ಬೆಳಗಾವಿ: ರಾಜ್ಯದಲ್ಲಿ ಬಹುನಿರೀಕ್ಷೆಯ ಸಂಪುಟ ವಿಸ್ತರಣೆಗಾಗಿ ಬಿಜೆಪಿ ನಾಯಕರು ಕಾದು ಕುಳಿದಿದ್ದಾರೆ. ಅದರಲ್ಲಿಯೂ ಸಚಿವ ಸ್ಥಾನಕ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಾ ಸಚಿವಸ್ಥಾನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷಗಳು ಗಜಪ್ರಸವದಂತೆ ಆಗಿರುವ ಈ ಸಂಪುಟ ವಿಸ್ತರಣೆಯನ್ನು ಅಸ್ತ್ರವಾಗಿ ಪರಿಗಣಿಸುವ ಹಿನ್ನಲೆ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ನಾಯಕರು ಯಾರೇ ಆಗಲಿ ಬಹಿರಂಗವಾಗಿ ಮಾತನಾಡದಂತೆ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಮಾತನಾಡಿದಲ್ಲಿ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ ಎಂಬ ಸಂದೇಶ ರವಾನೆಯಾಗಿದೆ. ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಶಾಸಕ ಅರವಿಂದ್ ಲಿಂಬಾವಳ, ಈ ವಿಚಾರ ತಿಳಿಸಿದರು. ಸಂಪುಟ ವಿಸ್ತರಣೆಯಲ್ಲಿ ಯಾರ ಸಚಿವರಾಗಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿಲ್ಲ.ಸಿಎಂ ಕೇಂದ್ರ ನಾಯಕರ ಜತೆಗೆ ಚರ್ಚೆ ಮಾಡಿ ಮಂತ್ರಿ ಮಂಡಲದ ವಿಸ್ತರಣೆ ಬಗ್ಗೆ ದಿನಾಂಕ ನಿಗದಿ ಮಾಡುತ್ತಾರೆ. ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಸಾರ್ವಜನಿಕವಾಗಿ ಮಾತನಾಡದಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ಬಹಿರಂಗ ಮಾತನಾಡಿದರೆ ಪಕ್ಷ ಗಂಭೀರ ತೆಗೆದುಕೊಳ್ಳಲಿದೆ ಎಂದರು.
ಸಭೆಯಲ್ಲಿ ನಾಲ್ಕಾರು ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಸಭೆಯಲ್ಲಿ ಉಪಚುನಾವಣೆಗಳ ಕುರಿತು ಚರ್ಚೆಯಾಗಿದೆ. ಅದರಲ್ಲಿಯೂ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಆಡಳಿತದಲ್ಲಿರಬೇಕು. ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಸಬಲಗೊಳಿಸಲು ಈಗಾಗಲೇ ಗ್ರಾಮಸ್ವರಾಜ್ ನಡೆಸಲಾಗಿದ್ದು, 6 ತಂಡಗಳಲ್ಲಿ ಗ್ರಾಮ ಸ್ವರಾಜ್ ತಂಡಗಳ ಸಮಾವೇಶ ನಡೆಯಲಿದ್ದು, 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದರು.
ಬಿಜೆಪಿ ಕಾರ್ಯಕಾರಿಣಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದ್ದು, ಲವ್ ಜಿಹಾದ್, ಗೋ ಹತ್ಯೆ ನಿಷೇಧ ಬಲವಾದ ಕಾನೂನು ತರಲು ಚರ್ಚಿಸಲಾಗಿದೆ. ಪ್ರೀತಿಸುವುದು ತಪ್ಪಲ್ಲ, ಮದುವೆ ಆಗೋದು ತಪ್ಪಲ್ಲ. ಆದರೆ, ಪ್ರೀತಿಯ ಹೆಸರಿನಲ್ಲಿ ನಾಟಕವಾಡಿ ಮದುವೆ ಆಗಿ. ನಂತರ ಉಗ್ರವಾದ ಚಟುವಟಿಕೆ ತಳ್ಳುವುದು. ತಪ್ಪು ಎಂದರು
ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ ನಾಯಕ ಪ್ರಲ್ಹಾದ್ ಜೋಷಿ ಈ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದರು. ಸಭೆಯಲ್ಲಿ ಗೋ ಹತ್ಯೆ, ಲವ್ ಜಿಹಾದ್ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದ ಅರುಣ್ ಸಿಂಗ್
ನೂತನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಯಶಸ್ವಿಯಾಗಿದೆ. ಸಭೆ ಬಳಿಕ ಮಾತನಾಡಿರುವ ರಾಜ್ಯ ಉಸ್ತುವಾರಿ, ಸರ್ಕಾರದ ಸಾಧನೆಯನ್ನು ಪಕ್ಷದ ಕಾರ್ಯಕರ್ತರಿಗೆ ತಲುಪಿಸಲು ಈ ಸಭೆ ನಡೆಸಲಾಗಿದೆ. ರಾಜ್ಯ ಸಂಪುಟ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ಜತೆಗೆ ಚರ್ಚೆ ನಡೆಸಲಿದ್ದು, ಚರ್ಚೆ ಬಳಿಕ ನಿರ್ಧಾರ ಮಾಡಲಿದ್ದೇವೆ. ವರಿಷ್ಠರಿಂದ ತಂದಿರೋ ಸಂದೇಶದ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗಿದ್ದು, ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಗ್ರಾಮ ಸ್ವರಾಜ್ ಸಮಾವೇಶ ಯಶಸ್ವಿಯಾಗಿದೆ. ಪ್ರತಿ ತಿಂಗಳು ಕಾರ್ಯಕಾರಿಣಿ, ಕೋರ್ ಕಮಿಟಿ ಸಭೆ ನಡೆಯುತ್ತದೆ. ಪ್ರತಿ ತಿಂಗಳು ಸಭೆ ನಡೆಯುತ್ತಿರುವುದರಿಂದ ಯಾವುದೇ ವಿಶೇಷ ಇಲ್ಲ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ