ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಭದ್ರಕೋಟೆಗಳಾಗಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಇಂದು ಅಬ್ಬರದ ಪ್ರಚಾರ (Election Campaign) ನಡೆಸಲಿದ್ದಾರೆ. ದಳಪತಿಗಳ ಭದ್ರಕೋಟೆಗಳಾಗಿರುವ ಕೋಲಾರ (Kolar), ಚನ್ನಪಟ್ಟಣ (Channapatna), ಹಾಸನದ ಬೇಲೂರಲ್ಲಿ (Beluru, Hassan) ಸಮಾವೇಶ ಆಯೋಜನೆ ಮಾಡಲಾಗಿದೆ. ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯವರ (Former CM Siddaramaiah) ತವರು ಜಿಲ್ಲೆ ಮೈಸೂರಲ್ಲಿ ರೋಡ್ಶೋ ಮಾಡಲಿದ್ದಾರೆ. ಕೋಲಾರದಲ್ಲಿ ಬೆಳಗ್ಗೆ 11.30, ಚನ್ನಪಟ್ಟಣದಲ್ಲಿ ಮಧ್ಯಾಹ್ನ 1.30, ಬೇಲೂರಿನಲ್ಲಿ ಮಧ್ಯಾಹ್ನ 3.45ಕ್ಕೆ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಸಂಜೆ 5.45ಕ್ಕೆ ಮೈಸೂರಿನಲ್ಲಿ 11 ಕಿ.ಮೀ. ರೋಡ್ಶೋ ನಡೆಸಲಿದ್ದಾರೆ.
ಕೋಲಾರ
ಕೋಲಾರದ ಕೆಂದಟ್ಟಿ ಗ್ರಾಮದ ರಾ.ಹೆ 75ರ ಪಕ್ಕದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಲೆ ನರಸಾಪುರ-ಕೊಂಡರಾಜನಹಳ್ಳಿವರೆಗೆ N.H 75 ಸಂಚಾರ ಬಂದ್ ಮಾಡಲಾಗಿದೆ.
ಚನ್ನಪಟ್ಟಣ
ಮಾಜಿ ಸಿಎಂ H.D.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ 30 ಎಕರೆಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದ್ದು, 50,000 ಆಸನ ವ್ಯವಸ್ಥೆ ಮಾಡಲಾಗಿದೆ. 1.5 ಲಕ್ಷ ಜನರು ಸೇರುವ ನಿರೀಕ್ಷೆಗಳಿವೆ. ರಾಮನಗರ, ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳ ಪರ ಮೋದಿ ಅವರು ಪ್ರಚಾರ ಮಾಡಲಿದ್ದಾರೆ. ಕುಣಿಗಲ್ ಕ್ಷೇತ್ರ ಅಭ್ಯರ್ಥಿಗೂ ವೇದಿಕೆಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ.
ಹಾಸನ
ಜೆಡಿಎಸ್ ಸುಭದ್ರಕೋಟೆ ಹಾಸನದ ಬೇಲೂರಿನ ಇಬ್ಬೀಡು ಗ್ರಾಮದ ಬಳಿ ಬೃಹತ್ ಸಮಾವೇಶ ಆಯೋಜಿಸಿದ್ದು, ಹಾಸನದ 7 ಕ್ಷೇತ್ರ, ಚಿಕ್ಕಮಗಳೂರಿನ 3 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: PM Modi: ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನ ಏನಂತಾರೆ? ಬಿಜೆಪಿ ಮಾಧ್ಯಮ ಟೀಂಗೆ ಮೋದಿ ಪ್ರಶ್ನೆ
ಮೈಸೂರು
ಮೈಸೂರಿನ ಗನ್ಹೌಸ್ ಸರ್ಕಲ್ನಿಂದ ಪ್ರಧಾನಿಗಳು ರೋಡ್ಶೋ ನಡೆಸಲಿದ್ದಾರೆ. ಮೈಸೂರು ವೀಳ್ಯದೆಲೆ, ಶ್ರೀಗಂಧ, ಮೈಸೂರ್ ಸಿಲ್ಕ್ ಪ್ರಧಾನಿಗಳಿಗೆ ಉಡುಗೊರೆಯನ್ನಾಗಿ ನೀಡಲಾಗುತ್ತದೆ. ರೋಡ್ಶೋ ವೇಳೆ ಹಿರಿಯ ನಾಗರೀಕರಿಗೆ ಕೂರಲು 5 ಕಡೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ