ಉಡುಪಿ: ಕೇಂದ್ರ ಸರ್ಕಾರ ಇತ್ತೀಚೆಗೆ 106 ಗಣ್ಯರಿಗೆ 2023ರ ಪದ್ಮ ಪ್ರಶಸ್ತಿ (Padma award) ನೀಡಿ ಗೌರವಿಸಿದೆ. ಉತ್ತರ ಪ್ರದೇಶದ (Uttar Pradesh) ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರಿಗೂ ಮರಣೋತ್ತರ ಪದ್ಮವಿಭೂಷಣ ಘೋಷಿಸಿದೆ. ಕೇಂದ್ರದ ಈ ನಿರ್ಧಾರವನ್ನು ಖಂಡಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಲಾಯಂ ಸಿಂಗ್ ಯಾದವ್ಗೆ ಘೋಷಿಸಿರುವ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿರುವುದು ಅತ್ಯಂತ ಕೆಟ್ಟ ಪರಂಪರೆಯಾಗಿದೆ ಎಂದು ಕೇಂದ್ರ ಪ್ರಶಸ್ತಿ ಸಮಿತಿ ನಡೆಗೆ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ.
1989-91ರ ಅವಧಿಯಲ್ಲಿ ಮುಲಾಯಂ ಸಿಂಗ್ ಅವರು ಅಯೋಧ್ಯೆಯ ಶ್ರೀರಾಮ ಕರಸೇವಕರಿಗೆ ಹಿಂಸೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ, ರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿ ಎಂದು ಕಿಡಿ ಕಾರಿದ್ದಾರೆ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗೆ ಕಳಂಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲಾಯಂ ಸಿಂಗ್ ಧರ್ಮ ವಿರೋಧಿ
ಮುಲಾಯಂ ಸಿಂಗ್ ಅವರು ಕೇವಲ ಶ್ರೀರಾಮ ವಿರೋಧಿ, ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿಯೂ ಆಗಿದ್ದಾರೆ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ಆ ಪ್ರಶಸ್ತಿಗೆ ದೊಡ್ಡ ಕಳಂಕ ಆದಂತಾಗಲಿದೆ. ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪು ಚುಕ್ಕೆ ಆಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ. ತಕ್ಷಣವೇ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪಟ್ಟಿಯಿಂದ ಅವರ ಹೆಸರು ಕೈ ಬಿಟ್ಟು, ಪ್ರಶಸ್ತಿ ಗೌರವವನ್ನು ಉಳಿಸಬೇಕೆಂದು ಮುತಾಲಿಕ್ ಮನವಿ ಮಾಡಿದ್ದಾರೆ.
ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಯತ್ನ
ಪ್ರಸ್ತುತ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಮುಲಾಯಂ ಸಿಂಗ್ ಕುತಂತ್ರ ಮಾಡಿದ್ದರು. ಮುಖ್ಯವಾಗಿ ಯೋಗಿ ಅವರನ್ನು ಎನ್ಕೌಂಟರ್ ಮಾಡಲು ಹೊರಟಿದ್ದ ವ್ಯಕ್ತಿ. ಯೋಗಿ ಆದಿತ್ಯನಾಥ್ ಅವರನ್ನು ಸಂಸತ್ ಭವನದಲ್ಲಿ ಕಣ್ಣೀರು ಹಾಕಿಸಿದ್ದಾರೆ. ಇಂತಹ ವ್ಯಕ್ತಿಗೆ ಪದ್ಮವಿಭೂಷಣ ಘೋಷಣೆ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಕಿಡಿ ಕಾರಿದ್ದಾರೆ.
ಕಾರ್ಕಳದಿಂದ ಸ್ಪರ್ಧೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮೋದ್ ಮುತಾಲಿಕ್ ನಿರ್ಧರಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿಕೊಂಡಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮುತಾಲಿಕ್ಗೆ ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಪಕ್ಷೇತರವಾಗಿಯೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಹಿಂದೆ ಸರಿಯುವ ಮಾತಿಲ್ಲ
ಇನ್ನು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವ ಮುತಾಲಿಕ್ ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಾರು ಏನೇ ಒತ್ತಡ ಹಾಕಿದರೂ ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ನಾನು ಸ್ಪರ್ಧೆ ಮಾಡುತ್ತೇನೆ. ನಾನು ಬಿಜೆಪಿ ವಿರೋಧಿಯಲ್ಲ. ನಾನು ಮೋದಿ ಪರವಾಗಿ, ಹಿಂದುತ್ವದ ಪರವಾಗಿದ್ದೇನೆ. ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ದ, ಹಿಂದೂ ವಿರೋಧಿಗಳ ವಿರುದ್ಧವಾಗಿದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಅವರ ಈ ಘೋಷಣೆಯಿಂದ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆಯ ಕಿಚ್ಚು ಮತ್ತಷ್ಟು ರಂಗೇರಲಿದೆ. ಮುತಾಲಿಕ್ರ ಈ ನಿರ್ಧಾರ ಇಂಧನ ಸಚಿವ ವಿ. ಸುನೀಲ್ ಕುಮಾರ್ಗೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ