ಯಾದಗಿರಿ: ಇಂದು ಪ್ರಧಾನಿ ಮೋದಿ (PM Modi) ಕಲಬುರಗಿ (Kalaburagi) ಹಾಗೂ ಯಾದಗಿರಿಗೆ (Yadagiri) ಬೆಳಗ್ಗೆ 11 ಗಂಟೆಗೆ ಆಗಮಿಸುತ್ತಿದ್ದಾರೆ. ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮಕ್ಕೆ ಮೋದಿ ಭೇಟಿ ನೀಡಲಿದ್ದು, ಸ್ಕಾಡಾ ಯೋಜನೆ (SCADA), 710 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ ಚಾಲನೆ ಕೊಡಲಿದ್ದಾರೆ. ಕಲಬುರಗಿಯ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ. ಸುಮಾರು 10 ಸಾವಿರದ 500 ಕೋಟಿ ಮೊತ್ತದ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇನ್ನು ಮೋದಿ ಕಾರ್ಯಕ್ರಮಕ್ಕೆ ಈಗಾಗಲೇ ಬೃಹತ್ ವೇದಿಕೆ ಸಿದ್ಧಗೊಂಡಿದೆ.
ಒಂದೇ ತಿಂಗಳಲ್ಲಿ 2ನೇ ಬಾರಿ ಕರ್ನಾಟಕಕ್ಕೆ
ಪ್ರಧಾನಿ ಮೋದಿ ಅವರು ಒಂದೇ ತಿಂಗಳಲ್ಲಿ 2ನೇ ಬಾರಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಅಂತ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka Election 2023: ಬಿಎಸ್ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ!
ಮೋದಿ ಸಮಾವೇಶಕ್ಕೆ ಬಂದವ್ರಿಗೆಲ್ಲಾ ಭೂರೀ ಭೋಜನ
ಜಿಲ್ಲೆಯಲ್ಲಿ ನಮೋ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭೂರೀ ಭೋಜನ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ಊಟ, ಜನರಿಗೆ ಪ್ರತ್ಯೇಕ ಊಟ ತಯಾರಿ ನಡೆದಿದೆ. ಹೋಳಿಗೆ, ಚಪಾತಿ, 2 ಥರದ ಕುರ್ಮಾ ಕಾಳು ಪಲ್ಯ ಸಿದ್ಧವಾಗಿದ್ದು, ಗಣ್ಯರಿಗೆ ಉತ್ತರ ಕರ್ನಾಟಕ ಶೈಲಿಯ ಅಡುಗೆ ಮಾಡಿದ್ದಾರೆ. ಅಲ್ಲದೇ ವಿಐಪಿಗಳಿಗಂತಾನೇ ಪ್ರತ್ಯೇಕವಾಗಿ ಊಟದ ಕೌಂಟರ್ ವ್ಯವಸ್ಥೆಯನ್ನು ಮಾಡಲಾಗಿದೆ.
ಸಮಾವೇಶಕ್ಕೆ ಬರುವ ಜನರಿಗೆ ಮೊಸರನ್ನ, ಹುಗ್ಗಿ-ತುಪ್ಪ, ಪಲಾವ್ ಸಿದ್ಧವಾಗಿದ್ದು, ಸುಮಾರು 350 ಹುಬ್ಬಳ್ಳಿ ಮೂಲದ ಬಾಣಸಿಗರಿಂದ ಅಡುಗೆ ತಯಾರಾಗಿದೆ. ಜನ ಸಾಮಾನ್ಯರ ಊಟಕ್ಕೆ 230 ಕೌಂಟರ್ ತೆರೆಯಲಾಗಿದ್ದು, ಎಲ್ಲರಿಗೂ ರುಚಿಯಾದ ಊಟ ಸಿಗುವಂತೆ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಬಲಭಾಗದಲ್ಲೇ ಭೂರೀ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಸುಮಾರು 80 ಹೆಕ್ಟೇರ್ ನಷ್ಟು ಜಾಗದಲ್ಲಿ ಭೋಜನ ಶಾಲೆ ನಿರ್ಮಾಣ ಮಾಡಲಾಗಿದೆ. ಇನ್ನ ಬಾಣಸಿಗರು, ಸ್ವಯಂ ಸೇವಕರೂ ಸೇರಿ 1000 ಕ್ಕೂ ಹೆಚ್ಚು ಜನರಿಂದ ಅಡುಗೆ ಉಸ್ತುವಾರಿ ವಹಿಸಲಾಗಿದೆ.
ಇನ್ನು, ಕಲಬುರಗಿಯ ಮಳಖೇಡ ಗ್ರಾಮದಲ್ಲಿ ನಡೆಯಲಿರುವ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಪಲಾವ್, ಸಾಂಬಾರ್, ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತಿದೆ. ಮೂರು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನ ಕ್ಯಾಟ್ರಿಂಗ್ ತಂಡ ಒಟ್ಟು 450 ಜನ ಅಡುಗೆ ತಯಾರಿ ಮಾಡುತ್ತಿದ್ದಾರೆ. 250 ಕೌಂಟರ್ ನಲ್ಲಿ 600 ಜನರಿಂದ ಅಡುಗೆ ಬಡಿಸಲು ವ್ಯವಸ್ಥೆ ಮಾಡಲಾಗಿದ್ದು, 300 ಕ್ವಿಂಟಾಲ್ ಅಕ್ಕಿ , 3 ಲಕ್ಷ ಮೈಸೂರು ಪಾಕ್ ಸಿದ್ದತೆ ಮಾಡಲಾಗುತ್ತಿದೆ.
ಇದನ್ನೂ ಓದಿ: PM Narendra Modi: ಖರ್ಗೆ ಭದ್ರಕೋಟೆ ಛಿದ್ರ ಮಾಡಲು ಮೋದಿ ಲಗ್ಗೆ; ಇಂದು ಯಾದಗಿರಿ, ಕಲಬುರಿಯಲ್ಲಿ ಪ್ರಧಾನಿ ಮೋದಿ ಅಬ್ಬರ
ಪ್ರಧಾನಿ ಮೋದಿಗಾಗಿ ವಿಶೇಷ ಗಿಫ್ಟ್
ಇನ್ನು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಗಿಫ್ಟ್ ಸಿದ್ಧವಾಗಿದೆ. ಕಲಬುರಗಿಯ ಮಳಖೇಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಡಳಿದಿಂದ 12ನೇ ಶತಮಾನದ ಅನುಭವ ಮಂಟಪದ ವರ್ಣಚಿತ್ರ ವನ್ನು ಉಡುಗೊರೆಯಾಗಿ ನೀಡಲಿದೆ. ಕಲಬುರಗಿಯ ಖ್ಯಾತ ಅಂತರರಾಷ್ಟ್ರೀಯ ಚಿತ್ರಕಲಾವಿದ ಜೆ.ಎಸ್.ಖಂಡೇರಾವ್ ವರ್ಣಚಿತ್ರ ರಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ