆಗೆ ಆದೇಶ ಕೊಟ್ಟಿದ್ದೇವೆ. ಆರೋಪ ಹಿನ್ನೆಲೆ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂದು ಎಸ್ಪಿ ಅವರು ರೇಣುಕಾಪ್ರಸಾದ್ ಅವರನ್ನು ರಜೆ ಮೇಲೆ ಕಳುಹಿಸಿದ್ದಾರೆ ಎಂದು ಐಜಿಪಿ ಖಚಿತ ಪಡಿಸಿದರು.
ಇದನ್ನೂ ಓದಿ: Hubballi: ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ ಶಸ್ತ್ರ ಹಿಡಿಯಬೇಕು; VHP ನಾಯಕ ಮಿಲಿಂದ್ ಪರಾಂಡೆ ವಿವಾದ
ಇದುವರೆಗೂ ಆರೋಪಿಗಳ ಬಂಧನ ಇಲ್ಲ
ಈ ನಡುವೆ ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಸಚಿವ ಗೋಪಾಲಯ್ಯ ಪ್ರಶಾಂತ್ ಕೊಲೆ ಕೇಸ್ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದಿದ್ದರು. ಆದರೆ ಐಜಿಪಿ ಈವರೆಗೆ ಯಾವುದೇ ಆರೋಪಿಯನ್ನ ಬಂಧಿಸಿಲ್ಲ ಎಂದರು. ಸಚಿವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊಲೆ 360 ಡಿಗ್ರಿ ಆಂಗಲ್ನಲ್ಲಿ ತನಿಖೆ ನಡೆಸುತ್ತಿದ್ದೇವೆ. ಪೊಲೀಸರು ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಎಲ್ಲಾ ಆರೋಪಿಗಳ ಬಂಧನ ಮಾಡುತ್ತೇವೆ ಎಂದರು.
ನನ್ನ ಜೊತೆ ಒಳ್ಳೆಯ ಸಂಬಂಧ ಇತ್ತು
ಪ್ರಶಾಂತ್ ಕೊಲೆ ಬಗ್ಗೆ ಮಾತನಾಡಿದ ಶಾಸಕ ಪ್ರೀತಂಗೌಡ, ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಘಟನೆ ದುರದೃಷ್ಟಕರ ಘಟನೆ ಇದು ಊಹೆ ಮಾಡಿಕೊಳ್ಳಲು ಆಗದ ಕೃತ್ಯ. ಅವರ ಮನೆಗೆ ಹೋಗಿ ಸಾಂತ್ವನ ಹೇಳುತ್ತೇನೆ. ಯಾವುದೇ ತನಿಖೆ, ಯಾವ ಮಟ್ಟದಲ್ಲಾದರೂ ನಡೆಯಲಿ. ಕ್ಷೇತ್ರದ ಶಾಸಕನಾಗಿ ಸಹಕಾರ ಕೊಡುವೆ ಎಂದರು.
ಜೆಡಿಎಸ್ ಆರೋಪಕ್ಕೆ ಪ್ರೀತಂಗೌಡ ತಿರುಗೇಟು
ಈ ರೀತಿಯ ಘಟನೆಗಳು ಹಾಸನ ಅಲ್ಲ, ರಾಜ್ಯದಲ್ಲೂ ಆಗಬಾರದು. ಪ್ರಶಾಂತ್, ನನ್ನ ನಡುವೆ ಬಹಳ ಆತ್ಮೀಯತೆ ಇತ್ತು. ಪಕ್ಷ ಯಾವುದೇ ಇರಲಿ ಸಂಬಂಧ ಉತ್ತಮವಾಗಿತ್ತು. ನಾನು ವಿರೋಧ ಪಕ್ಷದ ಶಾಸಕನಾದರೂ, ನನ್ನ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ನಾನೊಬ್ಬ ಶಾಸಕನಾಗಿ ಯಾರೇ ಆದರೂ ನಮ್ಮ ಪಾರ್ಟಿಗೆ ಸಹಕಾರ ಕೊಡಿ ಅಂತ ಕೇಳೋದು ಸಹಜ. ನಗರಸಭೆ ಎಲ್ಲಾ ಸದಸ್ಯರನ್ನು ನಮ್ಮ ಪಾರ್ಟಿಗೆ ಸಹಕಾರ ಕೊಡಿ ಎಂದು ಕೇಳಿದ್ದೆ ಅದರಲ್ಲಿ ತಪ್ಪೇನಿದೆ ಎನ್ನುವ ಮೂಲಕ ಪ್ರಶಾಂತ್ರನ್ನ ಬಿಜೆಪಿಗೆ ಸೆಳೆಯಲು ಒತ್ತಡ ಹೇರಲಾಗಿತ್ತು ಎಂಬ ಜೆಡಿಎಸ್ ಆರೋಪಕ್ಕೆ ತಿರುಗೇಟು ನೀಡಿದರು.
ರಾಜಕಾರಣ ನಿಂತ ನೀರಲ್ಲ, ಯಾರು ಯಾರನ್ನು ಬೇಕಾದರೂ ಪಕ್ಷಕ್ಕೆ ಕರೆಯಬಹುದು. ನನ್ನ ವಿರುದ್ಧ ಸ್ಪರ್ಧಿಸಿದ್ದವರನ್ನು ಬಿಟ್ಟು ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದೀನಿ.
ತನಿಖೆ ನಡೆದು ಸತ್ಯಾಂಶ ಹೊರ ಬರಲಿ
ನಮ್ಮ ಪಕ್ಷದ ಇಬ್ಬರು ನಗರಸಭೆ ಸದಸ್ಯರು ಎಂಪಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ಗೆ ಹೋದರು. ಚುನಾವಣೆ ವರ್ಷ ಬೇರೆ, ವಿರೋಧ ಪಕ್ಷವಾಗಿ ಕೆಲಸ ಮಾಡ್ತಾರೆ ಎಂದರು. ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಜನರ ಮುಂದೆ ಸತ್ಯಾಂಶ ಹೊರಬರಲಿ. ಎಸ್ಪಿ ಅವರು ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗೆ ಜಿಲ್ಲೆಯ ಜನತೆ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ, ಸಾರ್ವಜನಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ದುರದೃಷ್ಟಕರ, ಅದನ್ನು ಖಂಡಿಸುತ್ತೇನೆ. ಆದರೆ ವಿರೋಧ ಪಕ್ಷದ ಹಾವಳಿ ಜಾಸ್ತಿಯಾಗಿದೆ. ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ನಾನೂ ಸೇರಿದಂತೆ ಸಾವಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು.
ಇದನ್ನೂ ಓದಿ: Karnataka Text Book Row: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿದ ಸರ್ಕಾರ
ನಾನೇ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿ ನಾನೇ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದರೆ ಹೇಗೆ ಎಂದು ಪರೋಕ್ಷವಾಗಿ ಮಾಜಿ ಸಚಿವ ರೇವಣ್ಣ ನಡೆಯನ್ನು ಟೀಕಿಸಿದರು.
ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಬಗ್ಗೆ ತನಿಖೆಯಿಂದ ಸತ್ಯಾಂಶ ಹೊರಬರಲಿ. ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಭದ್ರತೆ ಕೊಡಲು ಆಗಲ್ಲ. ಇದಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಅಂತ ಹೇಳಲು ಆಗುತ್ತಾ ಎಂದು ಕೇಳಿದರು.
ಕಡ್ಡಾಯ ರಜೆ
ಕೋವಿಡ್ ಸಂದರ್ಭದಲ್ಲಿ ಚನ್ನರಾಯಪಟ್ಟಣದಲ್ಲಿ ಮೂರ್ನಾಲ್ಕು ಕೊಲೆಗಳಾದವು. ಅದಕ್ಕೆ ಶಾಸಕರು, ಸಂಸದರು ಕಾರಣ ಅಂತ ಹೇಳಲು ಆಗುತ್ತಾ ಎಂದ ಪ್ರೀತಂ, ಪೆನ್ಶೆನ್ ಮೊಹಲ್ಲಾ ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ ಎಂಬ ಎಸ್ಪಿ ಹೇಳಿಕೆಗೆ ಆದೇಶ ಪ್ರತಿ ಇದ್ದರೆ ಕೊಡಿ ಎಂದರು.
ಆ ಸಂದರ್ಭಕ್ಕೆ ಪರಿಸ್ಥಿತಿ ನಿಭಾಯಿಸಲು ಏನು ಮಾಡಬೇಕಿತ್ತೊ ಅದನ್ನು ಮಾಡಿದ್ದಾರೆ ಎಂದು ನುಡಿದರು. ಇದಕ್ಕು ಮುನ್ನ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕೇಂದ್ರದಿಂದ ಹಲವು ಕೊಡುಗೆ ಪ್ರಧಾನಿ ಕಾರ್ಯವೈಖರಿ ಹೊಗಳಿದ ಸಚಿವ ಗೋಪಾಲಯ್ಯ ಜೆಡಿಎಸ್ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಭೀಕರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಮರು ದಿನವೇ ಇಬ್ಬರ ಬಂಧನವಾಗಿದೆ.
ಜೆಡಿಎಸ್ ಫ್ಲೆಕ್ಸ್ ನಲ್ಲಿ ಆರೋಪಿಯ ಫೋಟೋ ವೈರಲ್
ಕೊಲೆ ಹಿಂದೆ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ಎರಡು ಕುಟುಂಬಗಳ ನಡುವಿನ ಗಲಾಟೆಯಿಂದ ಕೊಲೆ ನಡೆದಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದರು. ಪ್ರಕರಣದ ಆರೋಪಿ ಪೂರ್ಣಚಂದ್ರ ಜೆಡಿಎಸ್ ಪಕ್ಷದ ಕಾರ್ಯಕರ್ತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಸಂಸದ ಪ್ರಜ್ವಲ್, ರೇವಣ್ಣ ಅವರ ಫ್ಲೆಕ್ಸ್ ಗಳಲ್ಲಿ ಪೂರ್ಣಚಂದ್ರ ಫೋಟೋವಿದ್ದು ಸಖತ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ