ಮೈಸೂರು(ನ.29): ಮರಾಠ ಪ್ರಾಧಿಕಾರ ವಿರೋಧಿಸಿ ಇಂದು ವಾಟಾಳ್ ನಾಗರಾಜ್, ಸಾರಾ ಗೋವಿಂದು ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು-ಬೆಂಗಳೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದರು. ಜೊತೆಗೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಭಾಗಿಯಾಗಿದ್ದವು. ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಯಡಿಯೂರಪ್ಪ ಅವರೇ ನೀವು ಸರ್ವಾಧಿಕಾರಿ ಮುಖ್ಯಮಂತ್ರಿ. ಈವರೆಗೂ ನಿಮ್ಮಂತ ಸರ್ವಾಧಿಕಾರಿ ಯಾರೂ ಅಧಿಕಾರಕ್ಕೆ ಬಂದಿಲ್ಲ. ನಿಮಗೆ ಕನ್ನಡದ ಬಗ್ಗೆ ಯಾವುದೇ ಅಭಿಮಾನವಿಲ್ಲ. ಇದನ್ನು ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಅನಿವಾರ್ಯ. ನಾಳೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ಕರಾಳ ದಿನ ಆಚರಣೆ ಮಾಡುತ್ತೇವೆ. ಬೃಹತ್ ಕರಾಳ ದಿನಾಚರಣೆ ಆಚರಣೆಯಲ್ಲಿ ಕನ್ನಡಪರ ಸಂಘಟನೆಗಳು ಭಾಗಿಯಾಗಲಿವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ವಾಟಾಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ಅನೇಕ ಹೋರಾಟಗಾರರನ್ನು ವಶಕ್ಕೆ ಪಡೆದು, ಡಿಆರ್ ವಾಹನದಲ್ಲಿ ಕರೆದೊಯ್ದರು. ಇದೇ ವೇಳೆ, ವಾಟಾಳ್ ನಾಗರಾಜ್ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹಾಗೂ ಶಾಸಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರಿಬ್ಬರು ಯಾರು? ಎಂದು ಅರ್ಥ ಆಗಿಲ್ಲ. ಮಂತ್ರಿಗಳು ಹಾಗೂ ಎಂಪಿಗಳೇ ಈ ಬಗ್ಗೆ ಮಾತಾಡುತ್ತಿಲ್ಲ. ಇವರ್ಯಾರು ಮಾತಾಡೋಕೆ? ಇವರು ಯಾರು ಅಂತ ಗೊತ್ತಿಲ್ಲದೆ ಇವರನ್ನ ನಾನು ನಾಯಿಗಳು ಅಂತ ಹೆಸರಿಟ್ಟಿದ್ದೀನಿ.ನಾಯಿಗಳು ಬೊಗಳಿದರೆ ಜನರು ಉತ್ತರ ಕೊಡ್ತಾರೆ. ನಾವು ನಾಯಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಶೀಘ್ರ ನಿರ್ಧಾರ; ಸಚಿವ ಬಿ. ಶ್ರೀರಾಮುಲು
ಬಳಿಕ ಮಾತನಾಡಿದ ಸಾ.ರಾ.ಗೋವಿಂದು, ಕರ್ನಾಟಕದಲ್ಲಿ ಮರಾಠ ಪ್ರಾಧಿಕಾರ ಮಾಡಬೇಡಿ. ಹಾಗೆನಾದರೂ ಆದರೆ, ಮುಂದೆ ತಮಿಳರು ಕೇಳ್ತಾರೆ, ಬೇರೆ ಅವರು ಸಹ ಕೇಳ್ತಾರೆ. ಈಗಾಗಲೇ ಹಲವರು ನಮಗೆ ಪ್ರಾಧಿಕಾರ ಮಾಡಿ ಎಂದು ಬರುತ್ತಿದ್ದಾರೆ. ಇದನ್ನ ಮಾಡಲು ಅವರಿಗೆ ಯಾರು ಸಲಹೆ ಕೊಟ್ಟರೋ ಗೊತ್ತಿಲ್ಲ. ಹಾಗೆನಾದರೂ ಇವರಿಗೆ ಸಹಾಯ ಮಾಡಬೇಕಾದರೆ ಬೇರೆ ರೂಪದಲ್ಲಿ ಮಾಡಿ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿ. ಪ್ರಾಧಿಕಾರ ಮಾಡಿ ರಾಜಕೀಯ ಲಾಭವನ್ನ ಪಡೆಯಬೇಡಿ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ