ಬೆಂಗಳೂರು (ಸೆಪ್ಟೆಂಬರ್ 8, ಬುಧವಾರ): ಪೂರ್ಣಚಂದ್ರ ತೇಜಸ್ವಿಯವರು (Poornachandra Tejaswi) ಕವಿ ಕುವೆಂಪುರವರ (Kuvempu) ಮಗನಾದರೂ, ಸ್ವತಂತ್ರವಾಗಿ ಸಾಹಿತ್ಯ ರಚನೆ ಮಾಡಿದರು. ಪ್ರಕೃತಿಯ ಮಹತ್ವದ ಅನಾವರಣ ಅವರ ಕೃತಿಗಳಲ್ಲಿ ಕಾಣುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಪೂರ್ಣಚಂದ್ರ ತೇಜಸ್ವಿಯವರ ಜಯಂತಿ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೇಜಸ್ವಿ ಅವರು ಪರಿಸರದ ಬಗ್ಗೆ ಬರೆದರು. ಆದರೆ ಭಾರತದಲ್ಲಿ ಪ್ರಕೃತಿಯನ್ನು ಮರೆಯಲಾಗುತ್ತಿದೆ. ನೈಸರ್ಗಿಕ ವಿಕೋಪಗಳು ಹೆಚ್ಚಿದ ಬಳಿಕ ಪ್ರಕೃತಿಯ ಮಹತ್ವದ ಅರಿವಾಗುತ್ತಿದೆ. ವಿದೇಶಗಳ ಕೆಲ ನಗರಗಳಲ್ಲಿ ಬಹುಮಹಡಿ ಕಟ್ಟಡ ಇರುವುದಿಲ್ಲ. ಬದಲಾಗಿ ವಿಶಾಲ ಉದ್ಯಾನಗಳಿರುತ್ತವೆ. ಆದರೆ ನಮ್ಮ ನಗರಗಳಲ್ಲಿ ಹೆಚ್ಚು ಕಾಂಕ್ರಿಟ್ ಬೆಳೆಸುತ್ತಿದ್ದೇವೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಂದಿನ ಅಗತ್ಯ ಎಂದರು.
ಪ್ರಕೃತಿಯಲ್ಲಿರುವ ಜಲ, ಮಣ್ಣು ಎಲ್ಲವನ್ನೂ ತಾಯಿ ಎಂದು ಕರೆಯುತ್ತೇವೆ. ಪರಿಸರದಲ್ಲಿ ಅವಶ್ಯಕತೆ ಇರುವಷ್ಟನ್ನು ಮಾತ್ರ ಬಳಸಿಕೊಂಡರೆ ಪರಿಸರ ಸಂರಕ್ಷಣೆ ಮಾಡಿ, ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತದೆ. ಪ್ರಕೃತಿ ಮಾನವನಿಗೆ ಮಾತ್ರ ಸೀಮಿತ ಎಂದುಕೊಂಡರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಪೂರ್ವಜರು ನಮಗಾಗಿ ಪ್ರಕೃತಿಯನ್ನು ಬಿಟ್ಟು ಹೋದಂತೆ ನಾವು ಕೂಡ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದರು.
ನಿಸರ್ಗದೊಂದಿಗೆ ಹೇಗೆ ಸೂಕ್ಷ್ಮವಾಗಿ ವರ್ತಿಸಬೇಕು ಎಂಬ ಬಗ್ಗೆ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ. ಅನೇಕರು ಪರಿಸರದ ಉಳಿವಿಗೆ ದುಡಿಯುತ್ತಿದ್ದಾರೆ. ಅದೇ ರೀತಿ ತೇಜಸ್ವಿಯವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಮಾಡಿದ ಸಾಹಿತ್ಯ ಕಾರ್ಯ ಉಳಿದಿವೆ ಎಂದರು.
ಪರಿಸರದ ಉಳಿವಿಗೆ ವಿಶೇಷ ಕಾರ್ಯಯೋಜನೆ
ಪರಿಸರದ ಉಳಿವಿಗೆ ವಿಶೇಷವಾದ ಕಾರ್ಯ ಯೋಜನೆ, ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ಸಚಿವ ಕೆ. ಸುಧಾಕರ್ ಅವರು ಹೇಳಿದರು.
ಇದನ್ನು ಓದಿ: Explained: ಗಣ್ಯವ್ಯಕ್ತಿ ಎಂಬುದನ್ನು ಎಲ್ಲಿಯೂ ತೋರಿಸಿಕೊಳ್ಳದ ರತನ್ ಟಾಟಾ ಜೀವನ ಶೈಲಿ ಹೇಗಿದೆ ಗೊತ್ತೇ?
ತೇಜಸ್ವಿ ಒಡನಾಟ ಮೆಲುಕು ಹಾಕಿದ ಸಿದ್ದರಾಮಯ್ಯ
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಅವರು ತೇಜಸ್ವಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಪೂರ್ಣಚಂದ್ರ ತೇಜಸ್ವಿಗೆ ಮೈಸೂರಿನಲ್ಲಿ ಗೆಳೆಯರಿದ್ದರು, ಕೆ.ರಾಮದಾಸ್ ಮನೆಗೆ ಅವರು ಬರುತ್ತಿದ್ದರು. ಅವರ ಮೂಡಿಗೆರೆಯ ತೋಟದ ಮನೆಗೆ ಒಮ್ಮೆ ನಾನು ಹೋಗಿದ್ದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ನಾನು ತಂಗಿದ್ದೆ. ಅನೇಕ ಸಲ ನನ್ನನ್ನು ಆಹ್ವಾನಿಸಿದ್ದರು. ತೇಜಸ್ವಿ ಸಾಹಿತಿ ಮಾತ್ರವಲ್ಲ ಮಹಾನ್ ಪರಿಸರ ಪ್ರೇಮಿ ಕೂಡ ಆಗಿದ್ದರು. ಉತ್ತಮ ಛಾಯಾಗ್ರಾಹಕ, ಮೀನು ಹಿಡಿಯುವ ಹವ್ಯಾಸ ಅವರದ್ದು, ಮೀನು ಸಿಗಲಿ, ಸಿಗದಿರಲಿ ಗಂಟೆಗಟ್ಟಲೇ ಕೂತಿರುತ್ತಿದ್ದರು. ನನ್ನನ್ನು ಕೂಡ ಮೀನು ಹಿಡಿಯಲು ಕರೆದುಕೊಂಡು ಹೋಗುತ್ತಿದ್ದರು. ಒಂದು ಮೀನು ಸಿಕ್ಕರೂ ಸಾಕಷ್ಟು ಖುಷಿ ಪಡುತ್ತಿದ್ದರು ಎಂದು ನೆನಪಿನಾಳಕ್ಕೆ ಇಳಿದರು ಸಿದ್ದರಾಮಯ್ಯ.
ಪೂರ್ಣಚಂದ್ರ ತೇಜಸ್ವಿ ಎಂ.ಎ ಕನ್ನಡ ಮಾಡಿದ್ದರು, ಕಾಲೇಜಿನಲ್ಲಿ ಪ್ರೊಫೆಸರ್ ಆಗಿರಬಹುದಿತ್ತು. ಆದರೆ ಅವರು ಪರಿಸರ ಪ್ರೇಮಿಯಾದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರ ಪುತ್ರ ಎಂದು ತೇಜಸ್ವಿ ಎಂದೂ ಅನುಕೂಲ ಪಡೆಯಲಿಲ್ಲ. ಲೇಖಕನಾಗಿ ವಿಶಿಷ್ಠವಾದ ರೀತಿಯ ಸಾಹಿತ್ಯ ಸೃಷ್ಠಿ ಮಾಡಿದರು. ಪ್ರಕೃತಿ ಬಗ್ಗೆ ಸಾಕಷ್ಟು ಲೇಖನ ಬರೆದರು. ಈಗಲೂ ಅನೇಕರಿಗೆ ತೇಜಸ್ವಿ ಸ್ಪೂರ್ತಿ. ರಾಜಕಾರಣದ ಬಗ್ಗೆ ಅವರು ಮಾತನಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ, ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ನನ್ನ ಬಗ್ಗೆ ಪ್ರೀತಿ ಅಭಿಮಾನ ಇತ್ತು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ