ಬೆಂಗಳೂರು(ಫೆ.22): ಎತ್ತಣ ಮಾಮರ, ಎತ್ತಣ ಕೋಗಿಲೆ..ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಕೂಡಲಸಂಗಮದೇವನನ್ನು ಕೇಳಿದ್ದ ಕವಿ ಸರ್ವಜ್ಞ. ಆದ್ರೆ ಇಲ್ಲಿ ಈ ಸಂಬಂಧ ಸತ್ಯ ಎಂದು ನಿರೂಪಿಸುವಂ ಘಟನೆಯೊಂದು ನಡೆದಿದೆ.
ನಿಮಗೆ ಗುರು ರಾಘವೇಂದ್ರ ಬ್ಯಾಂಕಿನಿಂದ ಮೋಸ ಹೋದ ಜನರ ಗೋಳು ನೆನಪಿದ್ಯಾ? ಜೀವಮಾನ ಪೂರ್ತಿ ಕೂಡಿಟ್ಟಿದ್ದ ಪ್ರತೀ ರೂಪಾಯಿಯನ್ನೂ ಹೆಚ್ಚಿನ ಬಡ್ಡಿಯ ಆಸೆಗೆ ಗುರು ರಾಘವೇಂದ್ರ ಬ್ಯಾಂಕಿನಲ್ಲಿ ಇಟ್ಟಿದ್ದರು ಅನೇಕರು. ನಂತರ ಅವರನ್ನು ಸಾಕ್ಷಾತ್ ಗುರು ರಾಘವೇಂದ್ರನೂ ಕಾಪಾಡೋಕೆ ಆಗ್ಲಿಲ್ಲ ಅನ್ನೋದು ಈಗಾಗಲೇ ತಿಳಿದಿರುವ ವಿಚಾರ. ಆದ್ರೆ ಇವರ ಸಮಸ್ಯೆಗಳು ಬರೀ ಹಣ ಕಳೆದುಕೊಳ್ಳೋದಷ್ಟೇ ಆಗಿಲ್ಲ, ಅತ್ಯಮೂಲ್ಯವಾದ ಆರೋಗ್ಯವನ್ನೂ ಅನೇಕರು ಇದರಿಂದ ಕಳೆದುಕೊಂಡಿದ್ದಾರೆ.
52 ವರ್ಷದ ಗಿರೀಶ್ ಗೆ ಕೆಲ ವರ್ಷಗಳಿಂದ ಸೋರಿಯಾಸಿಸ್ ಖಾಯಿಲೆ ಇತ್ತು. ಅದಕ್ಕೆ ಅವರು ಸೂಕ್ತ ಚಿಕಿತ್ಸೆ ಪಡೆದು ಉತ್ತಮವಾಗಿದ್ದರು. ಸೋರಿಯಾಸಿಸ್ ಸಂಪೂರ್ಣವಾಗಿ ಗುಣವಾಗುವ ಖಾಯಿಲೆ ಅಲ್ಲ, ಆದ್ರೆ ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು. ಗಿರೀಶ್ ಅವರ ಖಾಯಿಲೆಯೂ ಸಂಪೂರ್ಣ ಹತೋಟಿಯಲ್ಲಿ ಇತ್ತು, ಅವರೂ ಆರಾಮಾಗೇ ಇದ್ರು. ಆದ್ರೆ ಬಂದು ಬಡಿಯಿತಲ್ಲಾ ಬರಸಿಡಿಲು !?
ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು
ತಮ್ಮ ಜೀವಮಾನವಿಡೀ ಕೂಡಿಟ್ಟಿದ್ದ ಪ್ರತೀ ರೂಪಾಯಿಯನ್ನೂ ಯಾವುದೋ ವಿಷ ಘಳಿಗೆಯಲ್ಲಿ ಗುರು ರಾಘವೇಂದ್ರ ಬ್ಯಾಂಕಿನಲ್ಲಿ ಇಟ್ಟಿದ್ದರು ಗಿರೀಶ್. ಧಿಡೀರನೆ ಒಂದು ದಿನ ಗುರು ರಾಘವೇಂದ್ರ ಬ್ಯಾಂಕಿನ ಮಹಾಮೋಸ ಬೆಳಕಿಗೆ ಬಂತು. ಆ ಬ್ಯಾಂಕಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಹೂಡಿದ್ದ ಗಿರೀಶ್ ಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಯ್ತು. ಖಾಸಗಿ ವ್ಯವಹಾರ ನಡೆಸುವ ಇವರಿಗೆ ಅದು ಬದುಕಿನ ಕೊನೆತನಕ ತನ್ನನ್ನು ಪೊರೆಯುವ ಹಣ. ಕೂಡಿಟ್ಟ ಪ್ರತೀ ರೂಪಾಯಿಯನ್ನೂ ಗುರು ರಾಘವೇಂದ್ರ ಬ್ಯಾಂಕಿನಲ್ಲಿ ಇರಿಸಿದ್ದರು. ಆದ್ರೆ ಬ್ಯಾಂಕಿನ ಮೋಸ ಹೊರಬಿದ್ದು ತಮ್ಮ ಹಣ ಮುಳುಗಿದ್ದು ತಿಳಿದು ಇವರಿಗೆ ದಿಕ್ಕೇ ತೋಚದಂತಾಯ್ತು.
ಇದರಿಂದಾಗಿ ವಿಪರೀತ ಮಾನಸಿಕ ಒತ್ತಡದಿಂದ ಬಳಲಿದರು ಗಿರೀಶ್. ಮನೆಯವರ ಮೇಲೆ ಸುಖಾಸುಮ್ಮನೆ ಕೂಗಾಡೋದು, ಊಟ-ನಿದ್ದೆ ಇಲ್ಲದೆ ದಿನಗಳನ್ನು ಚಿಂತಾಕ್ರಾಂತವಾಗಿ ಕಳೆಯೋಕೆ ಶುರುಮಾಡಿದ್ರು. ಮಾನಸಿಕ ಒತ್ತಡ ಹೆಚ್ಚಿದ ಪರಿಣಾಮ ಧಿಡೀರನೆ ಸೋರಿಯಾಸಿಸ್ ಸಮಸ್ಯೆ ಹೆಚ್ಚಾಯ್ತು.
ಮೊದಲಿದ್ದ ಸೋರಿಯಾಸಿಸ್ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇದ್ದು ಬಹಳ ಮೈಲ್ಡ್ ಆಗಿತ್ತು. ಆದ್ರೆ ಹಣ ಕಳೆದುಕೊಂಡು ಚಿಂತೆಯಿಂದ ಬಳಲುತ್ತಿದ್ದ ಇವರಿಗೆ ಮಾನಸಿಕ ಒತ್ತಡ ಹೆಚ್ಚಾಗಿದ್ದು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು. ನೋಡನೋಡುತ್ತಲೇ ಸೋರಿಯಾಸಿಸ್ ಇಡೀ ಮೈತುಂಬಾ ತೀಕ್ಷ್ಣವಾಗಿ ಹರಡಿತು. ಕೈ ಕಾಲುಗಳ ತುಂಬಾ ಹುಣ್ಣುಗಳು ವಿಪರೀತವಾಗಿಬಿಟ್ಟವು, ನವೆ, ಗುಳ್ಳೆ ಎದ್ದು ಹಿಂಸೆಯಾಗತೊಡಗಿತು.
ಕೊರೋನಾ ಲಾಕ್ ಡೌನ್ ಶುರುವಾದ ನಂತರ ವೈದ್ಯರ ಬಳಿಗೂ ಹೋಗಲಾರದೆ ಪರದಾಡಿಬಿಟ್ಟರು ಗಿರೀಶ್. ಕೂತಲ್ಲಿ ಕೂರಲಾರದೇ, ನಿಂತಲ್ಲಿ ನಿಲ್ಲಲಾರದಂತೆ ಸತಾಯಿಸಿಬಿಟ್ಟಿತು ಈ ಖಾಯಿಲೆ. ಈಗ ಮತ್ತೆ ಚಿಕಿತ್ಸೆ ಆರಂಭಿಸಿ ಖಾಯಿಲೆ ಹತೋಟಿಗೆ ಬಂದಿದೆ. ಮಾನಸಿಕ ಒತ್ತಡದಿಂದಲೇ ಈ ಸಮಸ್ಯೆ ಇಷ್ಟರಮಟ್ಟಿಗೆ ಹೆಚ್ಚಾಯ್ತು ಎಂದಿದ್ದಾರೆ ಇವರಿಗೆ ಚಿಕಿತ್ಸೆ ನೀಡುತ್ತಿರುವ ಚರ್ಮರೋಗ ತಜ್ಞ ಡಾ ಗಿರೀಶ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ