ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಭದ್ರಕೋಟೆಗೆ ಇಂದು ಪ್ರಧಾನಿ ಮೋದಿ (PM Modi) ಲಗ್ಗೆ ಹಾಕ್ತಿದ್ದಾರೆ. ಖರ್ಗೆ ಕೋಟೆಯನ್ನಷ್ಟೇ ಟಾರ್ಗೆಟ್ ಮಾಡಿಲ್ಲ. ಮೋದಿ ಹಾಕಿರೋ ಲೆಕ್ಕಾಚಾರ, ಹಗರಣದ ಆರೋಪಗಳಲ್ಲಿ ಸಿಕ್ಕಿರೋ ಬಿಜೆಪಿ ಸರ್ಕಾರಕ್ಕೆ (Karnataka BJP Government) ಸಂಜೀವಿನಿ ಸಿಕ್ಕಂತೆ. ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ (Karnataka Assembly Election) ಶತಾಯಗತಾಯ 140 ರಿಂದ 150 ಸೀಟು ಗೆಲ್ಲಲೇಬೇಕು. ಇದು ಮೋದಿ ಮತ್ತು ಅಮಿತ್ ಶಾ (Amit Sha) ಮಾಡಿರುವ ಶಪಥ. ಹಾಗಾಗಿನೇ ವೀಕ್ ಆಗಿರೋ ರಾಜ್ಯ ಬಿಜೆಪಿ ನಾಯಕರನ್ನ ಹುರಿದುಂಬಿಸೋಕೆ ಪ್ರಧಾನಿ ಮೋದಿ ರಾಜ್ಯಕ್ಕೆ ದಂಡಯಾತ್ರೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಧೂಳೆಬ್ಬಿಸಿದ್ದ ಮೋದಿ, ಇಂದು ಕಲ್ಯಾಣ ಕರ್ನಾಟಕದಲ್ಲಿ(Kalyana Karnataka) ಹವಾ ಎಬ್ಬಿಸೋಕೆ ಬರ್ತಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಕಿಲಕಿಲ ಅಂತಿದೆ ಕಮಲ
ಇಂದು ಬೆಳಗ್ಗೆ 9 ಗಂಟೆಗೆ ಪ್ರಧಾನಿ ದೆಹಲಿಯಿಂದ ಹೊರಟು ಬೆಳಗ್ಗೆ 11 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಕಲಬುರಗಿಯಿಂದ MI-17ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಕೊಡೇಕಲ್ ಹೆಲಿಪ್ಯಾಡ್ಗೆ 11.50ಕ್ಕೆ ಆಗಮಿಸುತ್ತಾರೆ. ಬಳಿಕ ಯಾದಗಿರಿಯಲ್ಲಿ ಒಟ್ಟು 5,104 ಕೋಟಿ ರೂಪಾಯಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು.
— Narendra Modi (@narendramodi) January 18, 2023
ಯಾದಗಿರಿಯ ಕೊಡೇಕಲ್ ಬಳಿ 1,050 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸ್ಕಾಡಾ ಯೋಜನೆ ಇದು. ಬಸವಸಾಗರ ಜಲಾಶಯಕ್ಕೆ 365 ಹೈಟೆಕ್ ನಿರ್ಮಿಸಲಾಗಿದೆ. ಬಟನ್ ಮೂಲಕ ನೀರು ಹರಿಸುವ ದೇಶದ ಪ್ರಥಮ ಯೋಜನೆ ಇದಾಗಿದ್ದು, 3 ಲಕ್ಷ ರೈತರ 4.5 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಕಲಬುರಗಿ, ಯಾದಗಿರಿ, ವಿಜಯಪುರದ 560 ಗ್ರಾಮಗಳಿಗೆ ಇದರ ಲಾಭ ಸಿಗಲಿದೆ.
ಇದನ್ನೂ ಓದಿ: PM Modi: ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ- ಕೇಳಿದ್ರಾ 12ರ ಬಾಲಕನ ಮಾತು?
2,054 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ಗೆ ಅಡಿಗಲ್ಲು
ಸ್ಕಾಡಾ ಯೋಜನೆ ಬಳಿಕ 2,054 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ಗೆ ಅಡಿಗಲ್ಲು ಹಾಕಲಿದ್ದಾರೆ. ಜಲಧಾರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದಾಗಿದ್ದು ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ಯಾದಗಿರಿ, ಗುರುಮಠಕಲ್ ತಾಲ್ಲೂಕಿನ ಒಟ್ಟು 710 ಗ್ರಾಮಗಳಿಗೆ ಹಾಗು ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದೆ. ಈಗಾಗ್ಲೇ 117 ದಶಲಕ್ಷ ಲೀಟರ್ ನೀರು ಸಂಸ್ಕರಣೆ ಘಟಕ ನಿರ್ಮಾಣ ಆಗಿದ್ದು, ಮೋದಿ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದಾರೆ.
ಮೋದಿಯಿಂದ ಷಟ್ಪಥ ಹಸಿರುವಲಯಕ್ಕೆ ಶಂಕುಸ್ಥಾಪನೆ
ಪ್ರಧಾನಿ ಮೋದಿ ಅವರು ಇಂದು ಷಟ್ಪಥ ಹಸಿರುವಲಯಕ್ಕೆ ಶಂಕುಸ್ಥಾಪನೆ ಹಾಕಲಿದ್ದಾರೆ. ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇನ ಹಸಿರುವಲಯ ಕಾಮಗಾರಿ ಇದಾಗಿದ್ದು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗ್ತಿದೆ. ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬರುವ 65.5 ಕಿ.ಮೀ ಉದ್ದದ ಹಸಿರು ವಲಯ ಇದಾಗಿದ್ದು, ಒಟ್ಟು 2,000 ಕೋಟಿ ರೂಪಾಯಿ ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇನ 1 ಭಾಗವಾಗಿದೆ.
ಇದನ್ನೂ ಓದಿ: PM Narendra Modi Statue: ಪಿಎಂ ಮೋದಿಯ 60 ಪ್ರತಿಮೆ ತಯಾರಿಸಿದ ಕಲಬುರಗಿ ಕಲಾವಿದ! ಇವ್ರ ಆ ಆಸೆ ಈಡೇರುತ್ತಾ?
ಉಳಿದಂತೆ ಯಾದಗಿರಿಯ ಈ ಕಾರ್ಯಕ್ರಮಕ್ಕೆ 54 ಎಕೆರೆ ಜಾಗದಲ್ಲಿ ಜರ್ಮನ್ ಟೆಕ್ನಾಲಜಿ ವೇದಿಕೆ ಹಾಕಲಾಗಿದೆ. 500 ಎಕರೆ ಜಾಗದಲ್ಲಿ 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಿದ್ದು, 2,300 ಪೊಲೀಸರನ್ನ ಭದ್ರತೆಗೆ ಹಾಕಿದ್ದಾರೆ. ಇಂದು ಯಾದಗಿರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಾದಗಿರಿಯಿಂದ ಮಧ್ಯಾಹ್ನ 1 ಗಂಟೆ 50 ನಿಮಿಷಕ್ಕೆ ಹೊರಟು ಮೋದಿ ಖರ್ಗೆ ಕೋಟೆಗೆ ಲಗ್ಗೆ ಹಾಕಲಿದ್ದಾರೆ.
ಕಲಬುರಗಿ ಸಮಾವೇಶದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸೇಡಂ ತಾ. ಮಳಖೇಡ ಗ್ರಾಮದಲ್ಲಿ ಹಕ್ಕುಪತ್ರ ವಿತರಿಸಲಿದ್ದು, ತಾಂಡಾಗಳನ್ನ ಕಂದಾಯ ಗ್ರಾಮ ಅಂತ ಸರ್ಕಾರ ಘೋಷಿಸಿದೆ. ಈ ತಾಂಡಾಗಳಲ್ಲಿರುವ 51,900 ಕುಟುಂಬದವರಿಗೆ ಹಕ್ಕುಪತ್ರ ವಿತರಣೆ ಆಗ್ತಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರಯ 5 ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ