ಕೋಲಾರ(ಡಿ.17): ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಹೆಚ್ಚಳ ಹಿನ್ನೆಲೆ, ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ಕಳುವು ಪ್ರಕರಣಗಳು ಹೆಚ್ಚಾಗಿವೆ. ಬಂಗಾರಪೇಟೆ ತಾಲೂಕಿನ ಹುನುಕುಂದ ಗ್ರಾಮದ ರೈತ ಕೃಷ್ಣಪ್ಪ ಎನ್ನುವರಿಗೆ ಸೇರಿದ ಆಲೂಗಡ್ಡೆ ತೋಟದಲ್ಲಿ 20 ಮೂಟೆ ಆಲೂಗಡ್ಡೆಗಳನ್ನ ಬಿಡಿಸಿಕೊಂಡು ಕದ್ದಿದ್ದಾರೆ. ಇನ್ನು ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ ತೋಟದಲ್ಲಿ 15 ಮೂಟೆ ಆಲೂಗಡ್ಡೆಯನ್ನು ಕಳ್ಳರು ಕಳೆದ ರಾತ್ರಿ ಕದ್ದೊಯ್ದಿದ್ದಾರೆ. ಎರಡು ಕಡೆ ಒಟ್ಟು ರಾತ್ರೋರಾತ್ರಿ ತೋಟದಲ್ಲಿಯೇ 35 ಮೂಟೆಯಷ್ಟು ಕಳುವು ಹಿನ್ನಲೆ , ಬೆಳೆದ ಬೆಳೆ ಕೈಗೆ ಬರುವ ಮೊದಲೇ ಕಳ್ಳರ ಪಾಲಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ವಾರವಷ್ಟೇ ಬಂಗಾರಪೇಟೆ ತಾಲೂಕಿನ ಗಾಜಗ ಗ್ರಾಮದ ಮಂಜನಾಥ್ ಎಂಬ ರೈತನಿಗೆ ಸೇರಿದ ಆಲೂಗಡ್ಡೆ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದರು. 7 ದಿನ ಕಳೆಯವಷ್ಟರಲ್ಲಿ ಮತ್ತೊಮ್ಮೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳರನ್ನ ಹಿಡಿಯುವಂತೆ, ಬೆಳೆ ಕಳೆದುಕೊಂಡ ರೈತರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರೈತರು ದೂರು ದಾಖಲು ಮಾಡಿದ್ದಾರೆ.
ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಜೀವಂತ ಹೃದಯ ರವಾನೆ ಜೊತೆ ಯಶಸ್ವಿ ಚಿಕಿತ್ಸೆ
ಇದೇ ಮೊದಲ ಬಾರಿಗೆ ಆಲೂಗಡ್ಡೆ ಬೆಳೆ ಕಳುವು
ಕೋಲಾರ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳ ಒಳಗೆ ಹೆಚ್ಚಿಗೆ ಆಲೂಗಡ್ಡೆ ಬೆಳೆ ಕಟಾವಿಗೆ ಬರಲಿದೆ. ಮೊದಲಿನಿಂದಲೂ ಇದು ವಾಡಿಕೆಯಾಗಿದ್ದರೂ ಸಹ, ಇದೇ ಮೊದಲ ಬಾರಿಗೆ ಆಲೂಗಡ್ಡೆ ಕಳುವು ಪ್ರಕರಣ ದಾಖಲಾಗುತ್ತಿದೆ. ಈರುಳ್ಳಿ ಬೆಲೆ ಹೆಚ್ವಾದಾಗ ಈರುಳ್ಳಿ ಕದಿಯುವುದು, ಟೊಮೆಟೊ ಬೆಲೆಯು ಹೆಚ್ಚಾದಾಗ ಟೊಮೆಟೊ ಕದ್ದಿರುವ ಉದಾಹರಣೆಗಳು ಹೆಚ್ಚಿವೆ.
ಆದರೆ ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಲೆ 20 ರಿಂದ 40 ರೂಪಾಯಿಗೆ ಏರಿಕೆಯಾಗಿದ್ದು ಬೇಡಿಕೆಯು ಹೆಚ್ಚಿದೆ. ಹಾಗಾಗಿ ಕಳ್ಳರು ಯಾರು ಇಲ್ಲದ ವೇಳೆ ತೋಟಗಳಿಗೆ ನುಗ್ಗಿ ಸಲೀಸಾಗಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ರೈತ ವೆಂಕಟೇಶ್ ರಾತ್ರಿ ಹೊತ್ತು ಕಾವಲು ಇರಲು ಇಲ್ಲಿ ಆನೆಗಳ ಕಾಟವಿದೆ. ಕಷ್ಟ ಪಟ್ಟು ಸಾಲ ಮಾಡಿ ಬಂಡವಾಳ ಹಾಕಿದ್ದೇವೆ , ಬೆಳೆ ಕಟಾವು ವೇಳೆ ಕಳ್ಳರು ಆಲೂಗಡ್ಡೆ ಕದ್ದಿರುವ ಹಿನ್ನಲೆ ನಮಗೆ ತುಂಬಲಾರದ ಕಷ್ಟವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರು ಆದಷ್ಟು ಬೇಗ ಕಳ್ಳರ ಹೆಡೆಮುರಿ ಕಟ್ಟುವಂತೆ ರೈತರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ