ಮೈಸೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ (BJP) 2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲಿ(Lok Shabha) ಬಹುಮತದಿಂದ ಗೆಲ್ಲಬೇಕು. ನಂತರ ದಿನಗಳಲ್ಲಿ ಮೋದಿ ನಿವೃತ್ತಿಯಾಗಬೇಕು. ಅಲ್ಲಿತನಕ ಅವರು ತಮ್ಮಂತಹ ಮತ್ತೊಬ್ಬ ನಾಯಕನನ್ನು ತಯಾರು ಮಾಡಬೇಕು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ (SL Bhyrappa) ಅಭಿಪ್ರಾಯಪಟ್ಟಿದ್ದಾರೆ. ಪದ್ಮಭೂಷಣ ಪುರಸ್ಕಾರ ದೊರೆತಿದ್ದಕ್ಕೆ ಮೈಸೂರಿನ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2019ರಲ್ಲೇ ನಾನು ಒಂದು ಲೇಖನ ಬರೆದಿದ್ದೆ. ಮೋದಿ ಮತ್ತೊಮ್ಮೆ ಬಹುಮತದೊಂದಿಗೆ ಪ್ರಧಾನಿ ಆಗಲಿ ಎಂದು ಬರೆದಿದ್ದೆ. 2024ರಿಂದ 2029ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ ಎಂದು ಆಶಿಸುತ್ತಿದ್ದೇನೆ. ನಂತರ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ಸಿದ್ಧಪಡಿಸಲಿ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಮೋದಿಯವರಿಂದಲೇ ಪ್ರಶಸ್ತಿ ಲಭಿಸಿದೆ
ದೇಶದ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ. ಮೋದಿ ಅವರಿಂದಲೇ ನನಗೆ ಇದು ದೊರೆತಿದೆ. ಅವರಿಲ್ಲದಿದ್ದರೆ ಇದು ಬರುತ್ತಿರಲಿಲ್ಲ. ಆದರೆ ಪ್ರಶಸ್ತಿ ಕೊಟ್ಟಿದ್ದಾರೆಂದು ಕಾರಣಕ್ಕೆ ಅವರ ಸರ್ಕಾರವನ್ನು ಹೊಗಳುವುದಿಲ್ಲ. ನಾನೇನು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ. ಯಾವುದೇ ಪಕ್ಷವನ್ನು ಓಲೈಸಲು ನಾನು ಈ ಮಾತು ಹೇಳುತ್ತಿಲ್ಲ. ದೇಶದ ಪ್ರಧಾನಿಯಾಗಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದೇಶದಲ್ಲಿ ಮೋದಿ ಸರ್ಕಾರದಂತಹ ಮತ್ತೊಂದು ಸರ್ಕಾರ ನಾನು ನೋಡಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೈರ್ಯ ಇರುವಂತಹ ಪ್ರಧಾನಿ ಇದುವರೆಗೆ ಯಾರು ಬಂದಿರಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Padma Awards 2023: ಎಸ್ ಎಂ ಕೃಷ್ಣಗೆ ಪದ್ಮ ವಿಭೂಷಣ, ಸುಧಾ ಮೂರ್ತಿ, ಬೈರಪ್ಪಗೆ ಪದ್ಮ ಭೂಷಣ ಗೌರವ
ಪ್ರಶಸ್ತಿಗಿಂತ ನನ್ನ ಪುಸ್ತಕ ಓದಿದರೆ ಹೆಚ್ಚು ಸಂತೋಷ
ನನಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ನನಗೆ 92 ವರ್ಷ ವಯಸ್ಸಾಗಿದೆ, ಮುಂದೊಂದು ದಿನ ನಾನು ಸತ್ತರೂ ನನ್ನ ಪುಸ್ತಗಳು ಬದುಕುತ್ತವೆಯೇ ಎನ್ನುವುದು ಮುಖ್ಯ. ಈ ಪ್ರಶಸ್ತಿಗಳು ಬರುತ್ತವೆ, ಹೋಗುತ್ತವೆ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತವಾಗಿರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತವಾಗಿರುತ್ತಾನೆ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ಅದೇ ದೊಡ್ಡ ಪ್ರಶಸ್ತಿ ಎಂದರು.
ವಿಪಕ್ಷಗಳು ಬೈಗುಳದಲ್ಲೇ ತೊಡಗುವುದನ್ನ ಬಿಡಲಿ
ನಮ್ಮ ದೇಶ ಇಂದು ಬಹಳ ಪ್ರಗತಿ ಸಾಧಿಸಿದೆ. ಹಾಗೆಯೇ ಇನ್ನೂ ಸವಾಲುಗಳಿವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಆ ರೀತಿ ಇಲ್ಲ. ವಿರೋಧ ಪಕ್ಷದಲ್ಲಿರುವವರು ತಮ್ಮ ಜವಾಬ್ದಾರಿ ಮರೆತೂ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ. ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು ಸರ್ಕಾರ ಭರವಸೆಯನ್ನು ಇಡೇರಿಸಿ ಎಂಬುದನ್ನು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 2002ರ ಗುಜರಾತ್ ಗಲಬೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಆರೋಪಿಸಿ ಬಿಬಿಸಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಭೈರಪ್ಪ, ಬಿಬಿಸಿ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದ್ದೇಕೆ? ಜಿ 20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿರುವುದಕ್ಕೆ ಇಂತಹದ್ದನ್ನೆಲ್ಲಾ ಮಾಡಿದ್ದಾರೆ. ಹಳೆಯ ವಿಚಾರಗಳನ್ನು ತೆಗೆಯುತ್ತಿದ್ದಾರೆ ಎಂದು ತಿಳಿಸಿದರು.
ಎಸ್ಎಲ್ ಭೈರಪ್ಪ ಪದ್ಮಭೂಷಣ ದೊರೆತರೆ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ, ಇನ್ಫೋಸಿಸ್ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಹಾಗೂ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ