ಧಾರವಾಡ(ಏ.30): ನಿತ್ಯವೂ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ಹತೋಟಿಗೆ ಹಾಗೂ ನಿರ್ಮೂಲನೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆಕ್ಸಿಜನ್, ಬೆಡ್, ವೆಲ್ಟಿಲೇಟರ್ ಸಮಸ್ಯೆ ಇಲ್ಲ. ಆದರೆ ಸೋಂಕು ಹತೋಟಿಗೆ ಮೂರು ವಾರ ಕರ್ಫ್ಯೂ ಅಗತ್ಯದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದೆ. ಪ್ರತಿ ನಿತ್ಯವೂ1300 ಜನರನ್ನು ಕೋವಿಡ್ ತಪಾಸಣೆ ಒಳಪಡಿಸುತ್ತಿದೆ. ಇದೀಗ ಸೋಂಕು ಹತೋಟಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಕಿಮ್ಸ್ನಲ್ಲಿ 42 ಕೆಎಲ್ ಆಕ್ಸಿಜನ್ ಸಂಗ್ರಹವಿದೆ. ಅದರಂತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲೂ ಕೂಡ 6 ಕೆಎಲ್ ಆಕ್ಸಿಜನ್ ಸಂಗ್ರಹವಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಸೇರಿ ವಿವಿಧ ಆಸ್ಪತ್ರೆಲ್ಲಿ ಎರಡು ಸಾವಿರಕ್ಕೂ ಅಧಿಕ ಬೆಡ್ಗಳಿವೆ. ಇನ್ನೂ 1074 ಬೆಡ್ಗಳು ಖಾಲಿ ಇವೆ. 397 ಆಕ್ಸಿಜನ್ ಬೆಡ್, 80 ಐಸಿಯು ಬೆಡ್ಗಳಿವೆ. ಜೊತೆಗೆ 104 ಕ್ಕೂ ಹೆಚ್ಚು ವೆಲ್ಟಿಲೇಟರ್ ಇವೆ. ಜಿಲ್ಲೆಯಲ್ಲಿ ಶೇ.11 ರಷ್ಟು ಪಾಸಿಟಿವಿಟಿ ರೇಟ್ ಇದ್ದು, ಬುಧವಾರ ಶೇ.15 ಕ್ಕೆ ಏರಿದೆ ಎಂದರು.
ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಲ್ಲ. 740 ರೆಮಿಸ್ಡಿಯರ್ ಔಷಧ ಲಭ್ಯವಿದೆ. ಕೊರತೆ ಬಗ್ಗೆ ಕೇವಲ ಊಹಾಪೋಹ ಸೃಷ್ಠಿಸಲಾಗುತ್ತಿದೆ. ಕೋವಿಡ್ ಬಗ್ಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಬೇರೆ ಜಿಲ್ಲೆಯಿಂದ ಬಂದವರಿಗೆ ಪರೀಕ್ಷೆ ನಡೆಸಿ, ಒಂದೆರಡು ದಿನದಲ್ಲಿ ವರದಿ ನೀಡುತ್ತಿದೆ ಎಂದರು.
ಕಳೆದ ಬಾರಿ ಕೊರೋನಾದ ಬಗ್ಗೆ ಅರಿವೇ ಇರಲಿಲ್ಲ. ಹೀಗಾಗಿ ಕೆಲಸ-ಕಾರ್ಯದಲ್ಲಿ ವಿಳಂಬವಾಗಿತ್ತು. ಈಗ ಎರಡನೇ ಅಲೆಯೂ ಇಷ್ಟೊಂದು ಪ್ರಮಾಣದಲ್ಲಿ ಪಸರಿಸುತ್ತದೆ ಎಂಬುವುದು ಗೊತ್ತಿರಲಿಲ್ಲ. ಆದರೆ, ಪ್ರಸಕ್ತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಕೊರೋನಾ ಎರಡನೇ ಅಲೆ ಅಬ್ಬರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. 3489 ಕೋವಿಡ್ ಪ್ರಕರಣಗಳಿವೆ. ಈ ಪೈಕಿ 2486 ಜನರು ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 228 ಅನ್ಯ ಜಿಲ್ಲೆಯವರಿದ್ದಾರೆ. ಅನ್ಯ ಜಿಲ್ಲೆ-ರಾಜ್ಯದಿಂದ ಬಂದವರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ